ಧಾರವಾಹಿ ಲೋಕದ ಮಾಂತ್ರಿಕ ಟಿ ಎನ್ ಸೀತಾರಾಮ್ ಧಾರವಾಹಿಗಳಂದ್ರೆ ವೀಕ್ಷಕರಿಗೆ ಅಚ್ಚು ಮೆಚ್ಚು. ಅವರ ಅದ್ಯಾವ ಸೀರಿಯಲ್ ಜನ ಮೆಚ್ಚುಗೆ ಪಡೆದಿಲ್ಲ ಹೇಳಿ. ಅದರಲ್ಲೂ ಟಿಎನ್ಎಸ್ ಅವರ ಸೀರಿಯಲ್ ಗಳ ಟೈಟಲ್ ಸಾಂಗ್ ಗಳನ್ನು ಜನ ಇಂದಿಗೂ ಗುಣು ಗುಣಿಸುತ್ತಾರೆ ಅಂದ್ರೆ ಅವರ ಧಾರವಾಹಿಗಳ ತಾಕತ್ತು ಹೇಗಿರಬೇಕು ಊಹಿಸಿ.
ಮಗಳು ಜಾನಕಿ ಅನ್ನುವ ಸುಂದರ ಧಾರವಾಹಿಯೊಂದು ಜನರನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಆದರೆ ಕೊರೋನಾ ಮಹಾಮಾರಿಯ ಹೊಡೆತಕ್ಕೆ ಸಿಲುಕಿದ ಮಗಳು ಜಾನಕಿ, ದಾರಿಯನ್ನೂ ಮುಗಿಸಲಿಲ್ಲ,ಊರು ಸೇರಲಿಲ್ಲ. ಬಾಳ ದಾರಿಯಲ್ಲಿ ಇರುಳು ಕವಿದ ಹೊತ್ತಲಿ ಇನ್ನೇನು ಬೆಳಕು ಕಾಣಬೇಕು ಅನ್ನುವಷ್ಟರಲ್ಲಿ ಕೊರೋನಾ ಎಲ್ಲವನ್ನೂ ನುಂಗಿ ಹಾಕಿತು.
ಇದೀಗ ಮತ್ತೆ ಬಂದಿರುವ ಸಿಎಸ್ಪಿ ಖ್ಯಾತಿಯ ಸೀತಾರಾಮ್, ಮತ್ತೆ ಮನ್ವಂತರ ಅನ್ನುವ ಟೈಟಲ್ ನೊಂದಿಗೆ ಹೊಸ ಕಥೆ ಹೊತ್ತು ಬಂದಿದ್ದಾರೆ. ಹಳೆಯ ಮನ್ವಂತರದಲ್ಲಿ ಮರಳಿ ಬಾ ಮನ್ವಂತರವೇ, ಕಂಬನಿಗಳ ಬಳಿಗೆ..ಮರಳಿಸು ಹೊಸ ಚೇತನವ ಬಳಲಿದ ಮನಗಳಿಗೆ ಎಂಬ ಸಾಲುಗಳು ವೀಕ್ಷಕರನ್ನು ಹುಚ್ಚು ಹಿಡಿಸಿತ್ತು. ಮತ್ತೆ ಮನ್ವಂತರಕ್ಕೆ ಎಚ್.ಎಸ್. ವೆಂಕಟೇಶ ಮೂರ್ತಿ ಅದ್ಯಾವ ಸಾಲು ಕಟ್ಟಿಕೊಟ್ಟಿದ್ದಾರೆ ಅನ್ನುವ ಕುತೂಹಲ ಎಲ್ಲರಲ್ಲಿದೆ.
ಈ ನಡುವೆ ಮತ್ತೆ ಮನ್ವಂತರಕ್ಕೆ ನಾಯಕಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ವಿದ್ಯಾಭೂಷಣರ ಪುತ್ರಿ ಮೇಧಾ ವಿದ್ಯಾಭೂಷಣ ಆಯ್ಕೆಯಾಗಿದ್ದಾರೆ.

ತಂದೆಯಂತೆ ಹಾಡುಗಾರ್ತಿಯಾಗಿರುವ ಮೇಧಾ ಅವರಿಗೆ ಬಣ್ಣ ಹಚ್ಚಿದ ಅನುಭವವಿದೆ. ಜೊತೆಗೆ ಮತ್ತೆ ಮನ್ವಂತರದಲ್ಲಿ ನಿರೂಪಕರು, ಕಾರ್ಯಕ್ರಮ ನಿರ್ವಾಹಕರಾಗಿರುವ ಶ್ರೀಮತಿ ರೂಪ ಗುರುರಾಜ್ ಅವರು ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ.

ಇನ್ನು ಭೂಮಿಕಾ ತಂಡದ ಆಸ್ಥಾನ ಕಲಾವಿದೆ ಎಂದೇ ಖ್ಯಾತಿ ಪಡೆದಿರುವ ಮಾಳವಿಕಾ ಅವಿನಾಶ್ ಕೂಡಾ ಬಣ್ಣ ಹಚ್ಚಲಿದ್ದಾರೆ. ಎಂದಿನಂತೆ ಸೀತಾರಾಮ್ ಅವರು ಸಿಎಸ್ಪಿ ಪಾತ್ರದಲ್ಲಿ ವಕೀಲರಾಗಿ ಕಾಣಿಸಿಕೊಳ್ಳಲಿದ್ದಾರೆ.

Discussion about this post