ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ ಬಳಿಕ ಕೊರೋನಾ ಸೋಂಕಿನ ಸಂಖ್ಯೆ ಇಳಿಮುಖವಾಗಿದೆ ಎಂದು ರಾಜ್ಯ ಸರ್ಕಾರ ಬೀಗುತ್ತಿದೆ. ಆದರೆ ಲಾಕ್ ಡೌನ್ ಪ್ರಾರಂಭದಲ್ಲಿ ಇದ್ದ ಟೆಸ್ಟಿಂಗ್ ಪ್ರಮಾಣಕ್ಕೂ, ಈಗಿನ ಟೆಸ್ಟಿಂಗ್ ಪ್ರಮಾಣಕ್ಕೂ ಇರೋ ವ್ಯತ್ಯಾಸವನ್ನು ಸರ್ಕಾರ ಹೇಳುತ್ತಿಲ್ಲ.
ಇನ್ನು ಮೂರನೇ ಅಲೆಯ ಬಗ್ಗೆ ಮಾತನಾಡುತ್ತಿರುವ ರಾಜ್ಯ ಸರ್ಕಾರ, ಅದಕ್ಕೆ ಸಮಿತಿ, ಸಿದ್ದತೆ ಎಂದು ಭರವಸೆಗಳನ್ನು ಕೊಡುತ್ತಿದೆ. ಆದರೆ ಮೂರನೇ ಅಲೆ ಬಾರದಂತೆ ಕೈಗೊಳ್ಳಬೇಕಾದ ಕಠಿಣ ಕ್ರಮಗಳ ಬಗ್ಗೆ ಭರವಸೆ ಕೊಡುತ್ತಿಲ್ಲ. ಹೋಗ್ಲಿ ತಜ್ಞರು ಕೊಟ್ಟ ಶಿಫಾರಸನ್ನು ಪಾಲಿಸುತ್ತೇವೆ ಅನ್ನುವ ಭರವಸೆಯನ್ನು ಕೊಡಲು ರಾಜ್ಯ ಸರ್ಕಾರ ಸಿದ್ದವಿಲ್ಲ. ಎರಡನೇ ಅಲೆಯ ಪ್ರಾರಂಭದಲ್ಲಿ ಸಿನಿಮಾ ಪ್ರಚಾರ, ಚುನಾವಣಾ ಪ್ರಚಾರಕ್ಕೆಲ್ಲಾ ದಾನಶೂರ ಕರ್ಣನೆಂ ಅನುಮತಿ ಕೊಟ್ಟಿದ್ದ ರಾಜ್ಯ ಸರ್ಕಾರ, ಮೂರನೇ ಅಲೆಯಲ್ಲೂ ಇದನ್ನೂ ಮುಂದುವರಿಸಿದರೆ ಕರ್ನಾಟಕವನ್ನು ದೇವರೇ ಬಂದರೂ ರಕ್ಷಿಸಲು ಸಾಧ್ಯವಿಲ್ಲ.
ಈ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಆಸ್ಪತ್ರೆಗಳು ಕೊರೋನಾ ಸೋಂಕಿತರಿಂದ ತುಂಬಿದೆ. ಬೆಡ್, ಆಕ್ಸಿಜನ್ ಸಿಗದೆ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಇನ್ನೂ ನಿಂತಿಲ್ಲ. ಈ ನಡುವೆ ಕೊರೋನಾ ಆರೈಕೆ ಕೇಂದ್ರಗಳು ಮಾತ್ರ ಖಾಲಿ ಹೊಡೆಯುತ್ತಿದೆ. ಎರಡನೆ ಅಲೆ ಕೈ ಮೀರುತ್ತಿರುವ ಸಂದರ್ಭದಲ್ಲಿ ಪ್ರಾರಂಭಿಸಿರುವ ಆರೈಕೆ ಕೇಂದ್ರಗಳಿಗೆ ಸೋಂಕಿತರು ಮಾತ್ರ ತಲೆಯೇ ಹಾಕುತ್ತಿಲ್ಲ.
ಬೆಂಗಳೂರು ಒಂದರಲ್ಲಿ 2467 ಹಾಸಿಗೆಗಳು ಆರೈಕೆ ಕೇಂದ್ರಗಳಲ್ಲಿದ್ದು, 1767 ಹಾಸಿಗೆ ಖಾಲಿ ಇದೆ. ಅಂದ್ರೆ 701 ಮಂದಿ ಮಾತ್ರ ಆರೈಕೆ ಕೇಂದ್ರಗಳಲ್ಲಿ ಇದ್ದಾರೆ. ಬಹುತೇಕ ಜಿಲ್ಲೆಗಳ ಕಥೆಯೂ ಇದೇ ಆಗಿದೆ.
ಕಳೆದ ಬಾರಿ ಆರೈಕೆ ಕೇಂದ್ರಗಳಲ್ಲಿ ಬೆಡ್ ಸಿಗದ ಜನ ಪರದಾಡಿದ್ದರು, ಆದರೆ ಈ ಬಾರಿ ಫುಲ್ ಉಲ್ಟಾ. ಇನ್ನು ಇದಕ್ಕೇನು ಕಾರಣ ಎಂದು ನೋಡಿದರೆ, ಸೋಂಕು ದೃಢಪಟ್ಟ ಬೆನ್ನಲ್ಲೇ ಜನ ಆಸ್ಪತ್ರೆಗಳತ್ತ ದೌಡಾಯಿಸುತ್ತಿದ್ದಾರೆ. ನಾಳೆ ರೋಗ ಉಲ್ಭಣಗೊಂಡ ಸಂದರ್ಭದಲ್ಲಿ ಬೆಡ್ ಸಿಗದಿದ್ರೆ ಅನ್ನುವ ಆತಂಕ ಇವರದ್ದು. ಹೀಗಾಗಿ ಸೋಂಕು ಲಕ್ಷಣ ಇಲ್ಲದವರು, ಸೌಮ್ಯ ಲಕ್ಷಣ ಉಳ್ಳವರು ಆರೈಕೆ ಕೇಂದ್ರಗಳ ಬದಲು ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ.
ಇನ್ನು ಕೆಲವರು ಆರೈಕೆ ಕೇಂದ್ರಗಳಿಗಿಂತ ಮನೆಯಲ್ಲಿ ಐಸೋಲೇಷನ್ ಆಗುವುದೇ ಉತ್ತಮ ಅನ್ನುವ ನಿರ್ಧಾರಕ್ಕೆ ಬಂದಿರುವುದೇ ಇದಕ್ಕೆ ಕಾರಣ ಅನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.
Discussion about this post