ನಿವೃತ ಐಪಿಎಸ್ ಅಧಿಕಾರಿ, ಹಲವು ಶಿಕ್ಷಣ ಸಂಸ್ಥೆಗಳ ಒಡೆಯ, ಉದ್ದಿಮೆಗಳ ಮಾಲೀಕ, ರಾಜ್ಯಸಭಾ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡರಾಗಿರುವ ಕೆಸಿ ರಾಮಮೂರ್ತಿ ದಿಢೀರ್ ಬೆಳವಣಿಗೆಯೊಂದರಲ್ಲಿ ರಾಜ್ಯಸಭಾ ಸದಸ್ಯ ಸ್ಥಾನ ಮತ್ತು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.
2016ರಲ್ಲಿ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿದ್ದ ಅವರು ಬುಧವಾರ ರಾಜ್ಯಸಭೆ ಉಪಸಭಾಪತಿಗಳಾಗಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿರುವ ಅವರು ಕಾಂಗ್ರೆಸ್ ವೇಗಕ್ಕೂ, ನನ್ನ ವೇಗಕ್ಕೂ ಹೊಂದಾಣಿಕೆಯಾಗುತ್ತಿಲ್ಲ. ಕಾಂಗ್ರೆಸ್ ನಲ್ಲಿದ್ದು ಕೊಂಡು ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಬಿದೆಪಿ ಬಗ್ಗೆ ನನಗೆ ಒಲವಿದೆ. ಆ ಪಕ್ಷದ ಸಿದ್ದಾಂತ ಹತ್ತಿರವಾಗಿದೆ ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕು ಎಂಬ ಆಸೆಯಿಂದ ರಾಜೀನಾಮೆ ಕೊಡುತ್ತಿರುವುದಾಗಿ ರಾಮಮೂರ್ತಿ ಹೇಳಿದ್ದಾರೆ.
ಜೊತೆಗೆ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಲು ನಿರ್ಧರಿಸಿದ ವೇಳೆ ಕಾಂಗ್ರೆಸ್ ಅದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಇದೇ ಕಾರಣ ನಾನು ಪಕ್ಷ ಬಿಡುವ ನಿರ್ಧಾರ ಕೈಗೊಂಡಿದ್ದೇವೆ ಅಂದಿದ್ದಾರೆ ರಾಮಮೂರ್ತಿ.
ರಾಷ್ಟ್ರ ಮಟ್ಟದಲ್ಲಿ ಅಪರೇಷನ್ ಕಮಲ…
ರಾಮಮೂರ್ತಿಯವರು ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯಗಳಿಂದ ಪಕ್ಷವನ್ನು ಬಿಟ್ಟಿಲ್ಲ. ರಾಜ್ಯಸಭೆಯಲ್ಲಿ ಬಹುಮತದದ ಕೊರತೆ ಅನುಭವಿಸುತ್ತಿರುವ ಬಿಜೆಪಿಗೆ ಅಲ್ಲಿ ಸಂಖ್ಯಾಬಲವನ್ನು ವೃದ್ಧಿಸಿಕೊಳ್ಳಬೇಕಾಗಿದೆ. ಕಳೆದ ಮುಂಗಾರು ಅಧಿವೇಶನದಲ್ಲಿ 370ನೇ ವಿಧಿ ಮತ್ತು ತ್ರಿವಳಿ ತಲಾಖ್ ಮಸೂದೆ ಅಂಗೀಕಾರ ಪಡೆಯುವಷ್ಟರಲ್ಲಿ ಬಿಜೆಪಿಗೆ ಸಾಕು ಸಾಕಾಗಿತ್ತು. ಹೀಗಾಗಿ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಹೀಗಾಗಬಾರದೆಂದು ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವುದು ಸ್ಪಷ್ಟ.
ಐಟಿ ದಾಳಿ ಭೀತಿ….
ಇನ್ನು ರಾಮಮೂರ್ತಿ ರಾಜೀನಾಮೆ ಕುರಿತಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಆದಾಯ ತೆರಿಗೆ ಇಲಾಖೆಯ ಭಯದಿಂದ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ನಮ್ಮ ನಾಯಕರನ್ನು ಬೆದರಿಸುವುದನ್ನು ಬಿಜೆಪಿ ವ್ಯಾಪಾರ ಮಾಡಿಕೊಂಡಿದೆ ಎಂದು ಟಟೀಕಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಮಮೂರ್ತಿ ನಾನು ಭಯ ಅಥವ ಆಮಿಷಕ್ಕೆ ಬಲಿಯಾಗಿ ರಾಜೀನಾಮೆ ಕೊಡುತ್ತಿಲ್ಲ ಅಂದಿದ್ದಾರೆ.
ಆದರೂ ಕರ್ನಾಟಕದ ಹಲವು ರಾಜಕಾರಣಿಗಳ ವಿದ್ಯಾ ಸಂಸ್ಥೆಗಳ ಮೇಲೆ ಐಟಿ ಇಲಾಖೆ ಮುಗಿ ಬಿದ್ದಿರುವ ಬೆನ್ನಲ್ಲೇ ಶಿಕ್ಷಣ ಸಂಸ್ಥೆಗಳ ಒಡೆಯರಾಗಿರುವ ರಾಜಕಾರಣಿ ರಾಜೀನಾಮೆ ಕೊಡುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
Discussion about this post