ಬೆಂಗಳೂರು : ರಾಜ್ಯದಲ್ಲಿ ಎರಡನೇ ಅಲೆ ಮುಗಿಯಿತು, ಇನ್ನು ಒಂದಿಷ್ಟು ತಿಂಗಳು ನೆಮ್ಮದಿ ಅನ್ನುವ ಹೊತ್ತಿಗೆ ಮೂರನೇ ಅಲೆಯ ಮುನ್ಸೂಚನೆ ಸಿಕ್ಕಿದೆ. ಒಂದನೇ ಅಲೆಯ ಅಂತ್ಯದ ಬಳಿಕ ಎರಡನೇ ಅಲೆಯ ಪ್ರಾರಂಭಕ್ಕೆ ದೊಡ್ಡ ಗ್ಯಾಪ್ ಇತ್ತು. ಆದರೆ ಎರಡನೇ ಅಲೆಯ ಅಂತ್ಯ ಹಾಗೂ ಮೂರನೇ ಅಲೆಯ ಪ್ರಾರಂಭಕ್ಕೆ ಯಾವುದೇ ಗ್ಯಾಪ್ ಕಾಣಿಸುತ್ತಿಲ್ಲ.
ಅದರಲ್ಲೂ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದ್ದು, ಮಂಗಳವಾರ ಒಂದೇ ದಿನ 477 ಸೋಂಕಿತರು ರಾಜಧಾನಿಯಲ್ಲಿ ಪತ್ತೆಯಾಗಿದ್ದಾರೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 8986ಕ್ಕೆ ಏರಿದೆ.
ಈ ನಡುವೆ ಬೆಂಗಳೂರಿನಲ್ಲಿ ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ 141ಕ್ಕೆ ಏರಿದ್ದು, ಚಿಕ್ಕಪೇಟೆಯ ಸಿದ್ದಾಪುರದಲ್ಲಿರುವ ಎಲೆಗಾನ್ಸಿ ಕಂಫರ್ಟ್ ಅಪಾರ್ಟ್ ಮೆಂಟ್ ನ ಒಂದೇ ಕುಟುಂಬದ 5 ಮಂದಿಯಲ್ಲಿ ಸೋಂಕು ಕಂಡು ಬಂದಿದೆ. ಇದೀಗ ಈ ಆಪಾರ್ಟ್ ಮೆಂಟ್ ಅನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿದ್ದು ಸೀಲ್ ಡೌನ್ ಮಾಡಲಾಗಿದೆ.
ಕಳೆದ ವಾರ ಬೆಂಗಳೂರಿನ ಎಂಟು ವಲಯಗಳಲ್ಲಿ ಮೈಕ್ರೋ ಕಂಟೈನ್ಮೆಂಟ್ ಝೋನ್ ಸಂಖ್ಯೆ 100ಕ್ಕಿಂತ ಕಡಿಮೆ ಇತ್ತು, ಆದರೆ ಇದೀಗ ಏಕಾಏಕಿ ಈ ಸಂಖ್ಯೆ ಏರಿಕೆ ಕಾಣುತ್ತಿರುವುದು ಆತಂಕಕಾರಿ. ಅದರಲ್ಲೂ ಮಹಾದೇವಪುರ ವಲಯದಲ್ಲಿ ಅತೀ ಹೆಚ್ಚು ಅಂದ್ರೆ 42 ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳಿವೆ, ಇನ್ನುಳಿದಂತೆ ಪೂರ್ವ ವಲಯ 34, ಬೊಮ್ಮನಹಳ್ಳಿ 27, ದಕ್ಷಿಣ ವಲಯ 13, ಯಲಹಂಕ 11, ಆರ್ ಆರ್ ನಗರ 7, ಪಶ್ಚಿಮ ವಲಯ 5, ದಾಸರಹಳ್ಳಿಯಲ್ಲಿ 2 ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳನ್ನು ಗುರುತಿಸಲಾಗಿದೆ
ಈ ನಡುವೆ ನಾಗರಭಾವಿಯಲ್ಲಿರುವ ನಮ್ಮೂರ ತಿಂಡಿ ಹೊಟೇಲ್ ಸಿಬ್ಬಂದಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ಹೋಟೆಲ್ ಅನ್ನು ಬಂದ್ ಮಾಡಲಾಗಿದ್ದು, ಎಲ್ಲಾ ನೌಕರರನ್ನು ಕ್ವಾರಂಟೈನ್ ಮಾಡಲಾಗಿದೆ.

Discussion about this post