ಮಂಗಳೂರು : ಬುದ್ಧಿವಂತರ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ನಿಯಂತ್ರಣಕ್ಕೆ ಬರುವ ಲಕ್ಷಣಗಳಿಲ್ಲ. ನಿರೀಕ್ಷೆಯಂತೆ ಜೂನ್ 21ಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಅನ್ ಲಾಕ್ ಆಗಬೇಕಾಗಿತ್ತು. ಆದರೆ ಈಗಿರುವ ಪಾಸಿಟಿವಿಟಿ ರೇಟ್ ಗಮನಿಸಿದರೆ ಜುಲೈ ಮಧ್ಯ ಭಾಗದಲ್ಲೂ ಕೊರೋನಾ ನಿಯಂತ್ರಣಕ್ಕೆ ಬರೋದು ಅನುಮಾನ.
ಗುರುವಾರ ಜಿಲ್ಲೆಯಲ್ಲಿ 11 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದು, 679 ಮಂದಿಯಲ್ಲಿ ಕೊರೋನಾ ಸೋಂಕು ಕಂಡು ಬಂದಿದೆ. ಇನ್ನು 657 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವಿಟಿ ದರ 7.17 ರಷ್ಟಿದೆ. ಇನ್ನು ಜಿಲ್ಲೆಯಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 1009ಕ್ಕೆ ತಲುಪಿದೆ.ಪ್ರಸ್ತುತ ಜಿಲ್ಲೆಯಲ್ಲಿ 6605 ಸಕ್ರಿಯ ಪ್ರಕರಣಗಳಿದೆ.
ಕೊರೋನಾ ನಿಯಂತ್ರಣದಲ್ಲಿ ಜಿಲ್ಲೆ ಸೋತಿದೆಲ್ಲಿ…?
ಹಾಗೇ ನೋಡಿದರೆ ಕರಾವಳಿಯಲ್ಲಿ ಸೋಂಕು ಅತ್ಯಂತ ವೇಗವಾಗಿ ನಿಯಂತ್ರಣಕ್ಕೆ ಬರಬೇಕಾಗಿತ್ತು. ಸಾಕಷ್ಟು ಆರೋಗ್ಯ ಸಂಸ್ಥೆಗಳಿದೆ. ಚುರುಕಾಗಿ ಕೆಲಸ ಮಾಡುತ್ತೇವೆ ಅನ್ನುವ ಜನಪ್ರತಿನಿಧಿಗಳಿದ್ದಾರೆ. ಹೀಗಿದ್ದರೂ ಸರ್ಕಾರ ಜಾರಿಗೆ ತಂದಿರುವ ಲಾಕ್ ಡೌನ್ ಅನ್ನು ಜಾರಿಗೊಳಿಸುವಲ್ಲಿ ಜಿಲ್ಲೆ ವಿಫಲವಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ಕರಾವಳಿಯ ಧಾರ್ಮಿಕ ಕ್ಷೇತ್ರಗಳಿಗೆ ಜನ ನುಗ್ಗಲಾರಂಭಿಸಿದ್ದಾರೆ. ದೇವಸ್ಥಾನಗಳು ತೆರೆದಿದೆಯೋ ಅನ್ನುವ ಅನುಮಾನ ಕಾಡುವಂತಿದೆ ಬಂದವರ ವರ್ತನೆ.
ಈಗಾಗಲೇ ಶ್ರೀಸುಬ್ರಹ್ಮಣ್ಯಕ್ಕೆ ಬಂದ ಭಕ್ತರನ್ನು ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಹಿಂದಕ್ಕೆ ಕಳುಹಿಸಿದ್ದಾರೆ. ಹಾಗೇ ಸುಬ್ರಹ್ಮಣ್ಯಕ್ಕೆ ಬಂದವರು ಧರ್ಮಸ್ಥಳಕ್ಕೂ ಭೇಟಿ ಕೊಡುತ್ತಿದ್ದಾರೆ.

ಆದರೆ ಇಲ್ಲಿ ಭಕ್ತರನ್ನು ತಡೆಯವ ಸಾಹಸಕ್ಕೆ ಗ್ರಾಮಪಂಚಾಯತ್ ಮುಂದಾಗಿಲ್ಲ. ಸಾಮಾಜಿಕ ಅಂತರ ಮಾಸ್ಕ್ ಮರೆತ ಜನ ಸ್ನಾನ ಘಟ್ಟದಲ್ಲಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್ ಎಚ್ಚೆತ್ತುಕೊಳ್ಳದ ಹೊರತು ಪಾಸಿಟಿವಿಟಿ ರೇಟ್ ಕಡಿಮೆ ಮಾಡಲು ಸಾಧ್ಯವಿಲ್ಲ.
Discussion about this post