ಚಿಕ್ಕಬಳ್ಳಾಪುರ : ಅಕ್ರಮ ಗೋ ಸಾಗಾಟ, ಅಕ್ರಮ ಗೋವಧೆ ವಿರುದ್ಧ ಈಗಾಗಲೇ ಅನೇಕ ಕಾನೂನುಗಳಿದೆ. ಆದರೆ ದಂಧೆಕೋರರಿಗೆ ಕಾನೂನಿನ ಭಯವೇ ಇಲ್ಲದಂತಾಗಿದ್ದು, ಅಕ್ರಮವಾಗಿ ಜಾನುವಾರು ಸಾಗಾಟ ಮುಂದುವರಿದಿದೆ. ಈ ನಡುವೆ ಚಿಕ್ಕಬಳ್ಳಾಪುರದಲ್ಲಿ ಮೂರು ಲಾರಿ ಲೋಡ್ ಅಂದ್ರೆ ಅಂದಾಜು 30 ಟನ್ ಗೋವುಗಳ ಕೊಂಬು ಹಾಗೂ ಮೂಳೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಕೊಂಬು ಮೂಳೆ ಸಾಗಾಟವಾಗುತ್ತಿದೆ ಅಂದ್ರೆ ಅದೆಷ್ಟು ಗೋವುಗಳನ್ನು ಹತ್ಯೆ ಮಾಡಿರಬೇಕು. ಬೃಹತ್ ಗಾತ್ರದ ಕಂಟೈನರ್ ಲಾರಿ, ಕ್ಯಾಂಟರ್ ಗಳಲ್ಲಿ ಅಕ್ರಮವಾಗಿ ಕೊಂಬು ಮತ್ತು ಮೂಳೆ ರವಾನೆಯಾಗುತ್ತಿದೆ ಅನ್ನುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ಬಾಗೇಪಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂರು ಲಾರಿಗಳನ್ನು ಮಾಲು ಸಮೇತ ವಶ ಪಡಿಸಿಕೊಂಡಿದ್ದಾರೆ.
ಘಟನೆ ಕುರಿತಂತೆ ಸದಾಖತ್ ಆಲಿ, ತೌಸಿಫ್, ಮಹಮ್ಮದ್ ಬಷೀರ್ ಅನ್ಸಾರಿ ಎಂಬವರನ್ನು ಬಂಧಿಸಲಾಗಿದೆ. ಲಭ್ಯ ಮಾಹಿತಿಗಳ ಪ್ರಕಾರ ಹೈದರಬಾದ್ ನಿಂದ ಬಾಗೇಪಲ್ಲಿಗೆ ಕೊಂಬು ಮತ್ತು ಮೂಳೆಗಳು ಬಂದಿದ್ದು, ಸ್ಥಳೀಯ ವ್ಯಕ್ತಿಯೊಬ್ಬ ಮೂಳೆ ಮತ್ತು ಕೊಂಬುಗಳನ್ನು ಪುಡಿ ಮಾಡಿ ಬೇರೆ ಕಡೆ ಸಾಗಾಟ ಮಾಡುತ್ತಿದ್ದ ಎಂದು ಗೊತ್ತಾಗಿದೆ.
Discussion about this post