ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಎರಡನೆ ಅಲೆ ತೀವ್ರವಾಗತೊಡಗಿದೆ. ಈ ನಡುವೆ ಅಪರೂಪದಲ್ಲಿ ಅಪರೂಪ ಅನ್ನುವ ಘಟನೆಗೆ ಕರ್ನಾಟಕ ಸಾಕ್ಷಿಯಾಗಲಿದೆ.
ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ರಾಜ್ಯಪಾಲ ವಿ. ಆರ್. ವಾಲಾ ನೇತೃತ್ವದಲ್ಲಿ ಸರ್ವಪಕ್ಷಗಳ ನಾಯಕರ ಸಭೆ ಇಂದು ನಡೆಯಲಿದೆ. ರಾಜ್ಯಪಾಲರು ಆಡಳಿತ ಮುಖ್ಯಸ್ಥನೇ ಆಗಿದ್ದರೂ ಸಂಪುಟ ಸಭೆ ಅಥವಾ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡ ಉದಾಹರಣೆಗಳಿಲ್ಲ. ಸಂಪುಟ ಸಭೆ ಅಥವಾ ಸರ್ವಪಕ್ಷಗಳ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ರಾಜಭವನಕ್ಕೆ ಸಲ್ಲಿಸುವುದು ಸಂಪ್ರದಾಯ ಅನ್ನುವಂತೆ ನಡೆದುಕೊಂಡು ಬಂದಿದೆ.
ಕರ್ನಾಟಕದಲ್ಲೂ ಅತ್ಯಂತ ಸಂಕಷ್ಟ ಸನ್ನಿವೇಶದಲ್ಲಿ ಸರ್ವಪಕ್ಷ ಸಭೆಗಳು ನಡೆದಿದೆ. ಆದರೆ ರಾಜ್ಯಪಾಲರು ಸಭೆಗೆ ಬರುತ್ತಿರಲಿಲ್ಲ. ಹಂಸರಾಜ್ ಭಾರಧ್ವಾಜ್ ರಂತಹ ರಾಜ್ಯಪಾಲರು ಇದ್ದ ಸಂದರ್ಭದಲ್ಲೂ ಸರ್ವಪಕ್ಷ ಸಭೆ ನಡೆದಿದೆ. ಯಡಿಯೂರಪ್ಪ ಅವರನ್ನು ಇನ್ನಿಲ್ಲದಂತೆ ಕಾಡಿದ ಭಾರಧ್ವಾಜ್ ಕೂಡಾ ಸರ್ವಪಕ್ಷ ಸಭೆ ಬಂದಿರಲಿಲ್ಲ.
ಇದೀಗ ರಾಜ್ಯಪಾಲರು ಸರ್ವಪಕ್ಷ ಸಭೆಗೆ ಬರುತ್ತಿದ್ದಾರೆ ಅಂದ್ರೆ ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಕೈ ತಪ್ಪಿ ಹೋಗಿದೆ. ಹೀಗಾಗಿ ಕೇಂದ್ರವೇ ಕೊರೋನಾ ನಿಯಂತ್ರಣಕ್ಕೆ ಮುಂದಾಗಿದೆ ಎಂದೇ ಅರ್ಥ. ಕೇಂದ್ರ ಗೃಹ ಸಚಿವಾಲಯದಿಂದ ಸೂಚನೆಗಳು ಬಾರದ ಹೊರತು ರಾಜ್ಯಪಾಲರು ಇಂತಹ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿಲ್ಲ. ಅಲ್ಲಿಗೆ ರಾಜ್ಯದಲ್ಲಿ ಆಡಳಿತ ಸರಿ ಇಲ್ಲ, ಸರ್ಕಾರ ನಾವಿಕನಿಲ್ಲದ ನಾವೆಯಂತಾಗಿದೆ. ಸರ್ಕಾರ ಐಸಿಯುನಲ್ಲಿದೆ ಅನ್ನುವ ಪ್ರತಿಪಕ್ಷಗಳ ಆರೋಪ ಸತ್ಯ ಎಂದಾಯ್ತು.

ಹಾಗಾದರೆ ರಾಜ್ಯಪಾಲರು ಸರ್ವಪಕ್ಷದ ಸಭೆ ಬರುವುದು ತಪ್ಪಾ, ಖಂಡಿತಾ ಅಲ್ಲ. ಇದು ಅವರ ಅಧ್ಯಕ್ಷತೆಯಲ್ಲೇ ನಡೆಯಬೇಕಾದ ಸಭೆ. ಆದರೆ ಅತ್ಯಂತ ಸಂಕಷ್ಟ ಕಾಲದಲ್ಲೂ ಈವರೆಗೂ ಬಾರದ ರಾಜ್ಯಪಾಲರು ಈಗ ಬರುತ್ತಿದ್ದಾರೆ ಅಂದ್ರೆ ಸಮ್ ಥಿಂಗ್ ಈಸ್ ರಾಂಗ್.
ಇನ್ನು ಇಂದು ನಡೆಯುವ ಸಭೆಯಲ್ಲಿ ಸರ್ವಪಕ್ಷಗಳ ನಾಯಕರ ಸಲಹೆ ಬಳಿಕ ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಸಾಧ್ಯತೆಗಳಿದೆ. ನಿನ್ನೆ ಅನಧಿಕೃತವಾಗಿ ಬಹಿರಂಗವಾಗಿ ಮಾಹಿತಿಗಳ ಪ್ರಕಾರ, ರಾಜ್ಯಾದ್ಯಂತ ನೈಟ್ ಕರ್ಫ್ಯೂ, ಉದ್ಯಾನ, ಆಟದ ಮೈದಾನ, ಈಜುಕೊಳಗಳಿಗೆ ಬೀಗ, ಹೋಟೆಲ್, ಬಾರ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ, ಶಾಲಾ ಕಾಲೇಜು ಬಂದ್ ಮಾಡಿ ಆನ್ ಲೈನ್ ನಲ್ಲಿ ತರಗತಿ, ಕಟ್ಟು ನಿಟ್ಟು ಕ್ರಮಗಳೊಂದಿಗೆ ಪರೀಕ್ಷೆಗೆ ಅವಕಾಶ, ಐಟಿಬಿಟಿ ಸೇರಿದಂತೆ ಸಾಧ್ಯವಿರುವ ಎಲ್ಲಾ ಕಂಪನಿಗಳಿಗೆ ವರ್ಕ್ ಫ್ರಂ ಹೋಮ್ ಕಡ್ಡಾಯ ಮಾಡುವ ಸಾಧ್ಯತೆಗಳಿದೆ.
Discussion about this post