ನವದೆಹಲಿ : ಭಾರತದಲ್ಲಿ ತಾಂಡವವಾಡುತ್ತಿರುವ ಕೊರೋನಾ ಸೋಲಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇನ್ನಿಲ್ಲದ ಸರ್ಕಸ್ ನಡೆಸುತ್ತಿದೆ. ಆದರೆ ಕೊರೋನಾ ವೈರಸ್ ಪದೇ ಪದೇ ರೂಪಾಂತರಿಯಾಗುತ್ತಿರುವ ಕಾರಣ ಕೊರೋನಾ ವಿರುದ್ಧದ ಹೋರಾಟ ಅಷ್ಟು ಸುಲಭವಾಗಿ ಮುಗಿಯುವಂತಿಲ್ಲ. ಮೊದಲ ಅಲೆಗಿಂತಲೂ ಎರಡನೆ ಅಲೆ ಭೀಕರವಾಗಿದ್ದು, ಮನೆಯಿಂದ ಹೊರಗಡೆ ಕಾಲಿಡಲು ಭಯವಾಗುತ್ತಿದೆ.
ಈ ನಡುವೆ ಭಾರತದ ಪರಿಸ್ಥಿತಿಗೆ ಸ್ಪಂದಿಸಿರುವ ವಿಶ್ವದ 40ಕ್ಕೂ ಹೆಚ್ಚು ರಾಷ್ಟ್ರಗಳು, ಸಹಾಯ ಹಸ್ತ ಚಾಚಿವೆ. ಆದರೆ ಆ ಸಹಾಯದಿಂದ ಕೊರೋನಾ ಅಟ್ಟಹಾಸವನ್ನು ಅಡಗಿಸಲು ಸಾಧ್ಯವೇ ಇಲ್ಲ ಅನ್ನುವಂತಾಗಿದೆ. ದಿನದಿಂದ ದಿನಕ್ಕೆ ರೂಪಾಂತರಿಯಾಗುವ ವೈರಸ್ ಅನ್ನು ಸೋಲಿಸಬೇಕಾದರೆ ಸಮುದಾಯವೇ ಎಚ್ಚೆತ್ತುಕೊಳ್ಳಬೇಕಿದೆ.
ಈ ನಡುವೆ ಭಾರತದ ಸ್ಥಿತಿಯ ಕುರಿತಂತೆ ಕಳವಳ ವ್ಯಕ್ತಪಡಿಸಿರುವ ಅಮೆರಿಕಾದ ಖ್ಯಾತ ಸಾಂಕ್ರಾಮಿಕ ರೋಗ ತಜ್ಞ ಡಾ. ಅಂಥೋನಿ ಫೌಸಿ, ಕೊರೋನಾ ಸುಳಿಯಲ್ಲಿ ಸಿಲುಕಿದವರನ್ನು ಅತ್ಯಂತ ಎಚ್ಚರದಿಂದ ರಕ್ಷಿಸಬೇಕಾಗಿದೆ ಅಂದಿದ್ದಾರೆ.
ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಭಾರತ ಕೊರೋನಾ ವಿರುದ್ಧ ಗೆಲುವನ್ನು ಅಂತ್ಯ ಅಕಾಲಿಕವಾಗಿ ಮತ್ತು ಬೇಗ ಘೋಷಿಸಿತು. ಈ ಕಾರಣದಿಂದಲೇ ಭಾರತದಲ್ಲಿ ಕೊರೋನಾ ಮತ್ತೊಮ್ಮೆ ಅಪಾಯದ ಮಟ್ಟಕ್ಕೆ ಹೋಗಿದೆ. ಹೀಗಾಗಿ ಭಾರತ ಕೊರೋನಾವನ್ನು ಗೆಲ್ಲಬೇಕಾದರೆ ತಾತ್ಕಾಲಿಕ ಲಾಕ್ ಡೌನ್ ಒಂದೇ ಪರಿಹಾರ ಅಂದಿದ್ದಾರೆ.
ಒಂದು ವರ್ಷದ ಹಿಂದೆ ಚೀನಾದಲ್ಲಿ ಕೊರೋನಾ ಸೋಂಕು ದೊಡ್ಡದಾಗಿ ಸ್ಫೋಟಗೊಂಡಿತ್ತು. ಆಗ ಇಡೀ ಚೀನಾವನ್ನು ಲಾಕ್ ಡೌನ್ ಮಾಡಲಾಯ್ತು, ಈ ಮೂಲಕ ಚೀನಾ ಬಹುದೊಡ್ಡ ಅಪಾಯದಿಂದ ಬಲುಬೇಗ ಪಾರಾಯ್ತು ಅಂದಿರುವ ಫೌಸಿ, ಭಾರತಕ್ಕೆ ಉಳಿದಿರುವುದು ಇದೊಂದೇ ಮಾರ್ಗ ಅಂದಿದ್ದಾರೆ.

ಭಾರತವನ್ನು 6 ತಿಂಗಳಿನಷ್ಟು ಧೀರ್ಘಕಾಲ ಲಾಕ್ ಡೌನ್ ಮಾಡುವ ಅವಶ್ಯಕತೆಯಿಲ್ಲ, ಬದಲಾಗಿ ಒಂದು ತಿಂಗಳಿನಷ್ಟು ಕಾಲ ಲಾಕ್ ಡೌನ್ ಮಾಡಿದರೆ ಸಾಕು. ಈ ಮೂಲಕ ವೈರಸ್ ನ ಚೈನ್ ಲಿಂಕ್ ಅನ್ನು ಮುರಿಯಬಹುದು ಅಂದಿದ್ದಾರೆ.
ಇದೇ ವೇಳೆ ಭಾರತದ ಭೀಕರ ಪರಿಸ್ಥಿತಿಯ ಕುರಿತಂತೆ ಮಾತನಾಡಿರುವ ಫೌಸಿ, ಭಾರತದ ರಸ್ತೆಗಳಲ್ಲಿ ತಮ್ಮ ತಂದೆ, ತಾಯಿ, ಒಡಹುಟ್ಟಿದವರನ್ನು ಬದುಕಿಸಲು ಜನ ಆಕ್ಸಿಜನ್ ಗಾಗಿ ಪರದಾಡುತ್ತಿರುವ ಬಗ್ಗೆ ಕೇಳಿದ್ದೇನೆ.
ಇನ್ನು ಕೊರೋನಾ ವಿರುದ್ಧ ಸಮರದಲ್ಲಿ ಗೆಲವು ಸಾಧಿಸಲು ಕೊರೋನಾ ಲಸಿಕೆ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಭಾರತದಂತಹ 1.4 ಬಿಲಿಯನ್ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಕೇವಲ ಶೇ.2ರಷ್ಟು ಜನಸಂಖ್ಯೆಗೆ ಮಾತ್ರ ಲಸಿಕೆಗಳು ತಲುಪಿದೆ. ಹೀಗಾಗಿ ಕೊರೋನಾ ವಿರುದ್ಧದ ಸಮರದಲ್ಲಿ ಭಾರತ ಗೆಲುವು ಸಾಧಿಸಬೇಕಾದರೆ ಹಾದಿ ತುಂಬಾ ಉದ್ದವಿದೆ.
ಲಸಿಕಾ ಉತ್ಪಾದನ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಲಹೆ ಕೊಟ್ಟಿರುವ ಫೌಸಿ, ತ್ವರಿತವಾಗಿ ಲಸಿಕೆ ಜನರಿಗೆ ತಲುಪಬೇಕಾದರೆ ಲಸಿಕಾ ಉತ್ಪಾದನಾ ಪ್ರಮಾಣ ಹೆಚ್ಚಾಗಲೇಬೇಕು. ಭಾರತ ವಿಶ್ವದಲ್ಲೇ ಅತ್ಯಂತ ಹೆಚ್ಚು ಲಸಿಕೆಯನ್ನು ಹೆಚ್ಚಿಸುವ ದೇಶವಾಗಿದೆ. ಹೀಗಾಗಿ ವಿವಿಧ ಕಂಪನಿಗಳ ಜೊತೆಗೆ ಮಾತುಕತೆ, ಒಪ್ಪಂದ ಮಾಡಿಕೊಳ್ಳುವ ಮೂಲಕ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬೇಕು ಅಂದಿದ್ದಾರೆ.
ಆದರೆ ಅಮೆರಿಕಾದಿಂದ ಬಂದಿರುವ ಸಲಹೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸುವ ಲಕ್ಷಣಗಳಿಲ್ಲ. ಈ ಹಿಂದೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಲಾಕ್ ಡೌನ್ ನಮ್ಮ ಕೊನೆಯ ಅಸ್ತ್ರವಾಗಿರಬೇಕು ಅಂದಿದ್ದಾರೆ. ಉಳಿದ ಸಲಹೆಗಳನ್ನು ಜಾರಿಗೊಳಿಸುವ ಸಾಧ್ಯತೆಗಳಿದೆ.
Discussion about this post