ಉಡುಪಿ : ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಕಂಚುಕಕೋಡು ನಿವಾಸಿ ಅಶ್ವತ್ಥಮ್ಮ (87) ಭಿಕ್ಷೆ ಬೇಡಿ ಬಂದ ಹಣದ ಪೈಕಿ 1 ಲಕ್ಷ ಹಣವನ್ನು ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನಕ್ಕೆ ದಾನವಾಗಿ ಕೊಟ್ಟಿದ್ದಾರೆ. ಕೊಡುವಾಗ ಇದನ್ನು ಅನ್ನದಾನಕ್ಕೆ ಉಪಯೋಗಿಸಬೇಕು ಅನ್ನುವ ಷರತ್ತು ವಿಧಿಸಿದ್ದಾರೆ.
ಹಾಗಂತ ಅಶ್ವತ್ಥಮ್ಮ ಇದೇ ಮೊದಲ ಬಾರಿಗೆ ಭಿಕ್ಷೆ ಬೇಡಿ ಸಂಗ್ರಹವಾದ ಹಣವನ್ನು ದೇವಸ್ಥಾನಕ್ಕೆ ನೀಡುತ್ತಿಲ್ಲ. ಏನಿಲ್ಲ ಅಂದರೂ 5 ಲಕ್ಷಕ್ಕೂ ಅಧಿಕ ಮೊತ್ತದ ಹಣವನ್ನು ಈಗಾಗಲೇ ಅವರು ದೇಣಿಗೆಯಾಗಿ ಕೊಟ್ಟಿದ್ದಾರೆ.
ಈಗಾಗಲೇ ಕಂಚುಗೋಡು ದೇವಸ್ಥಾನಕ್ಕೆ ಒಂದೂವರೆ ಲಕ್ಷ, ಪಂಪಾ ಸನ್ನಿಧಾನಕ್ಕೆ 1 ಲಕ್ಷ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಒಂದೂವರೆ ಲಕ್ಷ ಹೀಗೆ ವಿವಿಧ ದೇವಸ್ಥಾನಗಳಿಗೆ ಅವರು ದೇಣಿಗೆ ನೀಡಿದ್ದಾರೆ. ಪ್ರತಿಯೊಂದು ದೇವಸ್ಥಾನಕ್ಕೂ ದೇಣಿಗೆ ಕೊಟ್ಟ ವೇಳೆ ಅವರು ವಿಧಿಸುವುದು ಒಂದೇ ಷರತ್ತು, ನಾನು ಕೊಟ್ಟ ಹಣ ಅನ್ನದಾನಕ್ಕೆ ಮಾತ್ರ ಬಳಕೆಯಾಗಬೇಕು ಅಂತಾ.

ಯಾರಿವರು ಅಶ್ವತ್ಥಮ್ಮ…
ಅಶ್ವತ್ಥಮ್ಮನ ತಂದೆ ಆಂಧ್ರದವರಾಗಿದ್ದು, ತಾಯಿ ಮೈಸೂರಿನವರು. ನಾಟಕ ಕಂಪೆನಿಯ ಮುಖ್ಯಸ್ಥರನ್ನು ಮದುವೆಯಾಗಿದ್ದ ಅಶ್ವತ್ಥಮ್ಮ, ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.
30 ವರ್ಷಗಳ ಹಿಂದೆ ಪತಿ ತೀರಿದ ಬಳಿಕ ಕುಂದಾಪುರದಲ್ಲಿ ನೆಲೆಯೂರಿದ್ದ ಅಶ್ವತ್ಥಮ್ಮ ವಯಸ್ಸಾದ ಕಾರಣ ಭಿಕ್ಷಾಟನೆಗಿಳಿದರು.
10 ವರ್ಷಗಳಿಂದ ಸಾಲಿಗ್ರಾಮದ ದೇಗುಲದಲ್ಲಿ ಭಿಕ್ಷೆ ಬೇಡುತ್ತಿದ್ದ ಅವರು ಅಕ್ಕಪಕ್ಕದ ಮನೆಯ ಜಗುಲಿಯಲ್ಲಿ ರಾತ್ರಿ ಕಳೆಯುತ್ತಿದ್ದರು.
ಹಾಗಂತ ಭಿಕ್ಷೆಯಿಂದ ಬಂದ ಹಣವನ್ನು ಸ್ವಾರ್ಥಕ್ಕಾಗಿ ಬಳಸಲಿಲ್ಲ, ದುಶ್ಚಟಗಳಿಗೆ ವ್ಯರ್ಥ ಮಾಡಲಿಲ್ಲ.
ನಿತ್ಯ ಕರ್ಮಗಳಿಗಾಗಿ ಸಾರ್ವಜನಿಕ ಶೌಚಾಲಯಗಳನ್ನು ಬಳಸುತ್ತಿರುವ ಇವರು ಹಲವು ವರ್ಷಗಳಿಂದ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ.
ಹೀಗೆ ಪ್ರತೀ ವರ್ಷ ಯಾತ್ರೆ ಹೊರಡುವ ಮುನ್ನ ತಾವು ಯಾತ್ರೆ ಹೊರಡುವ ದೇವಸ್ಥಾನದ ಅನ್ನದಾನಕ್ಕೆ ದೇಣಿಗೆ ನೀಡುವುದು ವಾಡಿಕೆ.
ಈ ಬಾರಿ ಫೆ 9 ರಂದು ಗುರುನರಸಿಂಹ ದೇವರ ಸನ್ನಿಧಿಯಲ್ಲಿ ಇರುಮುಡಿ ಕಟ್ಟುವ ಕಾರ್ಯ ನಡೆಯಲಿದ್ದು ಅಂದೇ ಅವರು ಶಬರಿಮಲೆ ಯಾತ್ರೆ ಹೊರಡಲಿದ್ದಾರೆ.
ಅಂದ ಹಾಗೇ ಇವರು ಭಿಕ್ಷೆ ಬೇಡಿದ ಹಣವನ್ನು ಪಿಗ್ಮಿ ಕಟ್ಟುವುದು ಅವರ ವಾಡಿಕೆ. ಹಾಗಾದ್ರೆ ಅವರು ದೇಣಿಗೆ ಕೊಡುವ ವೇಳೆ ಅನ್ನದಾನಕ್ಕೆ ದೇಣಿಗೆ ಉಪಯೋಗಿಸುವಂತೆ ಹೇಳುವುದ್ಯಾಕೆ. ಅದುವೇ ಇಂಟ್ರರೆಸ್ಟಿಂಗ್ ಸ್ಟೋರಿ.
ಒಂದು ಕಾಲದಲ್ಲಿ ತುತ್ತಿಗೆ ಸಂಕಷ್ಟವಿಲ್ಲದೆ ಬೆಳೆದವರು ಅಶ್ವತ್ಥಮ್ಮ, ಆದರೆ ಬದಲಾದ ಪರಿಸ್ಥಿತಿ ಅವರನ್ನು ಸಂಕಷ್ಟಕ್ಕೆ ತಳ್ಳಿತು. ಒಂದು ಹೊತ್ತಿನ ಊಟಕ್ಕೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯ್ತು. ಹೀಗಾಗಿ ಅನ್ನದಾನದ ಮಹತ್ವದ ತಿಳಿದ ಅವರು ವಿಶೇಷ ಸಮಾಜವೇ ಮನಸ್ಸು ಮಾಡಿದರು. ಈ ಮೂಲಕ ಅದೆಷ್ಟೋ ಹಸಿದ ಹೊಟ್ಟೆಗಳನ್ನು ತುಂಬುವ ಕಾಯಕ ನಡೆಸುತ್ತಿದ್ದಾರೆ.
Discussion about this post