ಬೆಂಗಳೂರು : ಕೊರೋನಾ ಸೋಂಕು ನಿಯಂತ್ರಣ ಸಲುವಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ನಿದ್ದೆಗೆಟ್ಟು ದುಡಿಯುತ್ತಿದ್ದಾರೆ. ಆದರೆ ಕೆಲ ಆಸ್ಪತ್ರೆಗಳು ಈ ಮಹಾಮಾರಿಯನ್ನೇ ಬಂಡವಾಳ ಮಾಡಿಕೊಂಡಿದ್ದು ಕಾಸು ಮಾಡುವ ಸ್ಕೀಮ್ ಗಳನ್ನು ಜಾರಿ ಮಾಡಿದೆ. ಮಾನವೀಯತೆಯನ್ನು ಮರೆತಿರುವ ಇಂತಹ ಆಸ್ಪತ್ರೆಗಳು ರೋಗಿ ಬದುಕಿದರೆ ಲಕ್ಷ, ಸತ್ತರೆ ಕೋಟಿ ಅನ್ನುವ ಲೆಕ್ಕದಲ್ಲಿದೆ.
ಹೀಗೆ ನಾಗರಭಾವಿಯಲ್ಲಿರುವ ಭಾರತಿ ಆಸ್ಪತ್ರೆಯ ವೈದ್ಯರು ಕಾಸಿನಾಸೆಗೆ ಬಿದ್ದು ಸೋಂಕಿತೆಯೊಬ್ಬರನ್ನು ಕೊಲೆ ಮಾಡಿದ್ದಾರೆ. ಭಾರತಿ ಆಸ್ಪತ್ರೆಗೆ 64 ವರ್ಷದ ಮಹಿಳೆಯೊಬ್ಬರು ಕೊರೋನಾ ಸೋಂಕಿನ ಕಾರಣದಿಂದ ದಾಖಲಾಗಿದ್ದರು. ಅವರ ಆರೋಗ್ಯ ಸ್ಥಿತಿ ತುಂಬಾ ವೀಕ್ ಆಗಿತ್ತು. ಹೀಗಾಗಿ ರೆಮೆಡಿಸಿವರ್ ಇಂಜೆಕ್ಷನ್ ನೀಡಬೇಕು ಎಂದು ವೈದ್ಯರು ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೆ ಇದಕ್ಕಾಗಿ 15 ಸಾವಿರಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ಅಷ್ಟೊಂದು ಹಣ ಹೊಂದಿಸಲು ಸಾಧ್ಯವಿಲ್ಲದ ಸಂಬಂಧಿಕರು ಬಿಬಿಎಂಪಿಯ ಡ್ರಗ್ ಕಂಟ್ರೋಲರ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಬಿಬಿಎಂಪಿಯವರೇ ಬಂದು ಇಂಜೆಕ್ಷನ್ ತಲುಪಿಸಿದ್ದಾರೆ.

ಇದರಿಂದ ಕೆಂಡಾಮಂಡಲರಾದ ಆಸ್ಪತ್ರೆ ವೈದ್ಯರು ಸೋಂಕಿತೆಯನ್ನು ಡಿಸ್ಚಾರ್ಜ್ ಮಾಡಿದ್ದಾರೆ. ಹೀಗಾಗಿ ತಕ್ಷಣಕ್ಕೆ ಬೇರೆ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಸಿಗಲಿಲ್ಲ. ಹೀಗಾಗಿ ಮಹಿಳೆ ಮೃತಪಟ್ಟಿದ್ದಾರೆ.
ಈ ಸಂಬಂಧ ಇದೀಗ ಬಿಬಿಎಂಪಿಯ ವೈದ್ಯರು ಆಸ್ಪತ್ರೆ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Discussion about this post