ಶಾರ್ಟ್ ಸರ್ಕ್ಯೂಟ್ ನಿಂದ ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಭಜರಂಗಿ -2 ಚಿತ್ರದ ಸೆಟ್ ಬೆಂಕಿಗೆ ಆಹುತಿಯಾಗಿದೆ.
ಸೆಟ್ ಆಕಸ್ಮಿಕವಾಗಿ ಸುಟ್ಟಿದ್ದರಿಂದ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಗುರುವಾರ ಬೆಳಿಗ್ಗೆ ಅಕಸ್ಮಿಕ ಬೆಂಕಿ ಕಾಣಿಸಿಕೊಂಡ ತಕ್ಷಣ ಕಲಾವಿದರೆಲ್ಲಾ ಹೊರ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಆಗ್ನಿಶಾಮಕ ಸಿಬ್ಬಂದಿ ಧಾವಿಸಿ 4 ಗಂಟೆಗಳ ಕಾಲ ಶ್ರಮಿಸಿ ಬೆಂಕಿ ನಂದಿಸಿದ್ದಾರೆ.
ಮಕರ ಸಂಕ್ರಾಂತಿ ಹಬ್ಬದ ದಿನವೇ ಭಜರಂಗಿ-2 ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಆದರೆ ಇದೀಗ ಅಗ್ನಿ ಆಕಸ್ಮಿಕ ಸಂಭವಿಸಿದ ಕಾರಣದಿಂದ ಚಿತ್ರತಂಡ ಆಂಜನೇಯನ ಆಕ್ರೋಶಕ್ಕೆ ತುತ್ತಾಯಿತೇ ಅನ್ನುವ ಮಾತುಗಳು ಕೇಳಿ ಬರುತ್ತಿದೆ.
ಇನ್ನು ಅವಘಡ ಕುರಿತಂತೆ ಪ್ರತಿಕ್ರಿಯಿಸಿರುವ ಶಿವರಾಜ್ ಕುಮಾರ್, ಭಜರಂಗಿಯೇ ನಮ್ಮನ್ನು ಕಾಪಾಡಿದ್ದಾನೆ. ಗ್ಯಾಸ್ ಓಪನ್ ಆಗಿದ್ದರೆ ದೊಡ್ಡ ಅವಘಡ ಸಂಭವಿಸುತ್ತಿತ್ತು, ಆದರೆ, ಸೆಟ್ ಗೆ ಗೋಣಿಚೀಲ ಬಳಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.
ಚಿತ್ರೀಕರಣದಲ್ಲಿ ತಾವು ಸೇರಿ 15 ರಿಂದ 20 ಜನ ಮುಖ್ಯ ಕಲಾವಿದರು ಹಾಗೂ ಸರಿಸುಮಾರ 200 ಜನ ಸಹಾಯಕ ಕಲಾವಿದರು ಇದ್ದರು. ಆದರೆ, ಯಾರೊಬ್ಬರಿಗೂ ಯಾವುದೇ ಹಾನಿ ಆಗಿಲ್ಲ, ಅನಾಹುತನೂ ಆಗಿಲ್ಲ. ಇಂದು ಭಜರಂಗಿಯೇ ನಮ್ಮನ್ನು ಕಾಪಾಡಿದ್ದಾನೆ ಅಂದಿದ್ದಾರೆ.
Discussion about this post