ಮಗು ಅಳುವುದನ್ನು ನಿಲ್ಲಿಸುತ್ತಿಲ್ಲ ಎಂದು ಸಿಟ್ಟಾದ ಮಹಿಳೆಯೊಬ್ಬರು ಹೆತ್ತ ಮಗುವನ್ನೇ ನಾಲೆಗೆ ಎಸೆದು ಕೊಂದ ಘಟನೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಹಳಿಯಾರು ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಕಡೂರು ತಾಲೂಕಿನ ನಿಡಘಟ್ಟ ನಿವಾಸಿ ಕಮಲ ಹಾಗೂ ಆಕೆಯ ಅತ್ತೆ ಮಗುವಿಗೆ ಹುಷಾರಿಲ್ಲ ಎಂದು ತರೀಕೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ತಡರಾತ್ರಿ ಮಗು ಸಿಕ್ಕಾಪಟ್ಟೆ ಅಳುತ್ತಿತ್ತು. ಅದೆಷ್ಟೇ ಸಮಾಧಾನ ಮಾಡಿದರೂ ಮಗು ಅಳು ನಿಲ್ಲಿಸಿರಲಿಲ್ಲ. ಈ ವೇಳೆ ಮಗುವನ್ನು ಸಮಾಧಾನ ಮಾಡಿಸಿಕೊಂಡ ಬರುತ್ತೇನೆ ಎಂದು ಅತ್ತೆ ಬಳಿ ಹೇಳಿ ಹೊರ ಹೋಗಿದ್ದರು.
ಆದರೆ 3 ತಿಂಗಳ ಮಗು ತೇಜಸ್ ಜೊತೆ ಹೊರ ಹೋದ ತಾಯಿ ಕಮಲ ತರೀಕೆರೆಯಿಂದ ಸುಮಾರು 4 ಕಿ.ಮೀ ದೂರವಿರುವ ಹಳಿಯಾರು ಗ್ರಾಮಕ್ಕೆ ನಡೆದುಕೊಂಡು ಬಂದಿದ್ದಾರೆ. ಅಲ್ಲಿ ಭದ್ರಾ ನಾಲೆಗೆ ಮಗುವನ್ನು ಎಸೆದು ಮತ್ತೆ ಆಸ್ಪತ್ರೆಗೆ ಹೋಗಿ ಏನು ಗೊತ್ತಿಲ್ಲದಂತೆ ಮಲಗಿಕೊಂಡಿದ್ದಳು.
ಇತ್ತ ನೀರಿನಲ್ಲಿ ಕೊಚ್ಚಿ ಹೋದ ಮಗು ನೀರಿನ ರಭಸಕ್ಕೆ ಮೃತಪಟ್ಟಿತ್ತು. ನೀರಿನೊಂದಿಗೆ ಹರಿದ ಮಗುವಿನ ಶವ ಹಳಿಯಾರು ಗ್ರಾಮದಿಂದ 5-6 ಕಿ.ಮೀ ದೂರವಿರುವ ಬೆಟ್ಟತಾವರೆಕೆರೆ ಗ್ರಾಮದಲ್ಲಿ ಪತ್ತೆಯಾಗಿದೆ.
ಶವ ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಮಗು ಕಮಲ ಅನ್ನುವವರದ್ದು ಎಂದು ಗೊತ್ತಾಗಿದೆ. ಈಗ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಕಮಲಮ್ಮ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆತ್ತ ಮಗುವಿನ ಕೊಲೆಗೆ ಕಾರಣ ಹುಡುಕುತ್ತಿದ್ದಾರೆ.
Discussion about this post