ಸಂಪ್ರದಾಯ ಮುರಿದು ಶಬರಿಮಲೆಯ ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರು ಪ್ರವೇಶ ಮಾಡುವುದಕ್ಕೆ ಇರುವ ನಿರ್ಬಂಧಕ್ಕೆ ಇದೀಗ ಕೇರಳ ಸರ್ಕಾರ ಕೂಡಾ ಪರೋಕ್ಷವಾಗಿ ಸಹಮತ ವ್ಯಕ್ತಪಡಿಸಿದೆ.
ಕಳೆದ ಬಾರಿ ಸುಪ್ರೀಂಕೋರ್ಟ್ ತೀರ್ಪು ನಂತ್ರ ಅಯ್ಯಪ್ಪನ ಸನ್ನಿಧಿ ರಣರಂಗವಾಗಿತ್ತು. ಇದರಿಂದ ಪಾಠ ಕಲಿತಿರುವ ಸರ್ಕಾರ ಅತ್ತ ಸುಪ್ರೀಂಕೋರ್ಟ್ ತೀರ್ಪು ಮತ್ತು ಇತ್ತ ಆಸ್ತಿಕರ ಭಾವನೆಯನ್ನು ಏಕಕಾಲದಲ್ಲಿ ಗೌರವಿಸಲು ಮುಂದಾಗಿದೆ.
ಈ ಸಂಬಂಧ ಮಾತನಾಡಿರುವ ಕೇರಳ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್, ಶಬರಿಮಲೆಗೆ ಹೋಗುವ ಮಹಿಳೆಯರಿಗೆ ಸರ್ಕಾರದಿಂದ ಯಾವುದೇ ಭದ್ರತೆ ನೀಡುವುದಿಲ್ಲ ಅನ್ನುವ ಮೂಲಕ ಶಬರಿಮಲೆಗೆ ಹೋಗುವ ಮಹಿಳೆಯರಿಗೆ ಸರ್ಕಾರದ ಕಡೆಯಿಂದ ಸಹಮತವಿಲ್ಲ ಎಂಬ ಮಾತನ್ನು ಸಚಿವರು ಸ್ಪಷ್ಟಪಡಿಸಿದ್ದಾರೆ.
ಸರ್ಕಾರ ಮಹಿಳೆಯರನ್ನು ಶಬರಿಮಲೆಗೆ ಕರೆದುಕೊಂಡು ಹೋಗುವುದಿಲ್ಲ. ಈ ಹಿಂದೆ ಕೂಡ ಮಹಿಳೆಯರನ್ನು ಸರ್ಕಾರ ಕರೆದುಕೊಂಡು ಹೋಗಿಲ್ಲ. ಇನ್ನು ಮುಂದೆ ಕೂಡ ಕರೆದುಕೊಂಡು ಹೋಗುವುದಿಲ್ಲ. ಶಬರಿಮಲೆ ಕಾರ್ಯಕರ್ತರ ಹೋರಾಟಕ್ಕಿರುವಸ್ಥಳವಲ್ಲ, ಅಲ್ಲಿಗೆ ಹೋಗಲು ಇಚ್ಛಿಸುವ ಮಹಿಳೆಯರು ಸುಪ್ರೀಂ ಕೋರ್ಟ್ ಆದೇಶವನ್ನಿಟ್ಟುಕೊಂಡು ತಮ್ಮ ಜಾಗ್ರತೆಯಲ್ಲಿಯೇ ಹೋಗಬೇಕು ಎಂದು ಸಚಿವರು ಹೇಳಿದ್ದಾರೆ.
ಇದೇ ವೇಳೆ ಮಹಿಳಾ ಕಾರ್ಯಕರ್ತೆ ತೃಪ್ತಿ ದೇಸಾಯಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು ಅವರೆಲ್ಲ ಪ್ರಚಾರಕ್ಕೋಸ್ಕರ ಹೀಗೆ ಮಾಡುತ್ತಾರೆ. ಅವರು ಭಕ್ತಿಯಿಂದ ಶಬರಿಮಲೆಗೆ ಹೋಗುವುದಲ್ಲ, ವೈಯಕ್ತಿಕ ಹಿತಾಸಕ್ತಿಗಾಗಿ ಹೀಗೆ ಮಾಡುತ್ತಾರೆ. ಸರ್ಕಾರ ಇಂಥವರಿಗೆ ಬೆಂಬಲ ಕೊಡುವುದಿಲ್ಲ ಅಂದಿದ್ದಾರೆ.
ಹಾಗಾದ್ರೆ ಕೇರಳ ಸರ್ಕಾರ ಸುಪ್ರೀಂಕೋರ್ಟ್ ತೀರ್ಪನ್ನು ಪಾಲಿಸಿದಂತಾಗುತ್ತದೆಯೇ. ಖಂಡಿತಾ ಹೌದು. ಅಯ್ಯಪ್ಪನ ಮೇಲೆ ನಿಜವಾದ ಭಕ್ತಿ ಉಳ್ಳವರು ಸಂಪ್ರದಾಯ ಮುರಿಯುವುದಿಲ್ಲ ಅನ್ನುವುದು ಸರ್ಕಾರಕ್ಕೆ ಗೊತ್ತಿದೆ. ಒಂದು ವೇಳೆ ನಿಜವಾದ ಮಹಿಳಾ ಆಸ್ತಿಕರು ಶಬರಿಮಲೆಗೆ ಬರುವುದಾಗಿದ್ದರೆ ಕಳೆದ ಅವಧಿಯಲ್ಲಿ ಬರಬೇಕಾಗಿತ್ತು. ಆದರೆ ಕಳೆದ ಬಾರಿ ಬಂದವರೆಲ್ಲಾ ಹೋರಾಟಗಾರರು. ಹೀಗಾಗಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ನಾಳೆ ಕೋರ್ಟ್ ಕೇಳಿದರೂ ಶಬರಿಮಲೆ ಆಸ್ತಿಕರ ಸ್ಥಳ ಹೀಗಾಗಿ ಆಸ್ತಿಕರಿಗೆ ನಾವು ರಕ್ಷಣೆ ಕೊಡಲು ಬದ್ಧ ಅನ್ನುತ್ತದೆ ಸರ್ಕಾರ.
Discussion about this post