ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಪುನರ್ ರಚಿಸುವ ಅಗತ್ಯವಿದೆ. ದೊಡ್ಡ ಹುದ್ದೆಯ ಅಧಿಕಾರಿಗಳು ಬದಲಾದರೂ ಕೆಳಹಂತದ ಅಧಿಕಾರಿಗಳು ಕೆಲಸ ಮಾಡದಿರುವ ಕಾರಣದಿಂದ ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಿದೆ.
ಠಾಣಾ ಮಟ್ಟದಲ್ಲಿ ಸ್ವಚ್ಛತಾ ಕಾರ್ಯವನ್ನು ಗೃಹ ಇಲಾಖೆ ನಡೆಸದೆ ಹೋದರೆ ಕರಾವಳಿಯಲ್ಲಿ ಅಕ್ರಮಗಳಿಗೆ ಬ್ರೇಕ್ ಹಾಕಲು ಸಾಧ್ಯವಿಲ್ಲ ಅನ್ನುವುದು ಸ್ಪಷ್ಟ.
ಜಾಗ್ವಾರ್ ಕಾರು ಮಾರಾಟ, ಕ್ರಿಕೆಟ್ ಬೆಟ್ಟಿಂಗ್ ದಂಧೆ ಹೀಗೆ ಅನೇಕ ಆರೋಪಗಳು ಪೊಲೀಸರ ಮೇಲೆ ಕೇಳಿ ಬಂದಿದೆ. ಎಲ್ಲಾ ಆರೋಪಗಳು ಇನ್ಸ್ ಪೆಕ್ಟರ್ ಮಟ್ಟದಲ್ಲಿದೆ ಅನ್ನುವುದು ಗಮನಾರ್ಹ ಅಂಶ.
ಇದಕ್ಕೆ ಮತ್ತೊಂದು ಸಾಕ್ಷಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ನಡೆಸಿದ ಕಾರ್ಯಾಚರಣೆ.
ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಅನ್ನುವ ಮಾಹಿತಿ ಆಯುಕ್ತರಿಗೆ ಸಿಕ್ಕ ಹಿನ್ನಲೆಯಲ್ಲಿ ಯಾರಿಗೂ ಮಾಹಿತಿ ನೀಡದ ನಗರ ಪೊಲೀಸ್ ಆಯುಕ್ತರು ಡಿಸಿಪಿ ಹರಿರಾಮ್ ಜೊತೆ ಸ್ಕೂಟರ್ ನಲ್ಲಿ ತಲಪಾಡಿ ಕಡೆಗೆ ತೆರಳಿದ್ದಾರೆ.
ಶನಿವಾರ ಬೆಳಗಿನ ಜಾವ ಸಾಮಾನ್ಯರಂತೆ ಕಾರ್ಯಾಚರಣೆಗಿಳಿದ ಇಬ್ಬರು ತಲಪಾಡಿ ಟೋಲ್ ಗೇಟ್ ಕಡೆ ಹೋಗಿ ಕಾದಿದ್ದಾರೆ. ಉಚ್ಛಿಲ, ಸೋಮೇಶ್ವರ ಕಡೆಯಿಂದ ಲಾರಿಗಳು ಬರುತ್ತದೆ ಅನ್ನುವುದು ಅವರಿಗೆ ಗೊತ್ತಿತ್ತು.
ಈ ವೇಳೆ ಮರಳು ತುಂಬಿ ಬಂದ ಲಾರಿಯನ್ನು ತಡೆದಾಗ, ಅಕ್ರಮ ಲಾರಿಗೆ ಎಸ್ಕಾರ್ಟ್ ಇದ್ದ ಕಾರಿನವರು ಮಾತಿನ ಚಕಮಕಿಗೆ ಮುಂದಾಗಿದ್ದಾರೆ.
ಮಾತ್ರವಲ್ಲದೆ ಟೋಲ್ ಸಿಬ್ಬಂದಿಯೂ ಅಕ್ರಮ ದಂಧೆಕೋರರಿಗೆ ಸಾಥ್ ಕೊಟ್ಟಿದ್ದಾರೆ. ಅವರಿಗೂ ಬಂದಿರೋದು ಕಮಿಷನರ್ ಮತ್ತು ಡಿಸಿಪಿ ಎಂದು ಗೊತ್ತಿರಲಿಲ್ಲ.
ಈ ವೇಳೆ ಉಳ್ಳಾಲ ಠಾಣೆಗೆ ಮಾಹಿತಿ ನೀಡಿ ಕಾರಿನಲ್ಲಿದ್ದ ಚಂದ್ರ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಅಕ್ರಮ ಮರಳುಗಾರಿಕೆಗೆ ಬಳಸಲಾದ ವಾಹನಗಳನ್ನು ಸೀಜ್ ಮಾಡಲಾಗಿದ್ದು.
ಜೊತೆಗೆ ಅಕ್ರಮ ಮರಳುಗಾರಿಕೆ ಮತ್ತು ಪೊಲೀಸರ ಕರ್ತವ್ಯ ಅಡ್ಡಿ ಕುರಿತಂತೆ ಪ್ರಕರಣ ದಾಖಲಿಸಲಾಗಿದೆ.
ಸ್ಥಳೀಯ ಪೊಲೀಸರಿಗೆ ಮಾಹಿತಿ ಇಲ್ಲದೆ ಅಕ್ರಮ ಮರಳುಗಾರಿಕೆ ನಡೆದಿದೆ ಅಂದ್ರೆ ಚಿಕ್ಕಮಕ್ಕಳು ಕೂಡಾ ನಂಬೋದಿಲ್ಲ.
ಶಶಿಕುಮಾರ್ ಆಯುಕ್ತರಾಗಿ ಬಂದ ಬೆನ್ನಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದವರ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ಆಯಾ ಠಾಣೆಯ ಇನ್ಸ್ ಪೆಕ್ಟರ್ ಗಳು ಮಾಡಬಹುದಾದ ಕೆಲಸವನ್ನು ಮಾಡಲು ಆಯುಕ್ತರೇ ಫೀಲ್ಡಿಗೆ ಇಳಿಯಬೇಕಾಯ್ತು.
ಇದೀಗ ಅಕ್ರಮ ಮರಳುಗಾರಿಕೆ ಹಿಡಿಯಲು ಆಯುಕ್ತರಾದವರು ಸ್ಕೂಟರ್ ಹತ್ತೋ ಪರಿಸ್ಥಿತಿ ಬಂದಿದೆ ಅಂದ್ರೆ ಠಾಣೆಗಳ ಕಥೆ ಏನಾಗಿರಬೇಕು.?
Discussion about this post