ಬೆಂಗಳೂರು : ಕೊರೋನಾ ನಿಯಂತ್ರಣದಲ್ಲಿದೆ ಎಂದು ಹೆಮ್ಮೆಯಿಂದ ಬೀಗುತ್ತಿದ್ದ ಕರ್ನಾಟಕಕ್ಕೆ ಆತಂಕ ಪ್ರಾರಂಭವಾಗಿದೆ.
ತಜ್ಞರ ಎಚ್ಚರಿಕೆಯಂತೆ ಕರ್ನಾಟಕದಲ್ಲಿ ಒಂದು ತಿಂಗಳು ತಡವಾಗಿ ಕೊರೋನಾ ಸೋಂಕಿನ ಎರಡನೆ ಅಲೆ ಎಂಟ್ರಿ ಕೊಟ್ಟಿದೆ. ಕರ್ನಾಟಕದಲ್ಲಿ ಮಾತ್ರ ಎರಡನೆಯ ಅಲೆ ಗೋಚರಿಸಿದ್ದು ಉಳಿದ ಜಿಲ್ಲೆಗಳಿಗೂ ಇದು ವ್ಯಾಪಿಸುವ ಸಾಧ್ಯತೆಗಳಿದೆ.
ಕೊರೋನಾ ನಿಯಂತ್ರಣ ಕಾನೂನುಗಳನ್ನು ಉಲ್ಲಂಘಿಸಿ ನಡೆಯುತ್ತಿರುವ ರಾಜಕೀಯ ಸಮಾವೇಶ, ಪ್ರತಿಭಟನೆ, ಮದುವೆ ಮುಂಜಿಗಳೇ ಕೊರೋನಾ ಹೆಚ್ಚಾಗಲು ಕಾರಣ ಎನ್ನಲಾಗಿದೆ.
ಜೊತೆಗೆ ರಾಜ್ಯದ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು ಕೂಡಾ ತನ್ನದೇ ಕೊಡುಗೆ ನೀಡುತ್ತಿದೆ.
ಹೀಗಾಗಿಯೇ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಎರಲಾರಂಭಿಸಿದೆ.
ಈ ನಡುವೆ ಚಿತ್ರಮಂದಿರಗಳಲ್ಲಿ ಶೇ100ರಷ್ಟು ಅವಕಾಶ ನೀಡಿರುವುದರಿಂದ ಕೊರೋನಾ ವ್ಯಾಪಕವಾಗಿ ಹರಡುವ ಆತಂಕ ಶುರುವಾಗಿದೆ.
ಈ ಹಿಂದೆ ಆರೋಗ್ಯ ಸಚಿವ ಡಾ. ಸುಧಾಕರ್ ಕೊಟ್ಟ ಎಚ್ಚರಿಕೆಯನ್ನು ನಿರ್ಲಕ್ಷ್ಯಿಸಿದ ಕಾರಣಕ್ಕೆ ದೊಡ್ಡ ದಂಡ ತೆರಬೇಕಾದ ಪರಿಸ್ಥಿತಿ ಎದುರಾಗಿದೆ.
ಚಿತ್ರಮಂದಿರಗಳಲ್ಲಿ ಶೇ 50ರಷ್ಟು ಅವಕಾಶ ಕೊಟ್ಟರೆ ಸಾಕು ಎಂದು ಸುಧಾಕರ್ ಹೇಳಿದ್ದರು.
ನಿನ್ನೆ ಬಿಡುಗಡೆಯಾದ ರಾಬರ್ಟ್ ಚಿತ್ರವನ್ನು ನೋಡಲು ಅಭಿಮಾನಿಗಳು ಮುಗಿ ಬಿದ್ದ ಶೈಲಿಯನ್ನು ನೋಡಿದರೆ ಕೊರೋನಾ ಮಹಾಮಾರಿ ಇಲ್ಲವೇನೋ ಅನ್ನುವಂತಿತ್ತು.
ದರ್ಶನ್ ಅಭಿಮಾನಿಗಳು ಸಾಮಾಜಿಕ ಅಂತರವನ್ನು ಮರೆತಿದ್ದು ಮಾತ್ರವಲ್ಲದೆ, ಮಾಸ್ಕ್ ಅನ್ನುವುದು ಮರೀಚಿಕೆಯಾಗಿತ್ತು. ಒಂದು ವೇಳೆ ಬಿಬಿಎಂಪಿ ಮಾರ್ಷಲ್ ಗಳು ಬರುತ್ತಿದ್ರೆ ಭರ್ಜರಿ ಫೈನ್ ಸಂಗ್ರಹವಾಗಿರೋದು.
ಕೇವಲ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬಹುತೇಕ ಚಿತ್ರಮಂದಿರಗಳ ಕಥೆಯೂ ಇದೇ ಆಗಿತ್ತು. ಇನ್ನು ಹಲವು ದಿನಗಳ ಕಾಲ ರಾಬರ್ಟ್ ಸಿನಿಮಾ ನೋಡಲು ಅಭಿಮಾನಿಗಳು ಮುಗಿ ಬೀಳಲಿದ್ದಾರೆ. ಈ ವೇಳೆ ಅಭಿಮಾನಿಗಳು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೇ ಹೋದ್ರೆ ಅಪಾಯ ಗ್ಯಾರಂಟಿ.
ಕೊರೋನಾ ಅಪಾಯ ಇನ್ನು ಇರೋ ಕಾರಣದಿಂದ ಚಿತ್ರಮಂದಿರಗಳಿಗೆ ತೆರಳುವ ಮಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲೇಬೇಕು.
Discussion about this post