ಕಾಂಗ್ರೆಸ್ ಪಕ್ಷದ ಇದೀಗ ಮನೆಯೊಂದು ಮೂರು ಬಾಗಿಲು ಅನ್ನುವ ಪರಿಸ್ಥಿತಿಯಲ್ಲಿದೆ. ಒಂದು ಕಡೆ ಕಾಂಗ್ರೆಸ್ ಪಕ್ಷವನ್ನು ಹಿಡಿತದಲ್ಲಿಟ್ಟುಕೊಳ್ಳಲು ಕುಟುಂಬ ಪ್ರಯತ್ನಿಸುತ್ತಿದೆ. ಮತ್ತೊಂದು ಕಡೆ ಹಿರಿಯ ಗುಂಪು ಪಕ್ಷ ನಮ್ಮ ಅಧೀನದಲ್ಲಿರಬೇಕು ಎಂದು ಬಯಸಿದೆ. ಇನ್ನೊಂದು ಪಕ್ಷದಲ್ಲಿ ಬೆಳೆಯುತ್ತಿರುವ ಯುವಕರು ಕಾಂಗ್ರೆಸ್ ಪಕ್ಷದಲ್ಲಿ ಬೆಳೆಯಲು ಬಯಸುತ್ತಿದ್ದಾರೆ. ಹೀಗಾಗಿಯೇ ಸಮಸ್ಯೆ ಎದುರಾಗಿದೆ. ಅದು ಸಮಸ್ಯೆ ಸೃಷ್ಟಿಯಾಗಲು ಕಾರಣ ರಾಜ್ಯಸಭಾ ಚುನಾವಣೆ.
ಸರಣಿ ಸೋಲು, ಕಾರ್ಯಕರ್ತರ ನಿರುತ್ಸಾಹದಿಂದ ಬಳಲಿರುವ ಕಾಂಗ್ರೆಸ್ಗೆ ಚೈತನ್ಯ ತುಂಬುವ ಕಸರತ್ತು ಪ್ರಾರಂಭಗೊಂಡಿದೆ. ಇತ್ತೀಚೆಗಷ್ಟೇ ಈ ಬಗ್ಗೆ ಶಾಸಕ ಹ್ಯಾರಿಸ್ ಕೂಡಾ ಮಾತನಾಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಸೋಲುಗಳು ಪಾಠವಾಗಬೇಕೇ ಹೊರತು ಅಭ್ಯಾಸವಾಗಬಾರದು ಎಂದು ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ ಟ್ವೀಟ್ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಈ ನಡುವೆ ಪಕ್ಷಕ್ಕೆ ಬಲ ತುಂಬಿಸುವ ನಿಟ್ಟಿನಲ್ಲಿ ಪ್ರಿಯಾಂಕ ವಾದ್ರಾ ಅವರನ್ನು ರಾಜ್ಯಸಭೆಗೆ ಕಳುಹಿಸುವ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ.
ಗುಲಾಂ ನಬಿ ಆಜಾದ್, ಅಂಬಿಕಾ ಸೋನಿ ಮತ್ತು ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಹಿರಿಯ ನಾಯಕರ ರಾಜ್ಯಸಭೆ ಸದಸ್ಯತ್ವ ಅವಧಿ ಶೀಘ್ರದಲ್ಲಿಯೇ ಅಂತ್ಯಗೊಳ್ಳಲಿದೆ.
ಅವರ ಸ್ಥಾನಕ್ಕೆ ಯುವ ನಾಯಕರನ್ನು ಆಯ್ಕೆ ಮಾಡಬೇಕು ಅನ್ನುವುದು ಪಕ್ಷದ ಬಿಸಿ ರಕ್ತದ ನಾಯಕರ ಅಭಿಪ್ರಾಯ. ಹಿರಿಯ ನಾಯಕರು ಅಧಿಕಾರ ಅನುಭವಿಸಿದ್ದು ಸಾಕು, ಅವರು ನಮಗೆ ಮಾರ್ಗದರ್ಶಕರಾಗಿರಲಿ ನಾವು ಪಕ್ಷ ಸಂಘಟಿಸುತ್ತೇವೆ ಅನ್ನುವುದು ಇವರ ಮಾತು. ಹೀಗಾಗಿ ಹಳೆ ನಾಯಕರ ಬದಲಿಗೆ ಉತ್ಸಾಹಿ ಪ್ರಿಯಾಂಕಾ ವಾದ್ರಾ ಅವರನ್ನು ಬೆಂಬಲಿಸಲು ತಾವು ಸಿದ್ಧ ಅನ್ನುವ ಕೂಗು ಎದ್ದಿದೆ.
ಆದರೆ ಪ್ರಿಯಾಂಕಾ ಅವರನ್ನು ರಾಜ್ಯಸಭೆಗೆ ಕಳುಹಿಸಿದರೆ ಕುಟುಂಬ ರಾಜಕಾರಣದ ಕಳಂಕ ಅಂಟಿಕೊಳ್ಳುತ್ತದೆ. ಇದರಿಂದ ಬಿಜೆಪಿಗೆ ಅನುಕೂಲವಾಗಬಹುದು ಅನ್ನುವ ಭಯವೂ ಪಕ್ಷದ ನಾಯಕತ್ವಕ್ಕಿದೆ.
ಇನ್ನು ಕೆಲ ಹಳಬರು ಅಷ್ಟು ಸುಲಭವಾಗಿ ಯುವಕರಿಗೆ ಸ್ಥಾನ ಬಿಟ್ಟು ಕೊಡಲು ಸಿದ್ದರಿಲ್ಲ. ಈ ಕಾರಣದಿಂದ ಕಾಂಗ್ರೆಸ್ ಸೋಲಿನ ಅಂಚಿನಿಂದ ಹಿಂದೆ ಬರುತ್ತಿಲ್ಲ. ಕಾಂಗ್ರೆಸ್ ನ ಹಳೆಯ ಮುಖದ ಯೋಚನೆಗಳು ಈ ಕಾಲಕ್ಕೆ ಹೊಂದಾಣಿಕೆಯಾಗುತ್ತಿಲ್ಲ. ಹೊಸ ಮುಖಗಳಿಗೆ ಅವಕಾಶವಿಲ್ಲದ ಕಾರಣ, ಯುವ ಮತದಾರರು ಕಾಂಗ್ರೆಸ್ ನತ್ತ ಪ್ರೀತಿ ತೋರಿಸುತ್ತಿಲ್ಲ. ಯುವ ಮನಸ್ಸುಗಳಿಗೆ ಅಧಿಕಾರ ಹೋದ್ರೆ ಎಲ್ಲಿ ಕಾಂಗ್ರೆಸ್ ನ ಹಳೆಯ ಚಿಂತನೆಗಳಿಗೆ ಎಳ್ಳು ನೀರೂ ಬಿಡ್ತಾರೋ ಅನ್ನುವ ಭಯ ಇವರಿಗೆ.
Discussion about this post