ಬೆಂಗಳೂರು : ಕೊರೋನಾ ಸೋಂಕಿನ ಮೊದಲ ಅಲೆಯ ಸಂದರ್ಭದಲ್ಲಿ ಸೋಂಕಿಗೆ ತುತ್ತಾಗಿದ್ದ ಸಿಎಂ ಯಡಿಯೂರಪ್ಪ, ಕೊರೋನಾದ ಎರಡನೆ ಅಲೆಯ ಸಂದರ್ಭದಲ್ಲಿ ಮತ್ತೊಮ್ಮೆ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕೊರೋನಾ ಲಸಿಕೆ ಪಡೆದಿದ್ದ ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇನ್ನು ಯಡಿಯೂರಪ್ಪ ಪಾಲ್ಗೊಂಡಿದ್ದ ಅದ್ಯಾವ ಕಾರ್ಯಕ್ರಮದಲ್ಲೂ ಕೊರೋನಾ ನಿಯಮಗಳು ಕಟ್ಟು ನಿಟ್ಟಾಗಿ ಪಾಲನೆಯಾಗಿರಲಿಲ್ಲ. ಸಾಮಾಜಿಕ ಅಂತರ ಅನ್ನುವುದನ್ನು ಯಡಿಯೂರಪ್ಪ ಅವರೇ ಮರೆತು ಬಿಟ್ಟಿದ್ದರು. ಅವರ ಜೊತೆಗಿದ್ದವರ ಮಾಸ್ಕ್ ಅನ್ನು ಕಾಟಚಾರಕ್ಕೆ ಅನ್ನುವಂತೆ ಬಳಸುತ್ತಿದ್ದರು.
ಈ ನಡುವೆ ಯಡಿಯೂರಪ್ಪ ಅವರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಅನ್ನುವ ಸುದ್ದಿಯ ಬೆನ್ನಲ್ಲೇ ಅವರ ಜೊತೆಗಿದ್ದವರಿಗೆ ಢವ ಢವ ಶುರುವಾಗಿದೆ. ಕಳೆದ ನಾಲ್ಕು ದಿನಗಳಿಂದ ಯಡಿಯೂರಪ್ಪ ಅವರ ಟ್ರಾವೆಲ್ ಹಿಸ್ಟರಿ ನೋಡಿದರೆ ಆರೋಗ್ಯಾಧಿಕಾರಿಗಳು ಬೆಚ್ಚಿ ಬೀಳುವುದರಲ್ಲಿ ಸಂಶಯವಿಲ್ಲ. ಅವರ ಸಂಪರ್ಕಕ್ಕೆ ಬಂದ ಮಂದಿಯನ್ನು ಟೆಸ್ಟ್ ಮಾಡಿ ಮುಗಿಸುವ ಹೊತ್ತಿಗೆ ಇಡೀ ಆರೋಗ್ಯ ಇಲಾಖೆ ಸುಸ್ತಾಗಿರುತ್ತದೆ. ಮಾತ್ರವಲ್ಲದೆ ಯಡಿಯೂರಪ್ಪ ಅವರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚುವುದೇ ಇದೀಗ ದೊಡ್ಡ ಸವಾಲು ಅನ್ನಿಸಿಕೊಳ್ಳಲಿದೆ.

ಈ ನಡುವೆ ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ಅನ್ನುವ ಸುದ್ದಿ 70 ಸ್ವಾಮೀಜಿಗಳಲ್ಲಿ ಆತಂಕ ಹುಟ್ಟಿಸಿದೆ. ಬೆಳಗಾವಿ ಲೋಕಸಭೆಯ ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ ಗುರುವಾರ 70ಕ್ಕೂ ಹೆಚ್ಚು ಸ್ವಾಮೀಜಿಗಳನ್ನು ಭೇಟಿಯಾಗಿದ್ದರು. ಹುಕ್ಕೇರಿ ಹಿರೇಮಠದಲ್ಲಿ ಈ ಭೇಟಿ ನಡೆದಿದ್ದು, ಶ್ರೀಮಠದಲ್ಲಿ ನಡೆದ ಧನ್ವಂತರಿ ಸುದರ್ಶನ ಹೋಮದಲ್ಲಿ ಪಾಲ್ಗೊಂಡ ಬಳಿಕ ಸ್ವಾಮೀಜಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
Discussion about this post