‘ಸೂಜಿದಾರ’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದ ನಟಿ ಚೈತ್ರಾ ಕೋಟೂರ್ ಈ ಬಾರಿಯ ಬಿಗ್ ಬಾಸ್ಗೆ 16ನೇ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ. ಬರಹಗಾರ್ತಿಯಾಗಿ ಗುರುತಿಸಿಕೊಂಡಿರುವ ಚೈತ್ರಾ, ಸಿನಿಮಾಗಳ ನಿರ್ದೇಶನದ ತಂಡದಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ.
ಹುಣ್ಣಿಮೆ ರಾತ್ರಿಯಲಿ, ಹರಕು ಚಾಪೆಯಲಿ ನಾನು ಸುಮ್ಮನೆ ಮಲಗಿರಲು ಎಂಬ ಅದ್ಭುತ ಸಾಲುಗಳನ್ನು ಬರೆದವರು ಇದೇ ಚೈತ್ರಾ ಕೋಟೂರ್. ಸೂಜಿದಾರ ಸಿನಿಮಾಕ್ಕಾಗಿ ಬರೆದ ಈ ಹಾಡು ಎಲ್ಲರ ಮನವನ್ನು ತಟ್ಟಿತ್ತು.
ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂ ಮಾಡುತ್ತಿರುವ ಸಂದರ್ಭದಲ್ಲಿ ಕೋಟೂರ್ ಹೆಸರು ಕೂಡಾ ಇದೇ ಹೊಸಬರ ಪಟ್ಟಿಯಲ್ಲಿದೆ.
ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ಅಭಿನಯ ಚಾತುರ್ಯ, ಅಭಿನಯವನ್ನು ಅದರ ಎಲ್ಲ ಆಯಾಮಗಳಲ್ಲಿ ತಮ್ಮೊಳಗೇ ವ್ಯಾಖ್ಯಾನಿಸಿಕೊಂಡು ಪ್ರಸ್ತುತಪಡಿಸಬಲ್ಲ ಶಕ್ತಿ ಮತ್ತು ಇದಕ್ಕೆ ಇನ್ನಷ್ಟು ಪ್ರಖರತೆಯನ್ನು ಕೊಡಲು ಸಾಧ್ಯವಾಗುವಂತೆ ಬರವಣಿಗೆಯಲ್ಲೂ ಪ್ರತಿಭೆಯನ್ನು ಹೊಂದಿರುವುದು.
ತಮಗಿರುವ ರಂಗಭೂಮಿ ಹಿನ್ನೆಲೆಯನ್ನು ನಟನೆಯ ಹೊತ್ತಿನಲ್ಲಿ ದುಡಿಸಿಕೊಳ್ಳುವ ಗುಣ ಮತ್ತು ಅವರ ಆಲೋಚನೆಯ ಬಗೆಯು ಚೈತ್ರಾ ಅವರನ್ನು ಇತರ ನಟಿಯರಿಗಿಂತ ಭಿನ್ನವಾಗಿಸಿದೆ. ಹಾಗಾಗಿಯೇ ಅವರು ನಿರ್ವಹಿಸುವ ಪಾತ್ರಗಳು ಕೂಡ ಅವರದೇ ನಿಲುವಿನಿಂದಲೂ ರೂಪ ಪಡೆಯುವುದಕ್ಕೆ ಅವಕಾಶವಿರುವುದು. ನಿರ್ದೇಶನದ ಕಡೆಗೂ ಅವರಿಗೆ ವಿಶೇಷ ಒಲವು.
ಚೈತ್ರಾ ಅವರಿಗಿರುವ ಬರವಣಿಗೆಯ ಬಾಂಧವ್ಯ ಅವರ ಬಿಗ್ ಬಾಸ್ ಕನಸುಗಳಿಗೆ ಇನ್ನಷ್ಟು ಮೆರುಗು ಕೊಟ್ಟಿದೆ. ನಟಿಯಾಗುವುದಕ್ಕಿಂತಲೂ ಅವರಿಗೆ ನಿರ್ದೇಶಕಿಯಾಗಬೇಕು ಅನ್ನುವ ಕನಸಿದೆ. ಸಿನಿಮಾ ಅನುಭವ ಇಲ್ಲದವರೇ ನಿರ್ದೇಶಕರಾಗುವ ಬದಲು ಚೈತ್ರಾರಂತಹ ಅನುಭವಿಗಳು ಮತ್ತು ಮನಸ್ಸಿಗೆ ತಟ್ಟಬಲ್ಲಂತೆ ಬರೆಯಬಲ್ಲವರು ನಿರ್ದೇಶಕಿಯಾದರೆ ಒಂದೊಳ್ಳೆ ಚಿತ್ರ ಬರುವುದರಲ್ಲಿ ಸಂಶಯವಿಲ್ಲ.
ಕಿರಗೂರಿನ ಗಯ್ಯಾಳಿಗಳು, ಉರಿಯ ಉಯ್ಯಾಲೆ, ಬೆಂಕಿ ಬೆಡಗು, ರಶೋಮನ್ ಸೇರಿದಂತೆ ಅನೇಕ ನಾಟಕಗಳಲ್ಲಿ ಅಭಿನಯಿಸಿರುವ ಅವರು ಅನುರಾಗ ಸಂಗಮ, ಸೌಭಾಗ್ಯವತಿ, ಧಾರವಾಹಿಗಳಲ್ಲೂ ಕಾಣಿಸಿತಕೊಂಡಿದ್ದಾರೆ. ಅರಿವಿನ ಮನೆ, ನಿಗೂಢ ರಹಸ್ಯ ಅನ್ನುವ ಚಿತ್ರಗಳಲ್ಲೂ ಇವರು ಅಭಿನಯಿಸಿದ್ದಾರೆ.
ಸೂಜಿದಾರ ಚೈತ್ರಾ ಅವರಿಗೊಂದು ಹೆಸರು ತಂದುಕೊಟ್ಟ ಚಿತ್ರ. ಸ್ವಂತ ಸಿನಿಮಾ ನಿರ್ದೇಶನಕ್ಕಾಗಿ ಕಥೆಗಳನ್ನು ಸಿದ್ದಪಡಿಸಿಕೊಂಡಿರುವ ಅವರು ಬಿಗ್ ಬಾಸ್ ಮನೆಯಲ್ಲಿ ಹೇಗಿರುತ್ತಾರೋ ಗೊತ್ತಿಲ್ಲ. ಜನರನ್ನು ಅದೆಷ್ಟರ ಮಟ್ಟಿಗೆ ರಂಜಿಸುತ್ತರೋ ಗೊತ್ತಿಲ್ಲ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಇವರಿಂದ ಒಳ್ಳೆಯ ಚಿತ್ರ ಬರಲಿ ಅನ್ನುವ ಎಲ್ಲರ ಹಾರೈಕೆ.
Discussion about this post