ಮಂಗಳೂರು : ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಉಂಟಾಗಿರುವ ತೌಕ್ತೆ ಚಂಡಮಾರುತದ ಅಬ್ಬರ ಜೋರಾಗಿದೆ. ಮಳೆಯ ಅಬ್ಬರದಿಂದ ಕರಾವಳಿ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈಗಾಗಲೇ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಮುಂಜಾನೆ 3 ಗಂಟೆಯಿಂದ ನಿರಂತರ ಮಳೆ ಸುರಿಯುತ್ತಿದೆ.
ಮತ್ತೊಂದು ಕಡೆ ಮಂಗಳೂರಿನ ಕಡಲ ಕಿನಾರೆಯಲ್ಲಿ ಸಮುದ್ರದ ಅಲೆಗಳು ಅಬ್ಬರಿಸುತ್ತಿದೆ. ರಕ್ಕಸ ಸ್ವರೂಪಿ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಕಡಲ ಮಕ್ಕಳ ನಿರೀಕ್ಷೆಗೂ ಮೀರಿ ಅಲೆಗಳು ದಡವನ್ನು ಬಡಿಯುತ್ತಿದೆ. ಗಂಟೆಯಿಂದ ಗಂಟೆಗೆ ಅಲೆಗಳ ಅಬ್ಬರ ಹೆಚ್ಚಾಗಿದ್ದು, ದಡದಲ್ಲಿರುವ ಅನೇಕ ಕಟ್ಟಡಳನ್ನು ತನ್ನ ಒಡಲಿಗೆ ಸೇರಿಸಿಕೊಂಡಿದೆ.
ಸಸಿಹಿತ್ಲು ಪ್ರದೇಶದಲ್ಲಿ ಕಟ್ಟಡವೊಂದು ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದಿದೆ.
ಉಳ್ಳಾಲ ವ್ಯಾಪ್ತಿಯ ಸೋಮೇಶ್ವರದಲ್ಲಿ ಸ್ಮಶಾನವೊಂದು ಸಮುದ್ರಪಾಲಾಗಿದೆ.
ಇನ್ನು ಉಡುಪಿಯಲ್ಲಿ ಚಂಡಮಾರುತದ ಪರಿಣಾಮ ಮಲ್ಪೆ, ಪಡುಕೆರೆ, ಮರವಂತೆ ಹಾಗೂ ಮಟ್ಟು ಭಾಗದಲ್ಲಿ ಕಡಲು ತೀವ್ರಗೊಂಡಿದೆ. ಕೆಲವೆಡೆ ಕಡಲ್ಕೊರೆತ ಹಾಗೂ ತೀವ್ರ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 3 ದಿನಗಳ ಕಾಲ ಉಡುಪಿ, ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮೇ 18ರವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಇಂದು ಹಾಗೂ ನಾಳೆ ಉಡುಪಿಯಲ್ಲಿ ರೆಡ್ ಅಲರ್ಟ್ ಜಾರಿ ಮಾಡಲಾಗಿದೆ.
ಮತ್ತೊಂದು ಕಡೆ ಕಾಸರಗೋಡು ವ್ಯಾಪ್ತಿಯ ಉಪ್ಪಳ, ಮುಸೋಡಿ, ಕಾಸರಗೋಡು ಚೇರಂಗೈ ಮೊದಲಾದೆಡೆ ಅಬ್ಬರ ಹೆಚ್ಚಾಗಿದೆ. ಉಪ್ಪಳ, ಮುಸೋಡಿ ತೀರದಲ್ಲಿ ಎರಡು ಮನೆಗಳು ಸಮುದ್ರಪಾಲಾಗಿವೆ. ಮನೆಯವರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದರಿಂದ ಭಾರೀ ಅನಾಹುತ ತಪ್ಪಿದೆ.
ಮತ್ತೊಂದು ಕಡೆ ಕಾಸರಗೋಡು ವ್ಯಾಪ್ತಿಯ ಉಪ್ಪಳ, ಮುಸೋಡಿ, ಕಾಸರಗೋಡು ಚೇರಂಗೈ ಮೊದಲಾದೆಡೆ ಅಬ್ಬರ ಹೆಚ್ಚಾಗಿದೆ. ಉಪ್ಪಳ, ಮುಸೋಡಿ ತೀರದಲ್ಲಿ ಎರಡು ಮನೆಗಳು ಸಮುದ್ರಪಾಲಾಗಿವೆ. ಮನೆಯವರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದರಿಂದ ಭಾರೀ ಅನಾಹುತ ತಪ್ಪಿದೆ.
ಮುಸೋಡಿಯ ಮೂಸಾ ಎಂಬವರ ಎರಡಂತಸ್ತಿನ ಮನೆ ಇಂದು ಬೆಳಿಗ್ಗೆ ನೆಲಕಚ್ಚಿದೆ. ಇನ್ನೊಂದು ಮನೆ ಕುಸಿದಿದೆ. ಐದಕ್ಕೂ ಅಧಿಕ ಮನೆಗಳು ಅಪಾಯದಲ್ಲಿದೆ. ಈ ಮನೆಯಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕಳೆದ ಎರಡು ಮೂರು ದಿನಗಳಿಂದ ಮುಸೋಡಿ ತೀರದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಚೇರಂಗೈ ತೀರದ ನಾಲ್ಕು ಮನೆಗಳಿಗೆ ಸಮುದ್ರ ನೀರು ನುಗ್ಗಿದ್ದು, ಕುಟುಂಬಗಳನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ.
ವೆಳ್ಳರಿಕುಂಡು ಬಳಾಲ್ನಲ್ಲಿ ಗಾಳಿಯಿಂದ ಎರಡು ಮನೆಗಳು ಭಾಗಶಃ ಕುಸಿದಿದೆ. ಚಿತ್ತಾರಿಯಲ್ಲಿ ಎರಡು ಮನೆಗಳಿಗೆ ನೆರೆ ನೀರು ನುಗ್ಗಿದೆ
Discussion about this post