ಶ್ರೀ ಭಾರತೀ ತೀರ್ಥ ಸ್ವಾಮೀಜಿಯವರ ಸನ್ಯಾಸ ಸ್ವೀಕಾರದ ಸ್ವರ್ಣ ಮಹೋತ್ಸವ
ಸಮಾನತೆ, ಅಹಿಂಸೆ, ಏಕತೆಯಂತಹ ಅಂಶಗಳನ್ನು ಪಾಲಿಸುವ ಮೂಲಕ ಶತಶತಮಾನಗಳಿಂದ ಭಾರತ ಜಗತ್ತಿಗೆ ಒಳಗೊಳ್ಳುವಿಕೆ ಏನೆಂಬುದನ್ನು ತೋರಿಸಿಕೊಟ್ಟಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ನಡೆದ ಶೃಂಗೇರಿ ಶಾರದಾ ಪೀಠದ ಪೀಠಾಧಿಪತಿ ಶ್ರೀ ಭಾರತೀ ತೀರ್ಥ ಸ್ವಾಮೀಜಿಯವರ ಸನ್ಯಾಸ ಸ್ವೀಕಾರದ ಸ್ವರ್ಣ ಮಹೋತ್ಸವ ಅಂಗವಾಗಿ ನಡೆದ ನಮಃ ಶಿವಾಯ ಸ್ತೋತ್ರ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವಿಧತೆಯಲ್ಲಿ ಏಕತೆ ಕಾಣುವ ದೇಶ ನಮ್ಮದು. ವಸುದೈವ ಕುಟುಂಬಕಂ ಎಂಬುದು ನಮ್ಮ ಜೀವನಶೈಲಿ, ಮಾನವೀಯತೆಯೇ ಭಾರತೀಯ ಸಂಸ್ಕೃತಿ. ಇಡೀ ಮಾನವೀಯತೆಗೆ ಭಾರತ ನೆಲೆಯಾಗಿದೆ. ಆದಿ ಶಂಕರಾಚಾರ್ಯರು ನಡೆದು ಬಂದ ಹಾದಿಯಲ್ಲಿ ಮತ್ತು ಅವರು ಬೋಧಿಸಿದ ಧಾರ್ಮಿಕ ತತ್ವವನ್ನು ನಾವೆಲ್ಲ ಅನುಕರಣೆ ಮಾಡಬೇಕಿದೆ ಎಂದು ಹೇಳಿದರು.
ಭಾರತ ಹಲವು ಧರ್ಮಗಳ ಜನ್ಮಸ್ಥಳವಾಗಿದೆ ಎಂದು ಉಪರಾಷ್ಟಪತಿ ಜಗದೀಪ್ ಧನ್ಕರ್ ಹೇಳಿದರು. ಧ್ವನಿ : ಜಗದೀಪ್ ಧನ್ಕರ್ ಇಂದು ಅನೇಕ ಸವಾಲುಗಳು ನಮ್ಮ ಮುಂದಿದ್ದು, ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ನಮ್ಮ ಸಂಸ್ಕೃತಿ, ಧರ್ಮದ ಸಂರಕ್ಷಣೆಗೆ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ ಎಂದು ಉಪರಾಷ್ಟ್ರಪತಿ ಹೇಳಿದರು.

ಕಾರ್ಯಕ್ರಮದ ಕುರಿತು ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ್ದ ಸಂದೇಶವನ್ನು ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಅಶೋಕ ಹಾರನಹಳ್ಳಿ ಓದಿದರು. ಜ್ಞಾನಕ್ಕಾಗಿ ಹಾಗೂ ಸಮಾಜದಲ್ಲಿನ ಸಮಸ್ಯೆಗಳ ನಿವಾರಣೆಗೆ ತಮ್ಮ ಜೀವನವನ್ನು ಶಂಕರಾಚಾರ್ಯರು ಮುಡುಪಾಗಿಟ್ಟಿದ್ದರು.
ಈಗ ಅವರ ಪರಂಪರೆಯನ್ನು ಶ್ರೀ ಭಾರತೀತೀರ್ಥ ಸ್ವಾಮಿಜೀ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸನ್ಯಾಸ ಸ್ವೀಕರಿಸಿ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಶ್ರೀ ಭಾರತಿತೀರ್ಥ ಸ್ವಾಮೀಜಿ ಅವರು ಹಲವು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದು, ಕ್ಲಿಷ್ಟಕರ ಆಧ್ಯಾತ್ಮಿಕ ವಿಷಯಗಳನ್ನು ಸಾಮಾನ್ಯ ಜನರಿಗೆ ತಿಳಿಯುವಂತೆ ಪ್ರತಿಪಾದಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಎಲ್ಲರೂ ಸಮಾನರು ಎಂದು ಸಾರಿದ ಜಗತ್ತಿನ ಮೊದಲನೇ ಸಮಾನತೆಯ ಹರಿಕಾರ ಶಂಕರಾಚಾರ್ಯರಾಗಿದ್ದರು. ಎಲ್ಲರಿಗೆ ನಡವಳಿಕೆ ಆದರ್ಶವಾಗಿರುತ್ತದೆ ಆದ್ದರಿಂದ ಸದಾ ಧರ್ಮದ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದು ಶಂಕರಾಚಾರ್ಯರು ಪ್ರತಿಪಾದಿಸಿದ್ದರು.
ತಾವು ನುಡಿದಂತೆ ನಡೆದು, ಶ್ರೀ ಭಾರತಿ ತೀರ್ಥ ಸ್ವಾಮೀಜಿಗಳು ಸಮಸ್ತ ಜನರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಹೇಳಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಭಾರತೀ ತೀರ್ಥರು ಧರ್ಮ ಉಳಿಸುವ ಕೆಲಸ ಮಾಡಿದ್ದಾರೆ. ಭಕ್ತಿ ಸಾಗಾರದಲ್ಲಿ ಶ್ರದ್ಧಾಳುಗಳೆಲ್ಲ ಭಾಗಿಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಶ್ರೀ ಶಂಕರ ಭಾರತಿ ಮಹಾಸ್ವಾಮಿಗಳು ಮತ್ತು ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮಿಗಳು ಉಪಸ್ಥಿತರಿದ್ದರು. ಎರಡು ದಿನಗಳ ರಾಜ್ಯ ಪ್ರವಾಸದ ನಂತರ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಹಾಗೂ ಶ್ರೀಮತಿ ಸುದೇಶ್ ಧನ್ಕರ್, ಅವರನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹೆಚ್.ಎ.ಎಲ್. ವಿಮಾನ ನಿಲ್ದಾಣದಿಂದ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಸಂಸತ್ ಸದಸ್ಯ ಲೆಹರ್ ಸಿಂಗ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.