ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಪ್ರಾರಂಭದ ಹಂತದಲ್ಲಿದೆ. 10 ದಿನಗಳ ಹಿಂದೆ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ರೆ ಎರಡನೆ ಅಲೆಯ ಅಬ್ಬರವನ್ನು ತಗ್ಗಿಸಬಹುದಾಗಿತ್ತು.
ಆದರೆ ಮಾಸ್ಕ್ ಹಾಕದ ಪೆಟ್ರೋಲ್ ಬಂಕ್ ಹುಡುಗನನ್ನು ಹಿಡಿಯುವ ಗಡಿಬಿಡಿಯಲ್ಲಿದ್ದ ಜಿಲ್ಲಾಡಳಿತ ಕರಾವಳಿಯ ಜಾತ್ರೆಯ ಸಂಭ್ರಮದ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಕೆಲ ದಿನಗಳ ಹಿಂದೆ ನಡೆದ ಕಂಬಳ ಸಂದರ್ಭದಲ್ಲೂ ಕೊರೋನಾ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಹೇಳಿ ಕೇಳಿ ಕರಾವಳಿಯಲ್ಲಿ ಇದು ಜಾತ್ರೆಯ ಸಂಭ್ರಮದ ಸಂದರ್ಭ. ಹೀಗಾಗಿ ಹತ್ತು ಹಲವು ಕಡೆಗಳಲ್ಲಿ ಕೋಲ, ನೇಮ, ರಥೋತ್ಸವಗಳು ಅದ್ದೂರಿಯಿಂದ ನಡೆದಿದೆ. ಪ್ರಸಿದ್ಧ ದೇವಸ್ಥಾನಗಳ ಜಾತ್ರೆಗಳಿಗೆ ಸಾವಿರಾರು ಜನ ಸೇರಿದ್ದಾರೆ. ಪೊಲೀಸರು, ಆರೋಗ್ಯ ಇಲಾಖೆ ಮಂದಿ ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ ಎಂದು ಮೈಕ್ ನಲ್ಲಿ ಪ್ರಚಾರ ಮಾಡಿದ್ದು ಬಿಟ್ಟರೆ ಮತ್ತೇನೂ ಮಾಡಲಿಲ್ಲ. ಜಿಲ್ಲಾಧಿಕಾರಿಗಳು ಬಸ್ ಹತ್ತಿ ಪ್ರಚಾರ ಗಿಟ್ಟಿಸಿಕೊಳ್ಳುವ ಬದಲು ಪುತ್ತೂರು, ಕಟೀಲು, ಮಂಗಳಾದೇವಿ, ಪೊಳಲಿ, ಉಳ್ಳಾಲ ಜಾತ್ರಾ ಸ್ಥಳಗಳಿಗೆ ಭೇಟಿ ಕೊಡುತ್ತಿದ್ರೆ ವಾಸ್ತವದ ಅರಿವಾಗಿರುತ್ತಿತ್ತು.
ಹಾಗೆಲ್ಲಾ ಭೇಟಿ ಕೊಡುವುದು ಆಸ್ತಿಕರ ಮನಸ್ಸಿಗೆ ನೋವಾಗುತ್ತದೆ ಅನ್ನುವುದಾದ್ರೆ ದೇವಸ್ಥಾನದ ಆಡಳಿತ ಮಂಡಳಿಯವರನ್ನು ಪ್ರೀತಿಯಿಂದ ಕರೆದು ಕೊರೋನಾ ಎರಡನೆ ಅಲೆ ಶುರುವಾಗಿದೆ.ಮತ್ತೆ ಜನರ ಜೀವನದೊಂದಿಗೆ ಚೆಲ್ಲಾಟವಾಡುವುದು ಬೇಡ. ಹೀಗಾಗಿ ಜಾತ್ರೆ, ರಥೋತ್ಸವಗಳನ್ನು ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಆಚರಿಸಿ, ಜನ ಸೇರಿಸಿದ್ರೆ ನಿಮ್ಮ ಮೇಲೆಯೇ ಕೇಸು ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಡಬಹುದಿತ್ತು. ಬಹುತೇಕ ದೇವಸ್ಥಾನಗಳ ಆಡಳಿತ ಮಂಡಳಿಯ ಮುಖ್ಯಸ್ಥರು ರಾಜಕೀಯ ನಾಯಕರೇ ಆಗಿರುವುದರಿಂದ ಖಂಡಿತಾ ಜಿಲ್ಲಾಡಳಿತದ ಮಾತಿಗೆ ಕಿವಿಗೊಡುತ್ತಿದ್ದರು.
ಆದರೆ ಈಗ ಸಾಮಾಜಿಕ ಅಂತರ, ಮಾಸ್ಕ್ ಹೀಗೆ ಕೊರೋನಾ ನಿಯಮಗಳನ್ನು ಮರೆತು ಜನ ಭಕ್ತಿಯಲ್ಲಿ ಮಿಂದೆದ್ದಿದ್ದಾರೆ. ಕರಾವಳಿಯ ಜಾತ್ರೆಯ ಸಂಭ್ರಮದಲ್ಲಿ ಬೆಂಗಳೂರಿನಿಂದ ಬಂದ ಅದೆಷ್ಟು ಮಂದಿ ಪಾಲ್ಗೊಂಡಿದ್ದಾರೆ ಅನ್ನುವುದು ಗೊತ್ತಿಲ್ಲ. ಬೆಂಗಳೂರಿನಿಂದ ಬಂದ ಅದೆಷ್ಟು ಮಂದಿಗೆ ರೋಗಲಕ್ಷಣಗಳಿಲ್ಲದೆ ಸೋಂಕು ತಗುಲಿತ್ತೋ ಗೊತ್ತಿಲ್ಲ. ಅವರೆಷ್ಟು ಮಂದಿಗೆ ಅದನ್ನು ಹಂಚಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಇನ್ನು 10 ದಿನ ಕಳೆಯುವಷ್ಟು ಹೊತ್ತಿಗೆ ಕರಾವಳಿಯಲ್ಲಿ ಕೊರೋನಾ ಸೋಂಕಿನ ಎರಡನೆ ಅಲೆಯ ಸ್ಪಷ್ಟ ಚಿತ್ರಣ ದೊರೆಯಲಿದೆ.
ಈ ನಡುವೆ ಜಾತ್ರೆಯ ಸಂದರ್ಭದಲ್ಲಿ, ರಾಜಕೀಯ ಸಮಾವೇಶದ ಸಂದರ್ಭದಲ್ಲಿ ಮೌನವಾಗಿದ್ದ ಜಿಲ್ಲಾಡಳಿತ ಈಗ ಗೃಹ ಪ್ರವೇಶ, ಮದುವೆಗೆ ಹತ್ತು ಹಲವು ನಿಯಮಗಳನ್ನು ವಿಧಿಸಲಾರಂಭಿಸಿದೆ. ಜಾತ್ರೆಗೆ ಸೇರುವಷ್ಟು ಜನ ನಮ್ಮ ಕಾರ್ಯಕ್ರಮಕ್ಕೆ ಸೇರೋದಿಲ್ಲ ಅಂದರು ಕೇಳುವವರು ಯಾರೂ ಇಲ್ಲ. ಹೀಗಾಗಿಯೇ ಜನ ಆಕ್ರೋಶ ಹೊಂದಿದ್ದಾರೆ. ಲಕ್ಷಾಂತರ ಜನ ಸೇರಿ ಜಾತ್ರೆ ಮಾಡುವಾದ ಕೊರೋನಾ ಬರಲಿಲ್ಲ. ಈಗ ನಮ್ಮ ಮನೆಯ ಕಾರ್ಯಕ್ರಮದ ಸಂದರ್ಭದಲ್ಲಿ ಕೊರೋನಾ ಬರುತ್ತದೆಯೇ ಎಂದು ಪ್ರಶ್ನಿಸುತ್ತಿದ್ದಾರೆ.
Discussion about this post