ಬೆಂಗಳೂರು : ಮಾಜಿ ಭೂಗತ ದೊರೆ ದಿವಂಗತ ಮುತ್ತಪ್ಪ ರೈ ಆಸ್ತಿ ವಿವಾದ ಸಂಬಂಧ ಎರಡನೇ ಪತ್ನಿ ಅನುರಾಧ ಪ್ರಾರಂಭಿಸಿರುವ ಕಾನೂನು ಹೋರಾಟಕ್ಕೆ ಮೊದಲ ಹಂತದಲ್ಲಿ ಜಯ ಸಿಕ್ಕಿದೆ.
ಅಸ್ತಿ ವಿವಾದ ಸಂಬಂಧ ಅನುರಾಧ ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡಿರುವ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಸದ್ಯಕ್ಕೆ ಯಾವುದೇ ಆಸ್ತಿಯನ್ನು ಪರಭಾರೆ ಮಾಡದಂತೆ ಮಧ್ಯಂತರ ಆದೇಶ ನೀಡಿದೆ.
ಈ ಸಂಬಂಧ ಹೊರಡಿಸಿರುವ ಮಧ್ಯಂತರ ಆದೇಶದಲ್ಲಿ ಮುತ್ತಪ್ಪ ರೈ ಪುತ್ರ ರಾಕಿ, ರಿಕ್ಕಿ ಸೇರಿ 17 ಮಂದಿ ಪ್ರತಿವಾದಿಗಳಿಗೆ ಈ ಸೂಚನೆ ನೀಡಿದೆ.

ಈ ಹಿಂದೆ ಮುತ್ತಪ್ಪ ರೈ ನಿಧನ ಬಳಿಕ ಬಯಲಾಗಿದ್ದ ವಿಲ್ ಬಗ್ಗೆ ಅಸಮಾಧಾನಗೊಂಡಿದ್ದ ಅನುರಾಧ, ಮುತ್ತಪ್ಪ ರೈ ಆಸ್ತಿಯಲ್ಲಿ ಪಾಲು ಕೋರಿ ಸಿಟಿ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಒಟ್ಟು ಆಸ್ತಿಯಲ್ಲಿ ಮೂರನೇ ಒಂದು ಭಾಗ ತನಗೆ ಸೇರಬೇಕು ಅನ್ನುವುದು ಅವರ ವಾದವಾಗಿತ್ತು.
ಆಗ ಅನುರಾಧ ಮುತ್ತಪ್ಪ ರೈ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಪುತ್ರ ಸೇರಿ 17 ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿತ್ತು. ಮುತ್ತಪ್ಪ ರೈ ಅವರು ತಮ್ಮ ಆಸ್ತಿ ವಿಚಾರವಾಗಿ ವಿಲ್ ಬರೆದಿದ್ದಾರೆಂದು ಹೇಳಲಾಗಿತ್ತು. ಆದರೆ, ಈ ವಿಷಯ ತಮಗೆ ತಿಳಿದಿಲ್ಲ ಎಂದು ಅನುರಾಧ ಅವರ ಪರ ವಕೀಲರು ಹೇಳಿದ್ದರು.
Discussion about this post