ಬಿಗ್ ಬಾಸ್ ಸೀಸನ್ 7 ನಿಧಾನವಾಗಿ ಬಿಸಿಯೇರಲಾರಂಭಿಸಿದೆ. ಒಂದೇ ಮನೆಯ ಸದಸ್ಯರಂತೆ ನಾವಿರಬೇಕು ಎಂದು ಪ್ರತಿಜ್ಞೆ ಮಾಡಿದ ಮಂದಿ ಗೆಲ್ಲುವ ಲೆಕ್ಕಚಾರದಲ್ಲಿ ತೊಡಗಿದ್ದಾರೆ. ತಮ್ಮ ಗೆಲುವಿನ ನಾಗಲೋಟಕ್ಕೆ ಅಡ್ಡಿಯಾದವರನ್ನು ಹೊಡೆದುರಿಳಿಸುವುದಕ್ಕೆ ಮಾಸ್ಟರ್ ಪ್ಲಾನ್ ಗಳನ್ನು ತಮಗೆ ಗೊತ್ತಿಲ್ಲದಂತೆ ಹೆಣೆಯಲಾರಂಭಿಸಿದ್ದಾರೆ.
ಅದಕ್ಕೆ ಸಾಕ್ಷಿಯಾಗಿದ್ದು ಸೋಮವಾರ ಅಂದ್ರೆ ಸೀಸನ್ 7 ರ ಎರಡನೇ ದಿನ.ನಾಮಿನೇಷನ್ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ, ಒಂದೇ ದಿನದಲ್ಲಿ ವ್ಯಕ್ತಿಗಳನ್ನು ವ್ಯಕ್ತಿತ್ವವನ್ನು ಅಳೆದ ಸ್ಪರ್ಧಿಗಳು ನಾಮಿನೇಷನ್ ಮಾಡಿದ್ದಾರೆ.
ಈ ಪೈಕಿ ರವಿಬೆಳಗೆರೆ ನಾಮಿನೇಷನ್ ಗೆ ಕೊಟ್ಟ ಕಾರಣಗಳು ಅವರ ವೈಯುಕ್ತಿಕ ಅಭಿಪ್ರಾಯ ಇರಬಹುದು ಆದರೆ ಅದು ಒಳ್ಳೆಯ ಜೋಕ್ ಅನ್ನಿಸಿದ್ದು ಸುಳ್ಳಲ್ಲ.
ರಾಜು ತಾಳಿಕೋಟೆಯವರನ್ನು ನಾಮಿನೇಷನ್ ಮಾಡಿರುವ ಬೆಳಗೆರೆ ಅವರೊಬ್ಬರು ನಶಿಸಿ ಹೋಗಿರುವ ಕಲಾವಿದ. ಈ ಸಮಾಜಕ್ಕೆ ಅಪ್ರಸ್ತುತ ಅನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಗುರುಲಿಂಗ ಸ್ವಾಮೀಜಿ ಕೂಡಾ ಅಪ್ರಸ್ತುತ ಅಂದಿದ್ದು ಮಾತ್ರವಲ್ಲದೆ, ಅವರೊಬ್ಬರು ಸೆಲೆಬ್ರೆಟಿಯೇ ಅಲ್ಲ, ಅವರ ಹೆಸರನ್ನು ನಾನು ಕೇಳಿಯೇ ಇಲ್ಲ ಎಂದು ಟೀಕಿಸಿದ್ದಾರೆ.
ಗುರುಲಿಂಗ ಸ್ವಾಮೀಜಿ ಹೆಸರು ಕೇಳಿಲ್ಲ ಅಂದ್ರೆ ಅದು ಬೆಳಗೆರೆಯವರ ಲೋಕಜ್ಞಾನದ ಕೊರತೆ ಅನ್ನುವುದರಲ್ಲಿ ಸಂಶಯವಿಲ್ಲ. ಅಕ್ಕಿ ಮಠದ ಗುರುಲಿಂಗ ಸ್ವಾಮೀಜಿ ಮಾಡಿರುವ ಕೆಲಸಗಳು ನೂರಾರು. ಮಠದಲ್ಲಿನ ಅನ್ನ ದಾಸೋಹ. ಪರಿಸರ ಕಾಳಜಿ ಮೂಲಕ ಲಿಮ್ಕಾ ರೆಕಾರ್ಡ್ ಹೀಗೆ ಸಮಾಜ ಮುಖಿ ಕಾರ್ಯಗಳು ಒಂದಲ್ಲ, ಎರಡಲ್ಲ.
ಇನ್ನು ಕೃಷ್ಣಾ ನದಿ ನೀರು ಹೋರಾಟ ವಿಚಾರದಲ್ಲೂ ಸ್ವಾಮೀಜಿಯವರು ಸಾಕಷ್ಟು ದುಡಿದಿದ್ದಾರೆ.
ರಾಜು ತಾಳಿಕೋಟೆ ಬಗ್ಗೆ ಅಪ್ರಸ್ತುತ ಅನ್ನುವುದೇ ಅಪ್ರಸ್ತುತ. ಒಂದು ಕಾಲದಲ್ಲಿ ಒಳ್ಳೆಯ ಸಿನಿಮಾಗಳನ್ನು ಕೊಟ್ಟವರು ಅವರು, ಜನರನ್ನು ನಗಿಸಿದವರು. ರಂಗಭೂಮಿಗೆ ತಮ್ಮದೇ ಆದ ಸೇವೆ ಸಲ್ಲಿಸಿದವರು ಹಾಗಿರುವಾಗ ಅವರು ನಶಿಸಿ ಹೋದ ಕಲಾವಿದ ಎಂದು ಪರಿಗಣಿಸುವುದು ಹೇಗೆ.
ಸರಿ ಅವರು ನಶಿಸಿ ಹೋದ ಕಲಾವಿದ. ಹಾಗಾದ್ರೆ ರವಿಬೆಳಗೆರೆ ಕೂಡಾ ನಶಿಸಿ ಹೋದ ಬರಹಗಾರನೇ ಸರಿ. ಒಂದು ಕಾಲದಲ್ಲಿ ಅದ್ಭುತ ಪುಸ್ತಕಗಳನ್ನು ಬರೆದ ಬೆಳಗೆರೆ ಇತ್ತೀಚೆಗೆ ಬರೆದ ಪುಸ್ತಕಗಳನ್ನು ಓದಿ ಓದುಗರೇ ಉಗಿಯುತ್ತಿದ್ದಾರೆ. ಲೀಲಾವತಿಯವರ ಬಗ್ಗೆ ಬರೆದ ಪುಸ್ತಕದಿಂದ ಪ್ರಾರಂಭಿಸಿ ಇತ್ತೀಚೆಗೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಬರೆದ ಪುಸ್ತಕ ಹಾಗೂ ಅದಕ್ಕಿಂತ ಹಿಂದೆ ಬರೆದ ಪುಸ್ತಕಗಳನ್ನು ಎರಡು ತಕ್ಕಡಿಯಲ್ಲಿ ಹಾಕಿ ತೂಗಿ ನೋಡಿ.
ಬೆಳಗೆರೆಯವರ ಬರೆಯುವ ತಾಕತ್ತು ಕಡಿಮೆಯಾಗಿದೆ. ಅಕ್ಷರಗಳ ಜೊತೆಗೆ ಆಟವಾಡುವ ಹಿಡಿತ ತಪ್ಪಿ ಹೋಗಿದೆ. ಓದುಗರನ್ನು ಹಿಡಿದಿಟ್ಟುಕೊಳ್ಳುವ ಕಲೆ ಅವರಲ್ಲಿ ಉಳಿದಿಲ್ಲ. ಅಂದ ಮೇಲೆ ರವಿ ಬೆಳಗೆರೆ ನಿಜಕ್ಕೂ ಅಪ್ರಸ್ತುತರಲ್ಲವೇ.
ಬೆಳಗೆರೆಯವರು ನಾಮೀನೇಟ್ ಮಾಡಿದ ಇಬ್ಬರು ಈ ಸಮಾಜಕ್ಕೆ ಅಪ್ರಸ್ತುತರು ಅನ್ನುವುದಾದರೆ ಬೆಳಗೆರೆ ಕೂಡಾ ಅಪ್ರಸ್ತುತರು ಅನ್ನುವುದರಲ್ಲಿ ಸಂಶಯವಿಲ್ಲ.
Discussion about this post