ಬಿಗ್ ಬಾಸ್ ಮನೆಯಲ್ಲಿ ಇದೀಗ ಅಸಲಿ ಆಟ ಶುರುವಾಗಿದೆ. ಮನೆಗೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ಇದ್ದ ಆತ್ಮೀಯತೆಗೆ ಮೊದಲ ದಿನವೇ ಕೊಡಲಿಯೇಟು ಕೊಟ್ಟಿದ್ದಾರೆ ಬಿಗ್ ಬಾಸ್.
ಈ ನಡುವೆ ಸೀಸನ್ 8ರ ಮೊದಲ ನಾಯಕ ಅನ್ನುವ ಹೆಗ್ಗಳಿಕೆಗೆ ಬ್ರೋಗೌಡ ಪಾತ್ರನಾಗಿದ್ದು, ನಾಯಕನೆಂದರೆ ಹೇಗಿರಬೇಕು ಅನ್ನುವುದನ್ನು ಮೊದಲ ದಿನವೇ ನಿರೂಪಿಸಿ ಬಿಟ್ಟಿದ್ದಾರೆ.
ಬಿಗ್ ಬಾಸ್ ಆದೇಶದಂತೆ ಪರಸ್ಪರ ನಾಮೀನೇಷನ್ ಪ್ರಕ್ರಿಯೆ ಪ್ರಾರಂಭಗೊಂಡ ಸಂದರ್ಭದಲ್ಲಿ ಶಂಕರ್ ಅಶ್ವಥ್ ಅವರನ್ನು ಅತೀ ಹೆಚ್ಚು ಜನ ನಾಮಿನೇಟ್ ಮಾಡಿದರು.
ಹಾಗೇ ನೋಡಿದರೆ ಶಂಕರ್ ಅವರ ಹೆಸರನ್ನು ಸೂಚಿಸಿದ ಸ್ಪರ್ಧಿಗಳ ಕಾರಣ ನೋಡಿದರೆ ವಯಸ್ಸಾದವರೂ ಬಿಗ್ ಬಾಸ್ ಮನೆಗೆ ಬರಲೇಬಾರದು ಅನ್ನುವ ಹಾಗಿತ್ತು.
ಅಷ್ಟು ಮಾತ್ರವಲ್ಲದೆ ತಮಗೂ ವಯಸ್ಸಾಗಲಿದೆ ತಾವು ಅನ್ ಫಿಟ್ ಅನ್ನಿಸಿಕೊಳ್ಳುತ್ತೇವೆ ಅನ್ನುವ ಕನಿಷ್ಟ ಜ್ಞಾನವೂ ಅಲ್ಲಿರುವ ಸ್ಪರ್ಧಿಗಳಿಗೆ ಇರಲಿಲ್ಲ.
ಕಾಳಜಿಯ ನೆಪದಲ್ಲಿ ಶಂಕರ್ ಅಶ್ವಥ್ ಅವರನ್ನು ಮನೆಯಿಂದ ಹೊರಗಟ್ಟುವ ಪ್ರಯತ್ನವೊಂದು ಸದ್ದಿಲ್ಲದೆ ನಡೆದಿತ್ತು.
ಹಾಗೇ ನೋಡಿದರೆ ಕಾಮಿಡಿ ಕಲಾವಿದ ಮಂಜು ಮಾತ್ರ ರಾಜೀವ್ ಹಾಗೂ ಅರವಿಂದ್ ಅವರನ್ನು ನಾಮಿನೇಟ್ ಮಾಡೋ ಮೂಲಕ ಪ್ರೌಢತೆ ತೋರಿದ್ದಾರೆ.
ಇವರಿಬ್ಬರೂ ನನಗೆ ಪ್ರತಿಸ್ಪರ್ಧಿಗಳು ಹೀಗಾಗಿ ನಾಮಿನೇಟ್ ಮಾಡುತ್ತೇನೆ ಅಂದಿದ್ದಾರೆ.
ಆದರೆ ತಾನೊಂದು ಬಗೆದರೆ ವಿಧಿಯೊಂದು ಬಗೆಯಿತು ಅಂತಾರಲ್ಲ, ಹಾಗೇ ಸ್ಪರ್ಧಿಗಳೊಂದು ಬಗೆದರೆ ಬ್ರೋಗೌಡ ಮತ್ತೊಂದು ಬಗೆದಿದ್ದ.
ಬಿಗ್ ಬಾಸ್ ಆದೇಶದಂತೆ ನಾಮಿನೇಟ್ ಆದ ಸದಸ್ಯರ ಪೈಕಿ ಯಾರನ್ನು ಉಳಿಸಿಕೊಳ್ಳುತ್ತೀರಾ ಅಂದ್ರೆ, ಹಿಂದೆ ಮುಂದೆ ಯೋಚಿಸದ ಕ್ಯಾಪ್ಟನ್ ಶಂಕರ್ ಅಶ್ವಥ್ ಅವರನ್ನು ಉಳಿಸಿಕೊಂಡಿದ್ದಾರೆ.
ಜೊತೆಗೆ ಅವರೊಬ್ಬರು ಹಿರಿಯ ಸದಸ್ಯರು, ಅವರ ಅನುಭವಗಳು ಈ ಮನೆಗೆ ಬೇಕು ಅನ್ನುವ ಮೂಲಕ ನಾಯಕನಾಗಲು ವಯಸ್ಸು ಮುಖ್ಯವಲ್ಲ, ಬುದ್ದಿವಂತಿಕೆ ಮುಖ್ಯ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.
Discussion about this post