ಭಾರತದಲ್ಲಿ ಚಿನ್ನದ ಮೇಲೆ ಹೂಡಿಕೆ ಉತ್ತಮ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಇದೀಗ ಹೊರ ಬಂದಿರುವ ಸುದ್ದಿಯೊಂದು ಚಿನ್ನ ಭಾರ ಅನ್ನಿಸುವ ಕಾಲ ಸನ್ನಿಹಿತವಾಗಿದೆ.
ನೋಟ್ ಬ್ಯಾನ್ ಮಾಡಿ ಕಪ್ಪು ಹಣದ ಕುಳಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಅಕ್ರಮವಾಗಿ ಚಿನ್ನ ಸಂಗ್ರಹಿಸಿಟ್ಟವರ ಮೇಲೆ ಕಣ್ಣು ನೆಟ್ಟಿದೆ.
ಕಪ್ಪು ಹಣದಿಂದ ಪಾರಾಗುವ ಸಲುವಾಗಿ ಅನೇಕ ಶ್ರೀಮಂತ ಕುಳಗಳು ಕಪ್ಪು ಹಣವನ್ನು ಚಿನ್ನವನ್ನಾಗಿ ಪರಿವರ್ತಿಸಿದ್ದಾರೆ ಅನ್ನುವ ಮಾಹಿತಿ ಸಿಕ್ಕಿರುವ ಹಿನ್ನಲೆಯಲ್ಲಿ ಇದೀಗ ಚಿನ್ನದ ಮೇಲೆ ಕಪ್ಪು ಹಣದ ಸರ್ಜಿಕಲ್ ಕೈಗೊಳ್ಳಲು ನಿರ್ಧರಿಸಿದೆ.
ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ಈ ಸಂಬಂಧ ವರದಿ ಮಾಡಿದ್ದು. ಕಪ್ಪು ಹಣ ಸಕ್ರಮಗೊಳಿಸಲು ಜಾರಿಗೆ ತಂದ ಯೋಜನೆಯ ರೀತಿಯಲ್ಲಿ ದಾಖಲೆ ಇಲ್ಲದ ಚಿನ್ನವನ್ನು ನಿಗದಿ ಪಡಿಸಿದ ತೆರಿಗೆ ಪಾವತಿಸಿ ಸಕ್ರಮಗೊಳಿಸಲು ಮುಂದಾಗಿದೆಯಂತೆ.
ಈ ಯೋಜನೆಗೆ ಕೇಂದ್ರ ಸರ್ಕಾರ ಗೋಲ್ಡ್ ಅಮ್ನೆಸ್ಟಿ ಸ್ಕೀಮ್ ಎಂದು ಹೆಸರಿಡುವ ಸಾಧ್ಯತೆಗಳಿದ್ದು, ಈ ಸ್ಕೀಂ ಪ್ರಕಾರ ದಾಖಲೆ ಇಲ್ಲದ ಚಿನ್ನ ಅಕ್ರಮವಾಗಿದ್ದು ಈ ಚಿನ್ನವನ್ನು ನಿಗದಿತ ಮೊತ್ತ ಕಟ್ಟಿ ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ.
ಗೋಲ್ಡ್ ಅಮ್ನೆಸ್ಟಿ ಸ್ಕೀಂ ಪ್ರಕಾರ ಚಿನ್ನ ಸಂಗ್ರಹಕ್ಕೆ ಒಂದು ಮಿತಿಯನ್ನು ನಿಗದಿ ಪಡಿಸುತ್ತದೆ. ಈ ಪ್ರಮಾಣಕ್ಕಿಂತ ಕಡಿಮೆ ಚಿನ್ನವನ್ನು ಹೊಂದಿದ್ದರೆ ಅದರ ವಿವರವನ್ನು ನೀಡಬೇಕಾಗಿಲ್ಲ.
ಒಂದು ವೇಳೆ ನಿಗದಿತ ಪ್ರಮಾಣಕ್ಕಿಂತ ಜಾಸ್ತಿ ಪ್ರಮಾಣದಲ್ಲಿ ಚಿನ್ನ ಸಂಗ್ರಹವಿದ್ದರೆ ಅದರ ಮೂಲವನ್ನು ನೀಡಬೇಕಾಗುತ್ತದೆ. ಜೊತೆಗೆ ಆಭರಣ ಖರೀದಿಸಿದ ರಸೀದಿಯನ್ನು ನೀಡಬೇಕಾಗುತ್ತದೆ. ಒಂದು ವೇಳೆ ದಾಖಲೆಯಿಲ್ಲದ ಚಿನ್ನವಿದ್ದರೆ ಅದರ ವಿವರವನ್ನು ಸರ್ಕಾರಕ್ಕೆ ತೋರಿಸಬೇಕಾಗುತ್ತದೆ. ನಂತರ ಸರ್ಕಾರ ನಿಗದಿಪಡಿಸಿದ ದಂಡವನ್ನು ತೆತ್ತು ಈ ಚಿನ್ನವನ್ನು ಸಕ್ರಮ ಮಾಡಿಕೊಳ್ಳಬೇಕಾಗುತ್ತದೆ.
ಈ ಯೋಜನೆ ಈ ಹಿಂದೆಯೇ ಪ್ರಕಟವಾಗಬೇಕಾಗಿತ್ತು. ಆದರೆ ಹರಿಯಾಣ ಮತ್ತು ಮಹಾರಾಷ್ಟ್ರದ ಚುನಾವಣೆ ಇದ್ದ ಕಾರಣ ಯೋಜನೆ ಪ್ರಕಟಣೆಯನ್ನು ಮುಂದೂಡಲಾಗಿತ್ತು.
ನೋಟು ಬ್ಯಾನ್ ನಂತರ ಹಣಕಾಸು ವ್ಯವಹಾರಗಳ ಮೇಲೆ ಹದ್ದಿನ ಕಣ್ಣು ನೆಡಲಾಗಿದೆ. ಬ್ಯಾಂಕಿನಿಂದ ನಗದು ಡ್ರಾ ಮಾಡಲು ಮಿತಿಯನ್ನೂ ಹೇರಲಾಗಿದೆ. ಹೀಗಾಗಿ ಆನ್ಲೈನ್ ವ್ಯವಹಾರ ಹೆಚ್ಚಾಗುತ್ತಿದೆ.
ಈ ನಡುವೆ ಕಪ್ಪುಕುಳಗಳ ಮೇಲೆ ಕೇಂದ್ರದ ವಿವಿಧ ತನಿಖಾ ಸಂಸ್ಥೆಗಳು ದಾಳಿ ನಡೆಸಿದಾಗ ಭಾರೀ ಪ್ರಮಾಣದಲ್ಲಿ ಚಿನ್ನ ಪತ್ತೆಯಾಗುತ್ತಿದೆ.
ಅಲ್ಲಿಗೆ ನೋಟು ಕಟ್ಟಿಟುವ ಜಾಗದಲ್ಲಿ ಚಿನ್ನದ ಗಟ್ಟಿ ಬಂದಿ ಕೂತಿದೆ ಅನ್ನುವುದು ಗೊತ್ತಾಗಿದೆ. ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಪ್ಪು ಕುಳಗಳು ಹಳದಿ ಲೋಹದ ಮೇಲೆ ಪ್ರೀತಿ ತೋರಿಸುತ್ತಿರುವ ಹಿನ್ನಲೆಯಲ್ಲಿ ಈ ಯೋಜನೆ ಜಾರಿಗೆ ತರಲಾಗುತ್ತಿದೆಯಂತೆ.
ಇನ್ನು ಚಿನ್ನ ನೀಡುವುದರ ಮೂಲಕವೂ ಭ್ರಷ್ಟಾಚಾರ ನಡೆಯುತ್ತಿದೆ ಅನ್ನುವ ಮಾಹಿತಿಯೂ ಲಭಿಸಿದ್ದು, ಯಾರ ಬಳಿ ಎಷ್ಟು ಚಿನ್ನ ಇದೆ ಅನ್ನುವ ಮಾಹಿತಿ ಸರ್ಕಾರದ ಬಳಿ ಇಲ್ಲ. ಹೀಗಾಗಿ ಕಾಂಚಾಣದ ಬದಲು ಹಳದಿ ಲೋಹ ಅದಲು ಬದಲಾಗುತ್ತಿದೆ. ಈ ಕಾರಣಕ್ಕಾಗಿ ಕಪ್ಪು ಕುಳಗಳು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಸಂಗ್ರಹಿಸುತ್ತಿದ್ದಾರೆ.
ಅದಕ್ಕೆ ಸಾಕ್ಷಿ ಅನ್ನುವಂತೆ ರಾಜಕಾರಣಿಗಳು ಮತ್ತು ಸರ್ಕಾರಿ ಉದ್ಯೋಗಿಗಳ ಮೇಲೆ ದಾಳಿ ನಡೆದಾಗ ಕೆಜಿಗಟ್ಟಲೇ ಚಿನ್ನ ದೊರಕಿದೆ. ಹೀಗಾಗಿಯೇ ಅಕ್ರಮವಾಗಿ ಬಂದಿರುವ ಚಿನ್ನದ ಮೇಲೆ ನಿಗಾ ಇಡಲು ಕೇಂದ್ರ ಸರ್ಕಾರ ಚಿನ್ನಕ್ಕೆ ತೆರಿಗೆ ಹೇರಲು ಮುಂದಾಗುತ್ತಿದೆ.
ಈಗಾಗಲೇ ವ್ಯಕ್ತಿಯೊಬ್ಬ ಎಷ್ಟು ಚಿನ್ನ ಹೊಂದಿಬಹುದು ಅನ್ನುವ ಕಾನೂನಿದೆ. ಆದರೆ ಕೇಂದ್ರ ಸರ್ಕಾರ ಅದೇ ಪ್ರಮಾಣದಲ್ಲಿ ಚಿನ್ನ ಸಂಗ್ರಹಿಸಲು ಅವಕಾಶ ನೀಡುತ್ತದೆಯೋ ಅಥವಾ ಅದನ್ನು ಕಡಿತಗೊಳಿಸುತ್ತದೆಯೋ ಅನ್ನುವುದು ಕುತೂಹಲ. ಒಂದು ವೇಳೆ ಈಗಿರುವ ಪ್ರಮಾಣದಲ್ಲಿ ಚಿನ್ನ ಹೊಂದಬಹುದು ಅನ್ನುವುದಾದರೆ ಮಧ್ಯಮ ವರ್ಗದ ಮಂದಿ ಚಿಂತಿಸುವ ಅಗತ್ಯವಿಲ್ಲ.
ನೀವೆಷ್ಟು ಚಿನ್ನ ಹೊಂದಬಹುದು…
ಇದ್ಯಾಕೋ ಆಯ್ತು ಅನ್ನಿಸಬಹುದು. ಆದರೆ ಮಧ್ಯಮ ವರ್ಗದ ಮಂದಿಗೆ ಈ ಆದೇಶ ಭಾರವೆನಿಸಲಾರದು ಅನ್ನುವ ಭರವಸೆ ಇದೆ. ಆದರೂ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮ ಚಿನ್ನ ಪ್ರಿಯ ಭಾರತೀಯರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಗಳಿದೆ. ಕೆಲವೊಂದುಲ ಜಾತಿ ಧರ್ಮಗಳಲ್ಲಿ ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಚಿನ್ನವೇ ಗೌರವವನ್ನು ಅಳೆದು ತೂಗುವ ಮಾನದಂಡವಾಗಿರುತ್ತದೆ.
ಕಪ್ಪು ಕುಳಗಳ ಮೇಲೆ ಕೈಗೊಳ್ಳುತ್ತಿರುವ ಕ್ರಮವೇನೋ ಚೆನ್ನಾಗಿದೆ. ಆದರೆ ಇದರಿಂದ ಮಧ್ಯಮ ವರ್ಗ ಕೂಡಾ ಸಂಕಷ್ಟಕ್ಕೆ ಸಿಲುಕುತ್ತಿದೆ. ಹಣ ವರ್ಗಾವಣೆಗೆ ಡಿಜಿಟಲ್ ಮಾರ್ಗವನ್ನು ಅವಲಂಭಿಸುವಂತೆ ಕೇಂದ್ರ ಸರ್ಕಾರ ಒತ್ತಡ ಹೇರುತ್ತಿದೆ. ಆನ್ ಲೈನ್ ಮಾರ್ಗದಲ್ಲೇ ಹಣ ವರ್ಗಾವಣೆ ಮಾಡಿ ಅನ್ನುತ್ತಿದೆ. ಆದರೆ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವ ಖದೀಮರು ಗ್ರಾಹಕರಿಗೆ ಗೊತ್ತಾಗದಂತೆ ಹಣ ಲಪಟಾಯಿಸುತ್ತಿದ್ದಾರೆ. ಗೂಗಲ್ ಪೇ, ಕ್ರೆಡಿಟ್ ಕಾರ್ಡ್ ಗಳಿಂದ ಹಣ ಕದಿಯಲಾಗುತ್ತಿದೆ. ಅದಕ್ಕೊಂದು ಪರಿಹಾರ ಮಾರ್ಗ ಕಂಡು ಹಿಡಿಯದಿದ್ದರೆ ಆನ್ ಲೈನ್ ಬಹು ಜನರಿಗೆ ಪ್ರಿಯವಾಗೋದು ಕಷ್ಟವೇ ಸರಿ.
Discussion about this post