ಪುತ್ತೂರು : 1985ರಲ್ಲಿ ನಡೆದ ಅಂಗಡಿ ಕಳವು ಪ್ರಕರಣದ ಆರೋಪಿಯನ್ನು 36 ವರ್ಷಗಳ ಬಳಿಕ ಬಂಧಿಸುವಲ್ಲಿ ಪುತ್ತೂರು ನಗರ ಪೊಲೀಸರು ( puttur town police) ಯಶಸ್ವಿಯಾಗಿದ್ದಾರೆ. ಹಲವು ವರ್ಷಗಳಿಂದ ಪೊಲೀಸರ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಆರೋಪಿ ಶಿವಮೊಗ್ಗ, ಮಂಗಳೂರು ಎಂದು ಓಡಾಡುತ್ತಿದ್ದ.
1985ರ ಜೂನ್ 25 ರಂದು ಚಿಕ್ಕಮಡ್ನೂರು ಗ್ರಾಮದ ಕೇಪುಳು ಎಂಬಲ್ಲಿ ಅಬ್ದುಲ್ ರಜಾಕ್ ಅವರ ಅಂಗಡಿಗೆ ನುಗ್ಗಿದ್ದ ಲಿಂಗಪ್ಪ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನು ಮೇಲೆ ಬಿಡುಗಡೆ ಪಡೆದಿದ್ದ ಈತ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಹೀಗೆ ಬೇಲ್ ಮೇಲೆ ಬಂದಿದ್ದ ಚಾರ್ವಾಕ ಗ್ರಾಮದ ಕುಂಬ್ಲಾಡಿ ನಿವಾಸಿ ಲಿಂಗಪ್ಪ ಪೂಜಾರಿ ಶಿವಮೊಗ್ಗ ಕಡೆಗೆ ತೆರಳಿ 5 ವರ್ಷಗಳ ಕಾಲ ಅಲ್ಲೇ ಅಟೋ ಚಾಲಕನಾಗಿ ಕೆಲಸ ನಿರ್ವಹಿಸಿದ್ದ. ಬಳಿಕ ತಣ್ಣೀರು ಬಾವಿಗೆ ಬಂದು ರೆಹಮತ್ ಖಾನ್ S/O ಅಮ್ಮು ಸಾಹೇಬ್ ಎಂದು ಹೆಸರು ಬದಲಾಯಿಸಿ ಮುಸ್ಲಿಂ ಹುಡುಗಿಯನ್ನು ಮದುವೆಯಾಗಿದ್ದ. ಬಳಿಕ 29 ವರ್ಷಗಳ ಕಾಲ ತಣ್ಣೀರು ಬಾವಿಯಲ್ಲೇ ವಾಸ್ತವ್ಯ ಹೂಡಿದ್ದ ಈತ ಕಪ್ಪೆ ಚಿಪ್ಪು ವ್ಯಾಪಾರ ಮಾಡಿಕೊಂಡಿದ್ದ.

ಕಳೆದ 3 ವರ್ಷಗಳಿಂದ ಓಶಿಯನ್ ಕಂಪನಿಯಲ್ಲಿ ಕಟ್ಟಡ ನಿರ್ಮಾಣ ಕೆಲಸ ಮಾಡಿಕೊಂಡಿದ್ದ ಲಿಂಗಪ್ಪ ಯಾನೆ ರೆಹಮತ್ ಮುಂಡಗೋಡು, ಹುಬ್ಬಳ್ಳಿ, ಬೆಳಗಾಂ ಎಂದು ಓಡಾಡಿಕೊಂಡಿದ್ದ.
ಯಾವಾಗ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಯ್ತೋ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವನೆ ಆರೋಪಿ ಪತ್ತೆಗೆ ಆದೇಶಿಸಿದ್ದರು. ಈ ಆದೇಶದ ಬಳಿಕ ಎಚ್ಚೆತ್ತುಕೊಂಡ ಪುತ್ತೂರು ನಗರ ಠಾಣಾ ಪೊಲೀಸರು , ಆರೋಪಿ ಮಂಗಳೂರು ವಾಮಂಜೂರಿನ ತಿರುವೈಲು ಗ್ರಾಮಕ್ಕೆ ಬರುವ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ. ಇದೀಗ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
Discussion about this post