ಬೆಂಗಳೂರು : ಕೊರೋನಾ ನಿಯಂತ್ರಣ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಎಡವಿದೆ. ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ ರಾಜ್ಯಕ್ಕೆ ರಾಷ್ಟ್ರಪತಿ ಆಡಳಿತ ಬೇಕು ಅನ್ನುವ ಪ್ರತಿಪಕ್ಷಗಳ ಕೂಗಿನಲ್ಲಿ ಸತ್ಯಾಂಶವಿದೆ. ಎರಡನೆ ಅಲೆ ಬರಲಿದೆ ಅನ್ನುವುದು ಗೊತ್ತಿದ್ದರೂ ನಿರ್ಲಕ್ಷ್ಯ ವಹಿಸಿದ ಕರ್ಮಕ್ಕೆ ರಾಜ್ಯ ಜನತೆ ಸಂಕಷ್ಟ ಪಡುವಂತಾಗಿದೆ.
ರಾಜ್ಯದಲ್ಲಿ ಬೆಡ್ ಗಳಿಲ್ಲ, ಆಕ್ಸಿಜನ್ ವ್ಯವಸ್ಥೆ ಇಲ್ಲ ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ ವಿಪರೀತವಾಗಿ ಏರುತ್ತಿದೆ. ಸಾವಿನ ಹೆಚ್ಚಾಗಲು ಕಾರಣ ಕೊರೋನಾವಲ್ಲ ಬದಲಾಗಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ. ಇನ್ನು ಸೋಂಕಿತರ ಬಗ್ಗೆ ಕಾಳಜಿ ವಹಿಸಬೇಕಾದ ರಾಜ್ಯ ಸರ್ಕಾರ ಅವರತ್ತ ತಿರುಗಿಯೂ ನೋಡುತ್ತಿಲ್ಲ. ನಿಯಮಗಳ ಪ್ರಕಾರ ಸೋಂಕಿತರ ಆರೋಗ್ಯದ ಮೇಲೆ ಆರೋಗ್ಯ ಸಿಬ್ಬಂದಿ ನಿಗಾ ವಹಿಸಬೇಕು. ಒಂದು ವೇಳೆ ಅವರ ಖಾಸಗಿ ಆಸ್ಪತ್ರೆಗಳ ಸಂಪರ್ಕದಲ್ಲಿದ್ರೆ ಮಾತ್ರ ನಿಗಾ ವಹಿಸೋದಿಲ್ಲ. ಆದರೆ ಕಾಸಿದ್ದವರು ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಾರೆ ಬಡವರು ಏನು ಮಾಡಬೇಕು ಹೇಳಿ. ಒಂದು ವೇಳೆ ಸೋಂಕಿತರ ಆರೋಗ್ಯದ ಮೇಲೆ ನಿಗಾ ವಹಿಸಿದ್ದರೆ ಸಾವಿನ ಸಂಖ್ಯೆ ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ.
ಇದಕ್ಕೊಂದು ನಿದರ್ಶನ ನಟಿ ಅನುಪ್ರಭಾಕರ್. ತಮಗೆ ಸೋಂಕು ತಗುಲಿದರೂ ಬಿಬಿಎಂಪಿ, ಆರೋಗ್ಯ ಇಲಾಖೆ ಹೇಗೆ ನಡೆದುಕೊಂಡಿದೆ ಅನ್ನುವುದನ್ನು ಹೇಳುವ ಮೂಲಕ ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಬೆತ್ತಲು ಮಾಡಿದ್ದಾರೆ.
ಇದೇ ತಿಂಗಳ 17 ರಂದು ಅನು ಪ್ರಭಾಕರ್ ಕೊರೋನಾ ಸೋಂಕಿತರು ಅನ್ನುವುದು ಗೊತ್ತಾಗಿದೆ. ನಿಯಮಗಳ ಪ್ರಕಾರ ಅನುಪ್ರಭಾಕರ್ ಅವರ ಕೊರೋನಾ ವರದಿ ಸಂಬಂಧ ಪಟ್ಟ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಆಗಬೇಕು. ಜೊತೆಗೆ BU ನಂಬರ್ ಬರಬೇಕು. BU ನಂಬರ್ ಸಿಗದೇ ಹೋದರೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಹೋದರೂ ಸೇರಿಸಿಕೊಳ್ಳುವುದಿಲ್ಲ.
ಅಷ್ಟೇ ಯಾಕೆ ಸೋಂಕಿತರ ಮೇಲೆ ನಿಗಾ ವಹಿಸುವ ಸಲುವಾಗಿ ಸೋಂಕಿತರಿಗೆ ಕರೆ ಮಾಡಿ ಬಿಬಿಎಂಪಿ ಸಿಬ್ಬಂದಿ ವಿಚಾರಿಸಬೇಕು, ಯೋಗ ಕ್ಷೇಮ ತಿಳಿದುಕೊಳ್ಳಬೇಕು. ಆದರೆ ಅನು ಪ್ರಭಾಕರ್ ವಿಚಾರದಲ್ಲಿ ಇದ್ಯಾವುದು ನಡೆದೇ ಇಲ್ಲ. ಅನುಪ್ರಭಾಕರ್ ಅಂತಹವರಿಗೆ ಹೀಗಾಗಿದೆ ಅಂದ್ರೆ ಜನ ಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು.
BU ನಂಬರ್ ಸಿಗದ ಕಾರಣಕ್ಕೆ, ಸಕಾಲದಲ್ಲಿ ಕೊರೋನಾ ರಿಪೋರ್ಟ್ ಸಿಗದೆ ಅದೆಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಅನ್ನುವುದು ಸರ್ಕಾರಕ್ಕೆ ಗೊತ್ತಿದೆ. ಹಾಗಿದ್ದರೂ ಇನ್ನೂ ನಿರ್ಲಕ್ಷ್ಯ ಧೋರಣೆ ಮುಂದುವರಿದಿದೆ ಅನ್ನುವುದಕ್ಕೆ ಅನುಪ್ರಭಾಕರ್ ಘಟನೆಯೇ ಸಾಕ್ಷಿ.
ಇದೀಗ ಅನುಪ್ರಭಾಕರ್ ಆರೋಗ್ಯ ಸಚಿವರಿಗೆ ಟ್ವೀಟ್ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾರೆ, ಅದಕ್ಕೆ ಆರೋಗ್ಯ ಇಲಾಖೆ ಸ್ಪಂದಿಸಿದೆ. ಆದರೆ ಕೆ ಆರ್ ಮಾರುಕಟ್ಟೆಯಲ್ಲಿ ಕೆಲಸ ಮಾಡೋ ರಾಮನಿಗೋ, ಕೃಷ್ಣನಿಗೋ ಟ್ವೀಟ್ ಮಾಡೋದು ಗೊತ್ತಿರೋದಿಲ್ಲ ಅಲ್ವ.
Discussion about this post