ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಬೇಕು, ಸದಾನಂದಗೌಡರನ್ನು ಮಣಿಸಬೇಕು ಅನ್ನುವುದು ದೇವೇಗೌಡರ ಆಸೆಯಾಗಿತ್ತು. ಆದರೆ ಅದ್ಯಾಕೋ ಸೋಲಿನ ಭೀತಿ ಕಾಡಿದ ಹಿನ್ನಲೆಯಲ್ಲಿ ದೇವೇಗೌಡರು ತುಮಕೂರಿಗೆ ವಲಸೆ ಹೋಗಿದ್ದಾರೆ.
ಈ ನಡುವೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಬಿಗ್ಬಾಸ್ ಸೀಸನ್ 6 ವಿನ್ನರ್ ಶಶಿಕುಮಾರ್ ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿ ಆಗ್ತಾರೆ ಅನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಮೂಲದ ಶಶಿಕುಮಾರ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಶಶಿಕುಮಾರ್ ಭಾವ ಸತೀಶ್ ಮೂಲತಃ ಹಾಸನ ಜಿಲ್ಲೆಯವರು ಆಗಿದ್ದು, ದೇವೇಗೌಡರ ಕುಟುಂಬದ ಜೊತೆ ಶಶಿ ಕುಟುಂಬ ಆತ್ಮೀಯವಾಗಿದೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಮಾಧ್ಯಮದೊಂದಿಗೆ ಮಾತನಾಡಿರುವ ಶಶಿ ಅವರ ಭಾವ ಸತೀಶ್ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಪ್ರತಿನಿಧಿಸಲು ಅವಕಾಶ ಬಂದಿದ್ದು ನಿಜ. ಈ ಬಗ್ಗೆ ಮನೆಯ ಎಲ್ಲಾ ಸದಸ್ಯರು ಸೇರಿಕೊಂಡು ಒಮ್ಮತದ ಅಭಿಪ್ರಾಯ ಬಂದ ಮೇಲೆ ನಾವು ಅದನ್ನು ಅಧಿಕೃತವಾಗಿ ಪ್ರಕಟಿಸುತ್ತೇವೆ ಅಂದಿದ್ದಾರೆ.
ಇನ್ನು ಶಶಿ ಕೂಡಾ ಈ ಬಗ್ಗೆ ಮಾತನಾಡಿದ್ದು, ಜೆಡಿಎಸ್ನಿಂದ ಅಭ್ಯರ್ಥಿಯಾಗುವ ಅವಕಾಶ ಬಂದಿದೆ. ಅಂಥಾದ್ದೊಂದು ಬೆಳವಣಿಗೆ ನಡೆಯುತ್ತಿದೆ. ಸದ್ಯಕ್ಕೆ ನಾನು ಯಾವುದೇ ನಿರ್ಧಾರವನ್ನ ತೆಗೆದುಕೊಂಡಿಲ್ಲ. ಹಿರಿಯರ ಸಲಹೆಯನ್ನ ಪಡೆದು ಮುಂದಿನ ನಿರ್ಧಾರ ತಿಳಿಸುತ್ತೇನೆ ಅಂದಿದ್ದಾರೆ.

ಇದುವರೆಗೆ ಕಾಂಗ್ರೆಸ್ನ ಹಿರಿಯ ನಾಯಕ ಬಿ.ಎಲ್.ಶಂಕರ್ ಹೆಸರು ಬೆಂಗಳೂರು ಉತ್ತರಕ್ಕೆ ಕೇಳಿ ಬಂದಿತ್ತು. ಆದ್ರೀಗ ದಿಢೀರ್ ಇದೀಗ ಬಿಗ್ಬಾಸ್ ಸೀಸನ್-6 ವಿನ್ನರ್ ಶಶಿಕುಮಾರ್ ಹೆಸರು ಪ್ರಸ್ತಾಪವಾಗಿದೆ.
ಶಶಿಕುಮಾರ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಜೊತೆಗೆ ಒಬ್ಬ ರೈತ ಈ ಮೂಲಕ ಮೈಲೇಜ್ ಪಡೆದುಕೊಳ್ಳುವುದು ದಳಪತಿಗಳ ತಂತ್ರ.
ಈ ಸಂಬಂಧ ಈಗಾಗ್ಲೆ ಜೆಡಿಎಸ್ನ ಮುಖಂಡರು ಶಶಿ ಜೊತೆ ಒಂದು ಸುತ್ತಿನ ಮಾತುಕತೆಯನ್ನು ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಇನ್ನೆರಡು ದಿನಗಳಲ್ಲಿ ಶಶಿ ಹೆಸರನ್ನ ಅಂತಿಮಗೊಳಿಸುವ ಸಾಧ್ಯತೆ ಇದೆ.
ಅವರನ್ನ ಕಣಕ್ಕಿಳಿಸಿದ್ರೆ ಮತದಾರರನ್ನ ಸುಲಭವಾಗಿ ಸೆಳೆಯಬಹುದೆಂಬುದು ಜೆಡಿಎಸ್ ಲೆಕ್ಕಾಚಾರ.

ಆಧುನಿಕ ಕೃಷಿ ಮಾಡಿ ಹೆಸರು ಗಳಿಸಿರೋ ಬಿಗ್ಬಾಸ್ ವಿನ್ನರ್ ಶಶಿಕುಮಾರ್, ಎಂಎಸ್ಸಿ ಪದವಿ ಪಡೆದು ಕೃಷಿ ಮಾಡುತ್ತಿದ್ದಾರೆ.
ಪಾಪ ಜೆಡಿಎಸ್ ನಾಯಕರಾದರೂ ಏನು ಮಾಡಲು ಸಾಧ್ಯ. ಕಾಂಗ್ರೆಸ್ ನಿಂದ ಕಾಡಿ ಬೇಡಿ ಪಡೆದ ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ಅದರಲ್ಲೂ ಬೆಂಗಳೂರು ಉತ್ತರದಲ್ಲಿ ಸದಾನಂದಗೌಡರ ಗೆಲುವು ಖಚಿತವಾಗಿರುವ ಹಿನ್ನಲೆಯಲ್ಲಿ. ಜೆಡಿಎಸ್ ನಿಂದ ಅಭ್ಯರ್ಥಿಯಾಗಲು ಯಾರೊಬ್ಬರೂ ಸಿದ್ದರಿಲ್ಲ.
ಹೀಗಾಗಿ ಬಿಗ್ ಬಾಸ್ ವಿನ್ನರ್ ಶಶಿಗಿರುವ ಜನಪ್ರಿಯತೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ ಲೋಕಸಭೆ ಚುನಾವಣೆ ಮತ ಚಲಾಯಿಸುವುದು, ಬಿಗ್ ಬಾಸ್ ಗೆ ಓಟು ಹಾಕಿದಷ್ಟು ಸುಲಭವಲ್ಲ ಅನ್ನುವುದನ್ನು ಅರಿಯದಷ್ಟು ದಡ್ಡರಲ್ಲ ಮತದಾರರು.

ಇನ್ನು ಶಶಿಗೆ ಸ್ಪರ್ಧಿಸುವ ಎಲ್ಲಾ ಅವಕಾಶಗಳು ಮುಕ್ತವಾಗಿದೆ. ಬಂದಿರೋ ಆಫರ್ ಬಗ್ಗೆ ನಿರ್ಧಾರ ಕೈಗೊಳ್ಳಲು ಅವರು ಸರ್ವ ಸ್ವತಂತ್ರರಾಗಿದ್ದಾರೆ.
ಹಾಗಿದ್ದರೂ ಬಿಗ್ ಬಾಸ್ ಅನ್ನುವ ಕಾರ್ಯಕ್ರಮದಲ್ಲಿ ಸಿಕ್ಕ ಫೇಮ್ ಅನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಅಂದು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವಿನ್ನರ್ ಮಾಡಿದ್ದು, ಕನ್ನಡಿಗರೇ ಹೊರತು ಜೆಡಿಎಸ್ ಕಾರ್ಯಕರ್ತರಲ್ಲ ಅನ್ನುವುದನ್ನು ಶಶಿ ನೆನಪಿನಲ್ಲಿಟ್ಟುಕೊಂಡರೆ ಉತ್ತಮ.
ಹಾಗಂತ ಶಶಿ ಸದಾನಂದಗೌಡರ ಮುಂದೆ ಸ್ಪರ್ಧಿಸಿದ್ರೆ, ಗೆಲ್ಲುವ ಸಾಧ್ಯತೆಗಳಿದೆಯೇ…ಗೊತ್ತಿಲ್ಲ..ಮತದಾರರ ಮನಸ್ಸಿನಲ್ಲಿ ಏನಿದೆ ಅನ್ನುವುದನ್ನು ಅರಿತುಕೊಳ್ಳಲು ಸಾಧ್ಯವಿಲ್ಲ.

ಒಂದು ವೇಳೆ ಶಶಿ ಚುನಾವಣಾ ಕಣಕ್ಕೆ ಇಳಿದರೆ ಅಂಡಿಯಂತ ಸಾವಿರ ನಾಯಕರಿರುತ್ತಾರೆ. ಹೊಡೆದುಕೊಳ್ಳಲು ಗೋಡೆ ಇರುವುದಿಲ್ಲ ಅನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬೆಟರ್.
Discussion about this post