ಬೆಂಗಳೂರು : ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಬೆಂಗಳೂರಿನ ಎಚ್. ಎಸ್. ಆರ್ ಬಡಾವಣೆಯಲ್ಲಿರುವ ತಮ್ಮ ಬಂಗಲೆಯನ್ನು ಮಾರಾಟ ಮಾಡಿರುವ ಸುದ್ದಿ ಬಂದಿದೆ.
ಈ ಬಂಗಲೆಯನ್ನು ನಟ ರಿಷಬ್ ಶೆಟ್ಟಿ ಖರೀದಿ ಮಾಡಿದ್ದಾರೆ ಎನ್ನಲಾಗಿದ್ದು, ಕೊರೋನಾ ಲಾಕ್ ಡೌನ್ ಗೂ ಮುನ್ನವೇ ರಿಜಿಸ್ಟೇಷನ್ ಪ್ರಕ್ರಿಯೆಗಳು ಮುಕ್ತಾಯಗೊಂಡಿದೆ,
ಸುಮಾರು ಹತ್ತೂವರೆ ಕೋಟಿ ಮೊತ್ತದ ವ್ಯವಹಾರ ಇದಾಗಿದೆ ಎನ್ನಲಾಗಿದೆ.
ಇತ್ತೀಚೆಗೆ ಸಾಲದ ಸುಳಿಯಲ್ಲಿ ಸಿಲುಕಿ ದ್ವಾರಕೀಶ್ ಸುದ್ದಿಯಲ್ಲಿದ್ದರು.

ವಿತರಕ ಜಯಣ್ಣ ಅವರಿಂದ ದ್ವಾರಕೀಶ್ ಪುತ್ರ ಯೋಗಿ ಹಣ ಪಡೆದು ಹಿಂತಿರುಗಿಸದ ಕಾರಣಕ್ಕೆ ಸದ್ದು ಮಾಡಿದ್ದರು.
ಈ ಸಂದರ್ಭದಲ್ಲಿ ಜಯಣ್ಣ ಕಡೆಯವರು ದ್ವಾರಕೀಶ್ ಮನೆಗೆ ಬಂದು ಗಲಾಟೆ ಕೂಡಾ ಮಾಡಿದ್ದರು ಎಂದು ದ್ವಾರಕೀಶ್ ಆರೋಪಿಸಿದ್ದರೂ ಕೂಡಾ.
ಈ ಸಾಲ ತೀರಿಸುವ ಸಲುವಾಗಿ ದ್ವಾರಕೀಶ್ ಬಂಗಲೆ ಮಾರಿದ್ದಾರೆ ಎನ್ನಲಾಗಿದ್ದು , ಜನಪ್ರಿಯತೆಯ ಉತ್ತುಂಗದಲ್ಲಿದ್ದ ವೇಳೆ ಈ ಮನೆಯನ್ನು ಖರೀದಿಸಿದ್ದರು.
ಮನೆ ಮಾರಾಟದ ಬಗ್ಗೆ ಮಾತನಾಡಿರುವ ದ್ವಾರಕೀಶ್, ಮನೆ ಮಾರಿದ್ದು ಹೌದು, ಅದೇನು ಹೊಸದಲ್ಲ, ಹಿಂದೆಯೂ ಸಾಕಷ್ಟು ಮನೆ ಮಾರಿದ್ದೇನೆ. ಚೆನ್ನಾಗಿದ್ದ ವೇಳೆ ಮನೆ ಖರೀದಿಸುತ್ತೇನೆ. ಸಂಕಷ್ಟ ಬಂದಾಗ ಮಾರಾಟ ಮಾಡುತ್ತೇನೆ.
ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಅಂದಿದ್ದಾರೆ.
ಹಾಗಾದ್ರೆ ರಿಷಬ್ ಶೆಟ್ಟಿ ಈ ಮನೆಯನ್ನು ಖರೀದಿಸಿದ್ಯಾಕೆ ಅನ್ನುವ ಪ್ರಶ್ನೆಗೂ ಉತ್ತರ ಸಿಕ್ಕಿದ್ದು, ರಿಷಬ್ ಶೆಟ್ಟಿಯವರ ಜಾತಕಕ್ಕೂ ಈ ಮನೆಯ ವಾಸ್ತುವಿಗೂ ಸಿಕ್ಕಾಪಟ್ಟೆ ಹೊಂದಿ ಬರುತ್ತದೆಯಂತೆ. ಹೀಗಾಗಿ ಯಾವುದೇ ಚೌಕಾಸಿ ಇಲ್ಲದೆ ವ್ಯವಹಾರ ಮುಕ್ತಾಯಗೊಂಡಿದೆಯಂತೆ.
Discussion about this post