ಅತ್ಯಂತ ಕಡಿಮೆ ಅವಧಿಯಲ್ಲಿ ಬೆಂಗಳೂರಿನಲ್ಲಿ ನಡೆದ ಅಯ್ಯಪ್ಪ ದೊರೆ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೀಗ ಆರೋಪಿಗಳನ್ನು ವಶಕ್ಕೆ ಪಡೆದಿರುವ ಆರ್ ಟಿ ನಗರ ಪೊಲೀಸರು ಅಲಯನ್ಸ್ ವಿವಿ ಮಾಜಿ ಕುಲಪತಿ ಅಯ್ಯಪ್ಪ ದೊರೆ ಹತ್ಯೆಗೆ 1 ಕೋಟಿ ಸುಪಾರಿ ನೀಡಲಾಗಿತ್ತು ಅನ್ನುವ ಅಂಶವನ್ನು ಪತ್ತೆ ಹಚ್ಚಿದ್ದಾರೆ.
2007ರಲ್ಲಿ ಅಲಯನ್ಸ್ ವಿವಿ ವಿಚಾರವಾಗಿ ಸುಧೀರ್ ಅಂಗೂರ್ ಹಾಗೂ ಮಧುಕರ್ ಅಂಗೂರ್ ನಡುವೆ ಜಗಳ ನಡೆದಿತ್ತು. ಈ ವೇಳೆ, ಅಯ್ಯಪ್ಪ ದೊರೆ ಮಧುಕರ್ ಅಂಗೂರ್ಗೆ ಬೆಂಬಲ ನೀಡಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಸುಧೀರ್ ಅಂಗೂರ್ ಅಯ್ಯಪ್ಪ ದೊರೆ ಹತ್ಯೆಗೆ ಸುಪಾರಿ ನೀಡಿದ್ದರು.
ಸೂರಜ್ ಸಿಂಗ್ ಎಂಬಾತನಿಗೆ 1 ಕೋಟಿ ಕೊಟ್ಟು ಕೊಲೆಗೆ ಸುಪಾರಿ ನೀಡಿದ್ದರು. ಬಳಿಕ ಸೂರಜ್ ಎಂಬಾತ ಗ್ಯಾಂಗ್ ರಚನೆ ಮಾಡಿ ಅಯ್ಯಪ್ಪ ದೊರೆ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದ. ಅಕ್ಟೋಬರ್ 15 ರಂದು ಬೆಂಗಳೂರಿನ ಅಯ್ಯಪ್ಪ ದೊರೆ ನಿವಾಸದ ಬಳಿಯೇ ಅವರನ್ನು ಹತ್ಯೆ ಮಾಡಲಾಗಿತ್ತು.
ಸೂರಜ್ ಸಿಂಗ್ ಅಲಯನ್ಸ್ ವಿವಿಯ ಉದ್ಯೋಗಿ ಎಂದು ಗೊತ್ತಾಗಿದೆ.
ವಿಜಯಪುರ ಜಿಲ್ಲೆ ಸಾಸೂರು ಮೂಲದ ಅಯ್ಯಪ್ಪ, 30 ವರ್ಷಗಳ ಹಿಂದೆ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದಿದ್ದರು. 17 ವರ್ಷಗಳಿಂದ ಗಂಗಾನಗರದಲ್ಲಿ ವಾಸವಿದ್ದರು. ಏಳೆಂಟು ವರ್ಷಗಳ ಹಿಂದೆ ಮೂರ್ನಾಲ್ಕು ವರ್ಷ ಅಲಯನ್ಸ್ ವಿವಿಯಲ್ಲಿ ಕುಲಪತಿಯಾಗಿದ್ದರು. ಹುದ್ದೆಯಿಂದ ನಿರ್ಗಮಿಸಿದ ಬಳಿಕ, ಪತ್ನಿ ಪಾವನಾ ಮೂರು ವರ್ಷ ಕುಲಪತಿಯಾಗಿದ್ದರು.
ಲಿಂಗಾಯಿತ ಪ್ರತ್ಯೇಕ ಧರ್ಮ ಹೋರಾಟ, ಮಹದಾಯಿ ಹೋರಾಟಗಳಲ್ಲಿ ಪಾಲ್ಗೊಂಡಿದ್ದ ಅಯ್ಯಪ್ಪ ದೊರೆ ಯಡಿಯೂರಪ್ಪ ವಿರುದ್ಧ ಶಿವರಾಮ ಕಾರಂತ ಬಡಾವಣೆಯ ಅಕ್ರಮ ಡಿ ನೋಟಿಫಿಕೇಶನ್ ಕುರಿತು ಎಸಿಬಿಗೆ ದೂರು ಸಲ್ಲಿಸಿದ್ದರು.
2018ರಲ್ಲಿ ವಿಧಾನಸಭೆ ಚುನಾವಣೆ ಸಮಯದಲ್ಲಿ ಕಳಸಾ ಬಂಡೂರಿ ಹೋರಾಟಗಾರರನ್ನು ಸೇರಿಸಿ ಜನ ಸಾಮಾನ್ಯ ಪಕ್ಷ ಎಂಬ ಪ್ರಾದೇಶಿಕ ಪಕ್ಷ ಕಟ್ಟಿದದರು. ಮುಗ್ಗೇಬಿಹಾಳ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು.
Discussion about this post