ಕೊರೋನಾ ಕಾರಣದಿಂದ ಈಗಾಗಲೋ ಕೋಟಿ ಮಂದಿ ಕೆಲಸ ಕಳೆದುಕೊಂಡಿದ್ದಾರೆ ಅನ್ನುತ್ತಿದೆ ಒಂದು ಲೆಕ್ಕ. ಹಾಗಾದ್ರೆ ಕೆಲಸ ಕಳೆದುಕೊಂಡವರು ಮುಂದೆ ಬದುಕುವುದಾದರೂ ಹೇಗೆ, ಅಯ್ಯೋ ಬದುಕಲು ನೂರಾರು ಹಾದಿಗಳಿಲ್ವ, ಸಾಧಿಸುವ ಛಲವೊಂದಿರಬೇಕು ಅನ್ನುವುದು ಹಳೆ ಡೈಲಾಗ್ ಆಯ್ತು. ಕೊರೋನಾ ಅಬ್ಬರ ಬಳಿಕ ಸಾಧಿಸುವ ಛಲವಿದ್ದರೂ ಅವಕಾಶಗಳಿಲ್ಲ.
ಕೊರೋನಾ ಕಾರಣದಿಂದ ಉದ್ಯೋಗ ಕಳೆದುಕೊಂಡವರ ಪೈಕಿ ಬಹುತೇಕರದ್ದು ಶೋಚನೀಯ ಪರಿಸ್ಥಿತಿ.ಇದಕ್ಕೆ ಶಿಕ್ಷಕರು ಕೂಡಾ ಹೊರತಲ್ಲ. ಸರ್ಕಾರಿ ಶಿಕ್ಷಕರಾದವರಿಗೆ ಸಂಬಳ ಬರುತ್ತಿದ ಅನ್ನುವುದೊಂದು ನೆಮ್ಮದಿ. ಆದರೆ ಖಾಸಗಿ ಶಾಲೆಗಳು ಈಗಾಗಲೇ ಸಂಬಳ ಕಟ್ ಮಾಡಲಾರಂಭಿಸಿದೆ.
ಇನ್ನು ಅತಿಥಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವವರ ಪರಿಸ್ಥಿತಿ ಹೇಳ ತೀರದು. ಬಹುತೇಕ ಅವರ ಬದುಕು ಬೀದಿಗೆ ಬಂದಾಗಿದೆ. ಉತ್ತಮ ಪ್ರಜೆಗಳನ್ನು ರೂಪಿಸೋ ಜವಾಬ್ದಾರಿ ಹೊತ್ತಿರುವವರ ಕಥಯೇ ಹೀಗಾದರೆ ಹೇಗೆ.
ಮೊದಲ ಅಲೆ ಸಂದರ್ಭದಲ್ಲೂ ಹೀಗೆ ಕೊರೋನಾ ಅಬ್ಬರಿಸಿದಾಗ ಅನೇಕ ಶಿಕ್ಷಕರು ಬೇರೆ ಬೇರೆ ಕೆಲಸಗಳನ್ನು ಮಾಡಿ ಹೊಟ್ಟೆ ಹೊರೆದಿದ್ದರು. ಕೆಲವರು ಚಿಪ್ಸ್, ಸಂಡಿಗೆ ಮಾರಾಟ ಶುರುವಿಟ್ಟುಕೊಂಡಿದ್ದರು.
ಎಲ್ಲವೂ ಸರಿಯಾಯ್ತು ಎಂದು ಅಂದುಕೊಳ್ಳುವಷ್ಟರಲ್ಲಿ ಎರಡನೆ ಅಲೆಯ ಅಬ್ಬರ ಶುರುವಾಗಿದೆ. ಅತಿಥಿ ಶಿಕ್ಷಕರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಬಹುತೇಕ ಅತಿಥಿ ಶಿಕ್ಷಕರು ಅನ್ಯ ಉದ್ಯೋಗದತ್ತ ಮುಖ ಮಾಡಿದ್ದಾರೆ. ಒಬ್ಬ ಶಿಕ್ಷಕಿ ಮೀನು ಮಾರಾಟಕ್ಕೆ ಇಳಿದಿದ್ದಾರೆ, ಮತ್ತೊಬ್ಬರು ಗೂಡಂಗಡಿ ಪ್ರಾರಂಭಿಸಿದ್ದಾರೆ ಅಂದ್ರೆ ಪರಿಸ್ಥಿತಿ ಊಹಿಸಿಕೊಳ್ಳಿ. ರಾಜ್ಯದಲ್ಲಿ ಒಟ್ಟು 22 ಸಾವಿರ ಮಂದಿ ಅತಿಥಿ ಶಿಕ್ಷಕರಿದ್ದು ಎಲ್ಲರ ಕಥೆಯೂ ಇದೇ ಆಗಿದೆ. 2020ರ ಮಾರ್ಚ್ ತನಕದ ಗೌರವ ಧನ ಇವರಿಗೆ ಲಭಿಸಿದೆ, ಆ ನಂತರದ ಗೌರವ ಧನದ ಕಥೆ ದೇವರಿಗೆ ಗೊತ್ತು. ಪ್ರಸ್ತುತ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕರಿಗೆ 7,500 ಹಾಗೂ ಪ್ರೌಢ ಶಾಲೆಯ ಶಿಕ್ಷಕರಿಗೆ 8 ಸಾವಿರ ರೂಪಾಯಿ ಗೌರವ ಧನ ನೀಡಲಾಗುತ್ತಿದೆ.
ಈ ನಡುವೆ ಮಂಗಳೂರು ಬಲ್ಮಠದ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿರುವ ಪುತ್ತೂರಿನ ಚಿತ್ರಲೇಖ ಕಳೆದ 15 ತಿಂಗಳಿನಿಂದ ಕೆಲಸವಿಲ್ಲದೆ ಸೋತು ಹೋಗಿದ್ದಾರೆ. ಸರ್ಕಾರದ ಗೌರವ ಧನವೂ ಕೈ ಸೇರದ ಕಾರಣ ಇವರ ಪರಿಸ್ಥಿತಿ ಚಿಂತಾಜನಕವಾಗಿದೆ.ಪತಿ ದುಡಿದು ತರೋ ಹಣದಿಂದ ಸಂಸಾರ ನಡೆಸೋಣ ಅಂದ್ರೆ ಪತಿ ಫಾಸ್ಟ್ ಫುಡ್ ಅಂಗಡಿ ಇಟ್ಟುಕೊಂಡಿದ್ದಾರೆ. ಕೊರೋನಾ ಕಾರಣದಿಂದ ವ್ಯಾಪಾರ ಇಲ್ಲದಂತಾಗಿತ್ತು, ಲಾಕ್ ಡೌನ್ ಕಾರಣದಿಂದ ಅಂಗಡಿಗ ಬೀಗ ಹಾಕಲಾಗಿದೆ.
ಹೀಗಾಗಿ ಮೂರು ಮಕ್ಕಳ ಸಂಸಾರ ಸಾಗಿಸುವ ಸಲುವಾಗಿ ವಿಧಿಯಿಲ್ಲದ, ಚಿತ್ರಲೇಖಾ ಬೀಡಿ ಕಟ್ಟಲಾರಂಭಿಸಿದ್ದಾರೆ. ಚಾಕ್ ಹಿಡಿದು ಮಕ್ಕಳಿಗೆ ಬೋಧಿಸುತ್ತಿದ್ದ ಕೈಗಳು ಇದೀಗ ಬೀಡಿ ಸುತ್ತುತ್ತಿದೆ ಅಂದ್ರೆ ಪರಿಸ್ಥಿತಿ ಎಲ್ಲಿಗೆ ಬಂತು.
Discussion about this post