ಬೆಂಗಳೂರು : ಒಂದು ಅವಧಿಗೆ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದ್ದ ಸಿದ್ದರಾಮಯ್ಯ, ನಂತರದ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರು. ಒಳ್ಳೆಯ ಕೆಲಸಗಳನ್ನೂ ಮಾಡಿಯೂ ಸೋಲಬೇಕಾಗಿಯ್ತಲ್ಲ ಅನ್ನುವ ಕೊರಗು ಅವರನ್ನು ಕಾಡುತ್ತಿದೆ.
ಹೀಗಾಗಿ ಮತ್ತೊಂದು ಅವಧಿಗೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು, ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಬೇಕು, ಗೌರವಯುತವಾಗಿ ರಾಜಕೀಯ ನಿವೃತ್ತಿ ಪಡೆಯಬೇಕು ಅನ್ನುವುದು ಅವರ ಇಚ್ಛೆ. ಆ ಸಲುವಾಗಿ ಅವರು 2023ರ ಚುನಾವಣೆಗೆ ಭರ್ಜರಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಈಗಾಗಲೇ ಜೆಡಿಎಸ್ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವ ಸಾಧ್ಯತೆಗಳು ದಟ್ಟವಾಗಿದೆ. ಜೊತೆಗೆ ದಳಪತಿಗಳು ಸಿದ್ದರಾಮಯ್ಯ ಅಂದ್ರೆ ಉರಿದು ಬೀಳುತ್ತಿದ್ದಾರೆ.
ಹೀಗಾಗಿ ನಾನೇನು ಅನ್ನುವುದನ್ನು ತೋರಿಸಲೇಬೇಕು ಅನ್ನುವುದು ಸಿದ್ದರಾಮಯ್ಯ ನಿರ್ಧಾರ.
ಈ ಎಲ್ಲಾ ಕಾರಣಗಳಿಂದ ಸಿದ್ದರಾಮಯ್ಯ ‘ಹಿಂದ’ ಸಂಘಟನೆಗೆ ಚಾಲನೆ ನೀಡಲಾಗಿದೆ. ಈ ಹಿಂದೆ ಅಹಿಂದ – ಅಲ್ಪಸಂಖ್ಯಾತ, ಹಿಂದುಳಿತ ದಲಿತ ಸಂಘಟನೆ ಮಾಡಿದ್ದ ಸಿದ್ದರಾಮಯ್ಯ ಈ ಬಾರಿ ಅಲ್ಪಸಂಖ್ಯಾತ ಕೈ ಬಿಟ್ಟಿದ್ದಾರೆ.
ಈಗಾಗಲೇ ಹಿಂದ ಸಂಘಟನೆಗೆ ಅಧಿಕೃತ ಚಾಲನೆ ದೊರೆತಿದ್ದು, ಬುಧವಾರ ಪ್ರಮುಖ ಹಿಂದುಳಿದ ಮತ್ತು ದಲಿತ ಸಂಘಟನೆ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.
ಮಾರ್ಚ್ ಕೊನೆಯ ವಾರದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಸನ್ಮಾನದ ನೆಪದಲ್ಲಿ ಕಲಬುರಗಿಯಲ್ಲಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಸಮಿತಿ ಕೂಡಾ ರಚನೆಯಾಗಿದೆ.
ಕಲಬುರಗಿ ಬಳಿಕ ಬೆಳಗಾವಿ, ಬೆಂಗಳೂರು ಮತ್ತು ಮೈಸೂರಿನಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.
ಸಿದ್ದರಾಮಯ್ಯ ಅವರ ಈ ನಡೆ ಕಾಂಗ್ರೆಸ್ ಹಲವು ನಾಯಕರಿಗೆ ಬಿಸಿ ತುಪ್ಪವಾಗಲಿದೆ. 2023ರ ಚುನಾವಣೆಯಲ್ಲಾದರೂ ಸಿಎಂ ಪದವಿಗೇರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಹೀಗೆ ಸಾಲು ಸಾಲು ನಾಯಕರು ಕನಸು ಕಾಣುತ್ತಿದ್ದಾರೆ.
ಒಂದು ವೇಳೆ ಸಿದ್ದರಾಮಯ್ಯ ಅವರ ಹಿಂದ ಹೋರಾಟ ಯಶಸ್ವಿಯಾಯ್ತು, ಕಾಂಗ್ರೆಸ್ ಬಹುಮತ ಪಡೆಯಿತು ಅಂದ್ರೆ ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ.
ಡಿಕೆ ಶಿವಕುಮಾರ್ ಮಾಡಿದ ಎಲ್ಲಾ ಪ್ರಯತ್ನಗಳು ಅಲ್ಲಿಗೆ ನೀರಲ್ಲಿಟ್ಟ ಹೋಮವಾಗುತ್ತದೆ.
2005ರಲ್ಲಿ ಜೆಡಿಎಸ್ ನಲ್ಲಿದ್ದ ಸಂದರ್ಭದಲ್ಲಿ ಅಹಿಂದ ಸಂಘಟನೆ ಕಟ್ಟಿದ್ದ ಸಿದ್ದರಾಮಯ್ಯ ರಾಜ್ಯದ ಪ್ರಬಲ ನಾಯಕನಾಗಿ ಹೊರ ಹೊಮ್ಮಿದ್ದರು. ಆಗ ಸಿದ್ದರಾಮಯ್ಯ ಅವರ ಬೆಳವಣಿಗೆ ಕಂಡು ಗಾಬರಿಯಾಗಿದ್ದ ದಳಪತಿಗಳು ಅವರನ್ನು ಪಕ್ಷದಿಂದಲೇ ಉಚ್ಛಾಟಿಸಿದ್ದರು.
Discussion about this post