ಬೆಂಗಳೂರು : ಮಹಾರಾಷ್ಟ್ರದಲ್ಲಿ ವಿಧಿಸಿದ್ದ ಲಾಕ್ ಡೌನ್ ಕೊರೋನಾ ಸೋಂಕಿನ ಚೈನ್ ಬ್ರೇಕ್ ಮಾಡುವಲ್ಲಿ ಯಶಸ್ವಿಯಾದಂತೆ ಕಾಣಿಸುತ್ತಿದೆ. ಕಳೆದ ಎರಡು ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿರುವುದು ವಾಣಿಜ್ಯ ನಗರಿಯಲ್ಲಿ ಹೊಸ ನಿರೀಕ್ಷೆ ಹುಟ್ಟು ಹಾಕಿದೆ. ಸೋಮವಾರ ಕೇವಲ 3792 ಪ್ರಕರಣ ಮುಂಬೈ ನಲ್ಲಿ ಪತ್ತೆಯಾಗಿದ್ದು, 6 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಕೊರೋನಾ ಸೋಂಕಿನ ಎರಡನೆ ಅಲೆ ನಿಯಂತ್ರಣಕ್ಕೆ ಬರುತ್ತಿದೆ ಅನ್ನುವ ಸುಳಿವು ಸಿಕ್ಕಿದೆ.
ಅತ್ತ ಮುಂಬೈನಲ್ಲಿ ಲಾಕ್ ಡೌನ್ ಎಫೆಕ್ಟ್ ಬೀರುತ್ತಿದ್ದಂತೆ ಕರ್ನಾಟಕದಲ್ಲೂ ನಿರೀಕ್ಷೆಗಳು ಹುಟ್ಟಿಕೊಂಡಿವೆ ನಮ್ಮಲ್ಲೂ 14 ದಿನ ಲಾಕ್ ಡೌನ್ ಇರುವುದರಿಂದ ಮೇ ಅಂತ್ಯದ ಹೊತ್ತಿಗೆ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗಬಹುದು ಅನ್ನಲಾಗಿದೆ. ಆದರೆ ಕೊರೋನಾ ನಿಯಂತ್ರಣಕ್ಕೆ ಮುಂಬೈ ಕೈಗೊಂಡ ಕ್ರಮಕ್ಕೂ ಕರ್ನಾಟಕ ಕೈಗೊಳ್ಳುತ್ತಿರುವ ಕ್ರಮಕ್ಕೂ ವ್ಯತ್ಯಾಸವಿದೆ. ಹೀಗಾಗಿ ಮುಂಬೈಯಷ್ಟು ಸುಲಭವಾಗಿ ಸೋಂಕು ನಿಯಂತ್ರಣ ನಮ್ಮಲ್ಲಿ ಕಷ್ಟ ಎನ್ನಲಾಗಿದೆ.
ಮೊದಲ ಅಲೆಯ ಸಂದರ್ಭದಲ್ಲಿ ಮುಂಬೈನಲ್ಲಿ ಪ್ರತೀ ದಿನ 15 ಸಾವಿರದಿಂದ 18 ಸಾವಿರ ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಎರಡನೇ ಅಲೆಯಲ್ಲಿ ಅದನ್ನು 40 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಿಸಲಾಗಿತ್ತು.
ಮುಂಬೈ ನಲ್ಲಿ ಸೋಂಕು ನಿಯಂತ್ರಣ ಸಲುವಾಗಿ ಅಸೆಸ್, ಟ್ರಿಯೇಡ್ ಅಂಡ್ ಟ್ರಾನ್ಸ್ ಫರ್ ಮತ್ತು ಮ್ಯಾನೇಜ್ ಮೆಂಟ್ ಎಂಬ ನಿಯಮವನ್ನು ಪಾಲಿಸಲಾಗಿತ್ತು. ಈ ನಿಯಮದ ಪ್ರಕಾರ, ಮೊದಲು ಸೋಂಕಿತರ ಪತ್ತೆ ಮಾಡಲಾಗುತ್ತದೆ. ಬಳಿಕ ಅವರಿಗೆ ಯಾವ ರೀತಿಯ ಚಿಕಿತ್ಸೆ ಬೇಕು ಅನ್ನುವುದನ್ನು ನಿರ್ಧರಿಸಲಾಗುತ್ತದೆ. ಆಸ್ಪತ್ರೆ ಬೇಕೋ, ಹೋಮ್ ಐಸೋಲೇಷನ್ ಸಾಕೋ ಎಂದು ಗುರುತು ಮಾಡಲಾಗುತ್ತದೆ ಬಳಿಕ ಅರ ಮೇಲೆ ನಿಗಾವಹಿಸಲಾಗುತ್ತಿತ್ತು. ಆದರೆ ನಮ್ಮಲ್ಲಿ ಬಿಯು ನಂಬರ್ ಗಳೇ ಜನರೇಟ್ ಆಗುತ್ತಿಲ್ಲ. ಇನ್ನು ನಿರ್ವಹಣೆಯ ಮಾತೆಲ್ಲಿ ಬಂತು.
ಹೀಗಾಗಿಯೇ ಮುಂಬೈನಲ್ಲಿ ಪ್ರಭಾವ ಬೀರಿದ ಲಾಕ್ ಡೌನ್, ಕರ್ನಾಟಕದಲ್ಲಿ ಪ್ರಭಾವ ಬೀರುವ ಲಕ್ಷಣಗಳಿಲ್ಲ. ಪ್ರಭಾವ ಬೀರಬೇಕಾದರೆ, ಜನ ಕಡ್ಡಾಯವಾಗಿ ಲಾಕ್ ನ್ ನಿಯಮಗಳನ್ನು ಪಾಲಿಸಬೇಕು, ಸರ್ಕಾರ ಕೂಡಾ ಕಟ್ಟು ನಿಟ್ಟಿನ ಆದೇಶ ಹೊರಡಿಸಬೇಕು. ಜೊತೆಗೆ ಎಲ್ಲರಿಗೂ ಚಿಕಿತ್ಸೆ ದೊರೆಯುವಂತಿರಬೇಕು. ಎಲ್ಲರಿಗೂ ಚಿಕಿತ್ಸೆ ದೊರೆಯುತ್ತದೆ ಅನ್ನುವ ಭರವಸೆ ಸಿಕ್ಕರೆ, ಜನ ಸ್ವಯಂ ಪ್ರೇರಿತರಾಗಿ ಪರೀಕ್ಷೆಗೆ ಒಳಪಡುತ್ತಾರೆ.
Discussion about this post