ಕೇರಳ : ಪಿಣರಾಯಿ ಸಚಿವ ಸಂಪುಟದಲ್ಲಿ ಆರೋಗ್ಯ ಸಚಿವೆಯಾಗಿರುವ ವೀಣಾ ಜಾರ್ಜ್ ಅವರ ಮುಂದೆ ಸವಾಲುಗಳು ಸಾಲುಗಟ್ಟಿ ನಿಂತಿದೆ. ಶೈಲಜಾ ಟೀಚರ್ ಆರೋಗ್ಯ ಸಚಿವೆಯಾಗಿದ್ದ ಸಂದರ್ಭದಲ್ಲಿ ಕೇರಳದ ಜನತೆಗೆ ಸಿಕ್ಕಾಪಟ್ಟೆ ಹತ್ತಿರವಾಗಿದ್ದರು. ಅವರ ಕಾರ್ಯವೈಖರಿ ಹಾಗೂ ಸರಳತೆ ಕೇರಳದ ಜನತೆಯ ಮನಸ್ಸು ಗೆದ್ದಿತ್ತು.
ಇದೀಗ ಶೈಲಜಾ ಟೀಚರ್ ನಿಭಾಯಿಸಿದ್ದ ಆರೋಗ್ಯ ಖಾತೆಯನ್ನು ಮಾಜಿ ಪತ್ರಕರ್ತೆ, ಅರಣ್ ಮುಲ ಕ್ಷೇತ್ರದ ಶಾಸಕಿ ವೀಣಾ ಜಾರ್ಜ್ ಅವರಿಗೆ ನೀಡಲಾಗಿದೆ. ಪತ್ರಕರ್ತೆಯಾಗಿ, ಸುದ್ದಿ ನಿರೂಪಕಿಯಾಗಿ ಅನುಭವ ಹೊಂದಿರುವ ವೀಣಾ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿ.ಇಡಿ ಓದಿರುವ ಅವರು ಟಿವಿ ವಾಹಿನಿಯೊಂದರಲ್ಲಿ ನಡೆಸಿಕೊಡುತ್ತಿದ್ದ ನಮ್ ಮುನ್ನೋಟ್ಟು ಕಾರ್ಯಕ್ರಮ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು.
ನಾಯಕತ್ವದ ಗುಣ, ಜನರನ್ನು ಹಿಡಿದಿಡುವ ತಾಕತ್ತು ಅವರಿಗಿದೆ. ಆದರೆ ಶೈಲಜಾ ಅವರು ಈಗಾಗಲೇ ಆರೋಗ್ಯ ಇಲಾಖೆಯಲ್ಲಿ ದೊಡ್ಡದೊಂದು ಮೈಲಿಗಲ್ಲು ನೆಟ್ಟು ಹೋಗಿದ್ದಾರೆ. ವಿದೇಶಿ ಮಾಧ್ಯಮಗಳು ಶೈಲಜಾ ಟೀಚರ್ ಅನ್ನು ರಾಕ್ ಸ್ಟಾರ್ ಎಂದೇ ಕರೆದಿತ್ತು. ಹೀಗಾಗಿಯೇ ಶೈಲಜಾ ಟೀಚರ್ ಕೆಲಸವನ್ನು ಮೀರಿ ವೀಣಾ ದುಡಿಯಬೇಕಿದೆ.
ಇನ್ನು ಕೇರಳದಲ್ಲಿ ಕೊರೋನಾ ನಿಯಂತ್ರಿಸುವುದೇ ದೊಡ್ಡ ಸವಾಲಿನ ಕೆಲಸ. ಆದರೆ ಕೇರಳ ಮಂದಿ ಸರ್ಕಾರದ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದರಿಂದ ದೊಡ್ಡ ಸಮಸ್ಯೆಯಾಗಲಾರದು. ಜೊತೆಗೆ ಕೊರೋನಾ ನಿಯಂತ್ರಣ ಸಲುವಾಗಿ ಶೈಲಜಾ ಟೀಚರ್ ಈಗಾಗಲೇ ಮಾರ್ಗಸೂಚಿಯನ್ನು ಹಾಕಿಕೊಟ್ಟಿದ್ದಾರೆ. ಹೊಸದೇನು ಪ್ರಯೋಗಗಳನ್ನು ಮಾಡುವ ಅವಶ್ಯಕತೆಗಳಿಲ್ಲ.
Discussion about this post