ದೊಡ್ಮನೆ ಹುಡುಗನ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಘಟಾನುಘಟಿ ಚಿತ್ರ ವಿಮರ್ಶಕರು ಬರೆದ ಬರಹ ನೋಡಿದಾಗ ಖುಷಿಯಾಗಿತ್ತು. ಆದರೆ ಯುವರತ್ನ ಚಿತ್ರದ ಅಸಲಿ ಕಥೆ ಬಯಲಾಗಿದ್ದು, ಅದು OTTಯಲ್ಲಿ ಬಂದಾಗ. ನಿಜವಾದ ವೀಕ್ಷಕರಿಗೆ ಚಿತ್ರದ ಬಗ್ಗೆ ಅನ್ನಿಸಿದ್ದು ಏನು ಅನ್ನುವುದು. ಅರುಣ್ ಅನ್ನುವವರು ಬರೆದ ಚಿತ್ರದ ವಿಮರ್ಶೆ ಇಲ್ಲಿದೆ.
ಆಕಸ್ಮಿಕವಾಗಿ ಮನೆಯವರೊಂದಿಗೆ ಮನೆಯಲ್ಲಿ ಯುವರತ್ನ ಸಿನೆಮಾ ನೋಡಬೇಕಾಯಿತು. ಶಿಕ್ಷಣದ ವ್ಯಾಪಾರೀಕರದ ಬಗ್ಗೆ ಸಿನೆಮಾ ಧ್ವನಿ ಎತ್ತುತ್ತದೆ ಎನ್ನುವ ವಿಮರ್ಶೆ ಇದ್ದ ಕಾರಣಕ್ಕೂ ಕುತೂಹಲವಿತ್ತು. ಸಿನೆಮಾ ನೋಡಿದ ಮೇಲೆ ನಿರ್ದೇಶಕರಿಗೆ ಶಿಕ್ಷಣದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದೆ ಸಿನೆಮಾ ಮಾಡಿದ್ದಾರೆ ಅನ್ನಿಸಿತು.
ಶಿಕ್ಷಣದ ವ್ಯಾಪಾರೀಕರದ ಬಗ್ಗೆ ಸಿನೆಮಾ ಮಾಡುವಾಗ ಈಗಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಕತೆ, ಚಿತ್ರಕತೆ ಬರೆದವರು, ನಿರ್ದೇಶಕರು ಕನಿಷ್ಠ ಅಧ್ಯಯನ ಮಾಡಬೇಕಿತ್ತು. ಶಿಕ್ಷಣ ನೀತಿಗಳ ಬಗ್ಗೆ ಒಂದು ಕನಿಷ್ಠ ಜ್ಞಾನ ಇರಬೇಕಿತ್ತು. ಶಿಕ್ಷಣದ ವ್ಯಾಪಾರೀಕರಣದ ಬಗ್ಗೆ ತಿಳುವಳಿಕೆ ಇರುವ ತಜ್ಞರ ಬೇಟಿ ಮಾಡಿ ಚರ್ಚಿಸಬೇಕಿತ್ತು, ಶಿಕ್ಷಣದ ವ್ಯಾಪಾರೀಕರಣದ ಬಗ್ಗೆ ಚಳವಳಿ ರೂಪಿಸುತ್ತಿರುವ ಸಂಘಟನೆಗಳನ್ನೂ, ಈ ಸಂಘಟನೆಗಳ ನಾಯಕರನ್ನೂ ಬೇಟಿ ಮಾಡಿ ಈ ಬಗ್ಗೆ ಚರ್ಚಿಸಬಹುದಿತ್ತು. ಆದರೆ ಈ ಸಿನೆಮಾ ನೋಡಿದರೆ ಇಂತಹ ಯಾವುದೂ ನಡೆದಂತಿಲ್ಲ.
ಮೊದಲನೆಯದಾಗಿ ಈ ಸಿನೆಮಾ ಪ್ರಾಥಮಿಕ ಶಿಕ್ಷಣದ ವ್ಯಾಪಾರೀಕರಣದ ಬಗ್ಗೆ ಮಾತಾಡುತ್ತೋ? ಉನ್ನತ ಶಿಕ್ಷಣದ ವ್ಯಾಪಾರೀಕರಣದ ಬಗ್ಗೆ ಮಾತಾಡುತ್ತೋ..ಅಥವಾ ಈ ಎರಡರ ವ್ಯಾಪಾರಿಕರಣದ ಬೇರೆ ಬೇರೆ ಆಯಾಮಗಳನ್ನು ತೋರುತ್ತಿದೆಯೋ ಎಂದರೆ ಯಾವುದರ ಬಗ್ಗೆಯೂ ಖಚಿತತೆ ಇಲ್ಲ. ಒಟ್ಟಾರೆ ಶಿಕ್ಷಣದ ವ್ಯಾಪಾರೀಕರಣದ ಬಗ್ಗೆ ಮಾತಾಡುವ ಭರದಲ್ಲಿ ಎಲ್ಲವನ್ನೂ ಕಲಸುಮೇಲೋಗರ ಮಾಡಲಾಗಿದೆ.
ಮೇಲುನೋಟಕ್ಕೆ ಈ ಸಿನೆಮಾ ಉನ್ನತ ಶಿಕ್ಷದ ಬಗ್ಗೆ ಮಾತಾಡುತ್ತೆ. ಇಲ್ಲಿ ಸರಕಾರದ R.K. University ಎಂದು ತೆಗೆದುಕೊಂಡಿದ್ದಾರೆ. ಇದರ ಮುಖ್ಯಸ್ಥ ಪ್ರಕಾಶ ರೈ ಅವರನ್ನು ಪ್ರಿನ್ಸಿಪಲ್ (Principal) ಎನ್ನುತ್ತಾರೆ. ಯುನಿವರ್ಸಿಟಿ ಮುಖ್ಯಸ್ಥರು ಉಪಕುಲಪತಿಗಳು (vice chancellor) ಹಲವು ಕಡೆ ಈ ಯುನಿವರ್ಸಿಟಿಗೆ ‘ಕಾಲೇಜು’ ಎಂದೂ ಬಳಸುತ್ತಾರೆ. ಯುನಿವರ್ಸಿಟಿ ಹಲವು ಕಾಲೇಜುಗಳನ್ನು ನಿರ್ದೇಶಿಸುವ ಸಂಸ್ಥೆ ಮತ್ತು ಇಂತಹ ಯುನಿವರ್ಸಿಟಿಗೆ ನೂರಾರು ಕಾಲೇಜುಗಳು ಸೇರಿರುತ್ತವೆ. ಕೆಲವೊಮ್ಮೆ ಒಂದು ಬೃಹತ್ ಕಾಲೇಜೇ ಡೀಮ್ಡ್ ಯುನಿವರ್ಸಿಟಿ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಸಿನೆಮಾ ನಿರ್ದೇಶಕರಿಗೆ ಯುನಿವರ್ಸಿಟಿ ಮತ್ತು ಕಾಲೇಜಿನ ವ್ಯತ್ಯಾಸದ ಸಾಮಾನ್ಯ ಜ್ಞಾನವೂ ಇದ್ದಂತಿಲ್ಲ. ನ್ಯಾಕ್ NACC ಕಮಿಟಿ ವಿಶ್ವವಿದ್ಯಾಲಯಗಳ, ಸ್ವತಂತ್ರ ಕಾಲೇಜುಗಳ ಸರ್ವಾಂಗೀಣ ಅಭಿವೃದ್ಧಿಯನ್ನು ಅಳೆದು ಗ್ರಾಂಟ್ಸ್ ಗೆ ಸಂಬಂಧಿಸಿದ ಗ್ರೇಡ್ ಕೊಡುತ್ತದೆ. ಹೀಗೆ ಬರುವುದು ಒಂದು ತಜ್ಞರ ತಂಡವೇ ಹೊರತು ಯಾರೋ ಒಬ್ಬ ವ್ಯಕ್ತಿಯಲ್ಲ. ಆದರೆ ಈ ಸಿನೆಮಾದಲ್ಲಿ ಒಬ್ಬಾತ ಹೀರೋತರ (ಪ್ರಕಾಶ್ ಬೆಳವಡಿ ಮಾಡಿದ ಪಾತ್ರ) ಬಂದು ‘ಈ ಕಾಲೇಜ್ ಮುಚ್ಚಿಸುತ್ತೇನೆ’ ಎಂದು ಅಬ್ಬರಿಸುವುದನ್ನು ನೋಡಿದರೆ ನಗು ಬರುತ್ತದೆ.
ಇನ್ನು ಸೋಷಿಯಲ್ ಸೈನ್ಸ್, ಹುಮ್ಯಾನಿಟಿ, ಮೆಡಿಕಲ್ ಸೈನ್ಸ್, ಕಂಪ್ಯೂಟರ್ ಸೈನ್ಸ್, ತಂತ್ರಜ್ಞಾನ (ಟೆಕ್ನಾಲಜಿ) ಇವುಗಳು ಬೇರೆ ಬೇರೆ ತರಹದ ಸಮಸ್ಯೆಗಳು ಎದುರಿಸುತ್ತಿವೆ. ಎಲ್ಲವನ್ನೂ ಒಂದೇಯಾಗಿ ನೋಡುವಂತಿಲ್ಲ. ಈ ಭೇದವೂ ಈ ನಿರ್ದೇಶಕರಿಗೆ ತಿಳಿದಂತಿಲ್ಲ.
ನಿಜಕ್ಕೂ ಉನ್ನತ ಶಿಕ್ಷಣದ ಖಾಸಗೀಕರಣದ ಬಗ್ಗೆ ಈ ಸಿನೆಮಾ ಮಾತಾಡಬೇಕಿದ್ದರೆ, ಯುಜಿಸಿಯ ನಿರ್ನಾಮ, Sc,St,Obc, Minarity, ಮಹಿಳಾ ವಿದ್ಯಾಭ್ಯಾಸದ ಬಗ್ಗೆ ಕಡಿತಗೊಳಿಸುತ್ತಿರುವ ಫೆಲೋಶಿಪ್ ಗಳ ಬಗ್ಗೆ, ನಿಲ್ಲಿಸುತ್ತಿರುವ ಹಾಸ್ಟೆಲ್ ಗಳ ಬಗ್ಗೆ, ಫಾರಿನ್ ಯುನಿವರ್ಸಿಟಿಗಳು ಲಗ್ಗೆ ಇಡುತ್ತಿರುವ ಬಗ್ಗೆ, ಖಾಸಗಿ ಶಿಕ್ಷಣ ಸಂಸ್ಥೆಗಳೇ ಡಿಮ್ಡ್ ಯುನಿವರ್ಸಿಟಿಗಳಾಗಿ ಖಾಸಗಿ ಯುನಿವರ್ಸಿಟಿ ಮಾನ್ಯತೆ ಪಡೆದು ಶಿಕ್ಷಣವನ್ನು ವ್ಯಾಪಾರ ಮಾಡುತ್ತಿರುವ ಬಗ್ಗೆ, ತಾಂತ್ರಿಕ ಮತ್ತು ವಿಜ್ಞಾನದ ವಿಷಯಗಳ ಮಧ್ಯೆ ಸೊರಗುತ್ತಿರುವ ಹುಮ್ಯಾನಿಟೀಸ್, ಸೋಷಿಯಲ್ ಸೈನ್ಸ್ ಗಳ ಮಹತ್ವದ ಬಗ್ಗೆ, ಪ್ರಭುತ್ವದ ವಿರುದ್ಧ ಯುನಿವರ್ಸಿಟಿಗಳು ಧ್ವನಿ ಎತ್ತದಂತೆ ನಿಯಂತ್ರಿಸುತ್ತಿರುವ ಬಗ್ಗೆ, ಇಡೀ ಗ್ಲೋಬಲ್ ಮಾರ್ಕೆಟ್ ವಿದ್ಯಾರ್ಥಿಗಳನ್ನು ಹೇಗೆ ಗಿರಾಕಿಗಳನ್ನಾಗಿಸಿಕೊಂಡು ಶಿಕ್ಷಣದ ಬಗೆಗಿನ ಗ್ರಹಿಕೆಯನ್ನೆ ಬದಲಿಸಿದೆ ಎನ್ನುವುದರ ಬಗ್ಗೆ, ಸರಕಾರಗಳು ಯುನಿವರ್ಸಿಟಿಗಳಿಗೆ ಅಗತ್ಯ ಬಜೆಟ್ ಕೊಡದೆ ನಿಧಾನಕ್ಕೆ ವಿವಿಗಳನ್ನು ಸಾಯಿಸುತ್ತಿರುವ ಬಗ್ಗೆ, ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ, ಕೊನೆಗೆ ಹೊಸ ಶಿಕ್ಷಣ ನೀತಿಯ ಅದ್ವಾನಗಳ ಬಗ್ಗೆ ಧ್ವನಿ ಎತ್ತಬೇಕಿತ್ತು. ಈ ಯಾವುದಕ್ಕೂ ತಾಳ ತಂತು ಇಲ್ಲದೆ.. ಯಾವುದೋ ಮಹಾನಗರದ ಒಂದಷ್ಟು ಕಾಲೇಜುಗಳಲ್ಲಿ ಇರಬಹುದಾದ ಡ್ರಗ್ಸ್ ತರಹದ ಮಾಫಿಯಾವನ್ನೆ ಇಡೀ ರಾಜ್ಯಕ್ಕೆ ಅನ್ವಯಿಸಿದಂತಿದೆ.
ಯುನಿವರ್ಸಿಟಿಗಳ ಕುಲಪತಿ ಆಯ್ಕೆಗಳ ಲಾಬಿ, ಯುನಿವರ್ಸಿಟಿ ಅಧ್ಯಾಪಕರ ನೇಮಕಾತಿಗಳ ಲಾಬಿಗಳ ಬಗ್ಗೆ ಮಾತಾಡಬೇಕಿತ್ತು. ಪ್ರೊಫೆಸರ್ ಪದನಾಮದ ಬಳಕೆಯ ಬಗೆಗೂ ನಿರ್ದೇಶಕರಿಗೆ ಒಂದು ಸಾಮಾನ್ಯ ಜ್ಞಾನ ಇದ್ದಂತಿಲ್ಲ.
ಇದೆಲ್ಲವನ್ನು ಒಳಗೊಂಡು ಸಿನೆಮಾ ಒಂದು ‘ಡಾಕುಮೆಂಟರಿ’ ತರಹ ಆಗಬೇಕಿತ್ತು ಎಂದು ನಾನು ಹೇಳುತ್ತಿಲ್ಲ. ಆದರೆ ಈ ಎಲ್ಲವನ್ನೂ ಒಳಗೊಂಡೂ ಒಂದು ಜನಪ್ರಿಯ ಕಥೆಯನ್ನು ಎಣೆಯಬಹುದಾದ ಸಾಧ್ಯತೆಗಳು ಸಾಕಷ್ಟಿದ್ದವು ಎನ್ನುವುದು ನನ್ನ ತಕರಾರು. ಇದೇ ಶಿಕ್ಷಣದ ಖಾಸಗೀಕರಣದ ಬಗ್ಗೆ ಬಂದ ಮಲೆಯಾಳಿ, ತಮಿಳು ಸಿನೆಮಾಗಳು ಜನಪ್ರಿಯವಾಗೇ ಸೂಕ್ಷ್ಮವಾಗಿವೆ ಮತ್ತು ಗೆದ್ದಿವೆ. ಕೆಲವು ಮಿತಿಗಳ ಮಧ್ಯೆಯೂ ಇದೇ ಪುನೀತ್ ರಾಜ್ ಕುಮಾರ್ ಅವರ ನಟನೆಯ ‘ಪೃಥ್ವಿ’ (ನಿರ್ದೇಶನ: ಜೇಕಬ್ ವರ್ಗೀಸ್) ಸಿನೆಮಾ ಗಣಿಗಾರಿಕೆಯನ್ನು ಎಷ್ಟು ಸೂಕ್ಷ್ಮವಾಗಿ ಕಟ್ಟಿಕೊಟ್ಟಿತ್ತು. ‘ಮೈತ್ರಿ’ (ನಿರ್ದೇಶನ: ಬಿ.ಎಂ.ಗಿರಿರಾಜ್ Giriraj BM )ಸಿನೆಮಾವು ಸಾಮಾಜಿಕ ಸಮಸ್ಯೆಯನ್ನು ಸೂಕ್ಷ್ಮವಾಗಿ ಮಂಡಿಸಿತ್ತು. ‘ಯುವರತ್ನ’ ಇನ್ನೊಂದು ‘ಪೃಥ್ವಿ’ಯೋ, ‘ಮೈತ್ರಿ’ಯೋ ಆಗಬೇಕಿತ್ತು. ಆಗುವ ಸಾಧ್ಯತೆಗಳಿದ್ದವು. ಆದರೆ ಗಂಭೀರ ಸಮಸ್ಯೆಯನ್ನು ಆಯ್ದುಕೊಂಡು ಒಂದು ಕಳಪೆ ಚಿತ್ರ ತೆಗೆದಂತಾಗಿದೆ.
ಸಿನೆಮಾ ಶಿಕ್ಷಣದ ವ್ಯಾಪಾರವನ್ನು ವಸ್ತುವಾಗಿಸಿಕೊಂಡಿದೆ ಎಂಬ ಒಂದೇ ಕಾರಣಕ್ಕೆ ಮೆಚ್ಚಲು ಸಾಧ್ಯವಿಲ್ಲ. ಈ ಸಿನೆಮಾದ ಅತಿರೇಕಗಳು ಈ ಸಮಸ್ಯೆಯನ್ನೆ ಗೋಜಲಾಗಿಸಿ, ಆ ಸಮಸ್ಯೆಯ ತೀವ್ರತೆಯನ್ನು ಸಪಾಟುಗೊಳಿಸಿ, ಸಮಸ್ಯೆಯ ಕೇಂದ್ರವನ್ನೆ ಸರಳಗೊಳಿಸಿ ಜನರ ತಿಳುವಳಿಕೆಯಲ್ಲಿ ‘ತಪ್ಪು’ ಗ್ರಹಿಕೆಗಳನ್ನು ನೆಲೆಗೊಳಿಸಲು ಕಾರಣವಾಗುತ್ತವೆ.
ಇದೊಂದು ಜನಪ್ರಿಯ ಲವ್ ಸ್ಟೋರಿ ತರಹದ ಸಿನೆಮಾ ಆಗಿದ್ದರೆ ಖಂಡಿತಾ ಎರಡೂವರೆ ತಾಸು ಸಿನೆಮಾ ನೋಡಿ ಇಷ್ಟು ಉದ್ದ ಬರೆಯುವ ಅಗತ್ಯವಿರಲಿಲ್ಲ. ಶಿಕ್ಷಣದ ವ್ಯಾಪಾರೀಕರಣದಂತಹ ಸಾಮಾಜಿಕ ಜ್ವಲಂತ ಸಮಸ್ಯೆಯೊಂದನ್ನು ಎತ್ತಿಕೊಂಡು ಪರಿಹಾರ ತೋರಿಸಲು ಹೊರಟ ಸಿನೆಮಾ ಎನ್ನುವ ಕಾರಣಕ್ಕೆ ಈ ಸಿನೆಮಾ ನೋಡಿ ವಿಮರ್ಶೆಯನ್ನು ಬರೆಯಬೇಕಾಯ್ತು.
ಇಷ್ಟು ದೊಡ್ಡ ಬಜೆಟ್ ಹಾಕಿ ಸಿನೆಮಾ ತೆಗೆಯುವ ನಿರ್ಮಾಪಕರು, ನಿರ್ದೇಶಕರು, ನಟಿಸುವ ನಟ ಆ ಕ್ಷೇತ್ರದ ಬಗ್ಗೆ ಕನಿಷ್ಠ ಜ್ಞಾನವನ್ನೂ ಪಡೆಯದಿರುವುದು ವಿಷಾದಕರ. ಕನ್ನಡದ ಜನಪ್ರಿಯ ನಿರ್ದೇಶಕರುಗಳ, ಜನಪ್ರಿಯ ನಾಯಕರುಗಳ ಸಿನೆಮಾಗಳ ದುರಂತವೆಂದರೆ ಇದೇ ಇರಬೇಕು.

Discussion about this post