ಮೈಸೂರು : KRS ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ದನಿ ಎತ್ತಿರುವ ಸಂಸದೆ ಸುಮಲತಾ ವಿರುದ್ಧ ಈಗಾಗಲೇ ಜೆಡಿಎಸ್ ನಾಯಕರು ಅಪಸ್ವರ ಎತ್ತಿದ್ದಾರೆ. ಇದು ಸಾಕಷ್ಟು ಸಂಶಯಕ್ಕೆ ಕಾರಣ ಮಾಡಿಕೊಟ್ಟಿದೆ. ಅಕ್ರಮ ಗಣಿಗಾರಿಕೆಯಿಂದ ಕೆ ಆರ್ ಎಸ್ ಗೆ ಅಪಾಯವಿದೆ ಎಂದು ಹೇಳಿದ ತಕ್ಷಣ ದಳಪತಿಗಳು ಅದ್ಯಾಕೆ ಉರಿದು ಬಿದ್ರು ಅನ್ನುವುದೇ ಯಕ್ಷ ಪ್ರಶ್ನೆ.
ಇದೀಗ ಸಂಸದೆ ಸುಮಲತಾ ಅವರಿಗೆ ರೈತ ಸಂಘ ಬೆಂಬಲ ವ್ಯಕ್ತಪಡಿಸಿದೆ. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಲಾಶಯದ ಸುತ್ತಮುತ್ತಲಿನ 20 ಮೀಟರ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಸಕ್ರಮ ಗಣಿಗಾರಿಕೆ ಸಂಪೂರ್ಣವಾಗಿ ನಿಲ್ಲಬೇಕು. ರೈತರ ಜೀವನಾಡಿ ಕೆಆರ್ ಎಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಜಲಾಶಯದ ಅಸ್ತಿತ್ವಕ್ಕೆ ಅಪಾಯವಿದೆ ಅನ್ನುವುದು ಸ್ಪಷ್ಟ ಎಂದು ನಾಗೇಂದ್ರ ಹೇಳಿದ್ದಾರೆ.
ಈ ನಡುವೆ ದಳಪತಿಗಳು ಹಿಟ್ ಅಂಡ್ ರನ್ ಮಾಡಿ ಸೈಲೆಂಟ್ ಆಗಿದ್ದಾರೆ. ಹಾಗೇ ನೋಡಿದರೆ ಡ್ಯಾಮ್ ಬಿರುಕು ವಿಚಾರವನ್ನು ಕುಮಾರಸ್ವಾಮಿ ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕಾಗಿತ್ತು. ಆದರೆ ಅವರು ಹಾಗೇ ಮಾಡಿಲ್ಲ. ದಳಪತಿಗಳು ಸುಮ್ಮನಾಗಿದ್ದರೂ ಸಂಸದೆ ಸುಮಲತಾ ಅಂಬರೀಷ್ ಮಾತ್ರ ಮೌನಕ್ಕೆ ಶರಣಾಗಿಲ್ಲ. ಬದಲಾಗಿ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಮುಂದುವರಿಸಿದ್ದಾರೆ.
ಈ ಬಗ್ಗೆ ಬೆಳಗ್ಗೆ ಟ್ವೀಟ್ ಮಾಡಿರುವ ಅವರು ಬೇರೆಯವರಿಗೆ ಗಂಧವನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಗಂಧವಾಗುತ್ತದೆ. ಬೇರೆಯವರಿಗೆ ಕೆಸರನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ ಎಂದು ಕುಟುಕಿದ್ದಾರೆ.
Discussion about this post