ತಮಿಳುನಾಡು : ಕೆಲ ವಾರಗಳ ಹಿಂದಷ್ಟೇ ಗರ್ಭಿಣಿ ಆನೆಯೊಂದಕ್ಕೆ ಸ್ಪೋಟಕ ತುಂಬಿದ್ದ ಹಣ್ಣು ಕೊಟ್ಟು ಸಾಯಿಸಲಾಗಿತ್ತು.
ಈ ಘಟನೆಯ ನೋವು ಮನದಿಂದ ಮರೆಯಾಗುವ ಮುನ್ನ ತಮಿಳುನಾಡಿನಲ್ಲಿ ಆನೆಯೊಂದನ್ನು ಬೆಂಕಿಯಿಟ್ಟು ಸಾಯಿಸಲಾಗಿದೆ.
ಮಾಸಿನಗುಡಿಯ ರೆಸಾರ್ಟ್ ಒಂದರ ಬಳಿ ಆಹಾರ ಹುಡುಕುತ್ತಾ ಬಂದ ಆನೆಗೆ ಮೂವರ ಗುಂಪೊಂದು ಚಿತ್ರಹಿಂಸೆ ನೀಡಿದ. ಇದಾದ ಬಳಿಕ ಆನೆಗೆ ಬೆಂಕಿ ಹಚ್ಚಿದ್ದಾರೆ.
ಆನೆಯನ್ನು ಓಡಿಸುವ ಸಲುವಾಗಿ ಬೆಂಕಿ ಹಚ್ಚಿದ ಟೈಯರ್ ಅನ್ನು ಆನೆಯತ್ತ ಎಸೆದಿದ್ದಾರೆ. ಆನೆಯನ್ನು ಭಯಗೊಳಿಸಲು ಎಸೆದ ಟಯರ್ ಆನೆಯ ಕಿವಿಗೆ ಸಿಕ್ಕಿ ಹಾಕಿಕೊಂಡಿದೆ.
ದುಷ್ಕರ್ಮಿಗಳು ಎಸೆದ ಬೆಂಕಿಯುಂಡೆ ಆನೆಯ ಕೂದಲಿಗೆ ಹತ್ತಿಕೊಂಡಿದೆ. ಬೆಂಕಿಯ ಉರಿ ತಾಳಲಾರದ ಆನೆ ದಿಕ್ಕು ಕಾಣದೆ ಓಡಲಾರಂಭಿಸಿದೆ. ಮಾತ್ರವಲ್ಲದೆ ಬೆಂಕಿ ನಂದಿಸುವ ಸಲುವಾಗಿ ಸಿಕ್ಕಿ ಸಿಕ್ಕ ಮರಗಳಿಗೆ ದೇಹವನ್ನು ಉಜ್ಜಿದೆ. ಈ ವೇಳೆ ಬೆಂದು ಹೋಗಿದ್ದ ಚರ್ಮ ಕಿತ್ತು ಬಂದಿದೆ.
ಈ ಘಟನೆ ನಡೆದ ಕೆಲ ದಿನಗಳ ಬಳಿಕ ಮಾಸಿನಗುಡಿಯ ಜಲಾಶಯದ ಸಮೀಪ ಆನೆಯ ಶವ ಸಿಕ್ಕಿದೆ. ದೇಹ ಬೆಂದು ಸೆಫ್ಕಿಕ್ ಆಗಿದ್ದ ಆನೆ ಆಹಾರ ನೀರು ಸೇವಿಸಲಾಗದೆ ಉಸಿರು ಚೆಲ್ಲಿತ್ತು.
ಇದಾದ ನಂತರ ತನಿಖೆ ಪ್ರಾರಂಭಿಸಿದ ಅರಣ್ಯಾಧಿಕಾರಿಗಳು ಆನೆ ಸಾಗಿ ಬಂದ ಹಾದಿಯ ಬೆನ್ನು ಹತ್ತಿದ್ದಾರೆ. ಈ ಸಂದರ್ಭಕ್ಕೆ ಸರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿ ತಗುಲಿದ್ದ ಆನೆಯ ವಿಡಿಯೋ ಕೂಡಾ ಸಿಕ್ಕಿದೆ.
ಇದೀಗ ರೆಸಾರ್ಟ್ ಮಾಲೀಕ ಪ್ರಶಾಂತ್ ಹಾಗೂ ಕೆಲಸ ರೇಮಂಡ್ ಡೀನ್ ಎಂಬಾತನನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ರಿಕ್ಕಿ ರಿಯಾನ್ ಬಂಧನಕ್ಕೆ ಬಲೆ ಬೀಸಲಾಗಿದೆ.
ಈ ನಡುವೆ ಪ್ರಾಣ ಬಿಟ್ಟ ಆನೆಯ ಶವ ಸಾಗಿಸುವ ವೇಳೆ ಅರಣ್ಯಾಧಿಕಾರಿಗಳು ಕಣ್ಣೀರಿಟ್ಟ ದೃಷ್ಯ ಕಲ್ಲು ಹೃದಯವನ್ನು ಕರಗಿಸುವಂತಿದೆ.
Discussion about this post