ಬೆಂಗಳೂರು : ಡಿಕೆಶಿ ಜೊತೆಗಿನ ಮುಸುಕಿನ ಗುದ್ದಾಟದ ಕಾರಣದಿಂದ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವಲ್ಲಿ ರಮೇಶ್ ಜಾರಕಿಹೊಳಿಯವರ ಪಾತ್ರ ಹಿರಿದು. ಇದಕ್ಕಾಗಿ ಮುಂಬೈ ಹುಡುಗರು ಹೆಸರಿನ ಮಿತ್ರಮಂಡಳಿಯನ್ನು ಕಟ್ಟಿದ ಜಾರಕಿಹೊಳಿ ಕಾಂಗ್ರೆಸ್ ನಲ್ಲಿ ಬಂಡಾಯ ಬಿರುಗಾಳಿ ಎಬ್ಬಿಸಿದ್ದರು.
ಇದೇ ಕಾರಣಕ್ಕಾಗಿ ಅವರ ಕ್ಷೇತ್ರಕ್ಕೆ ದೊಡ್ಡ ಮೊತ್ತದ ಅನುದಾನ ಹರಿದಿತ್ತು. ಮಾತ್ರವಲ್ಲ ಜಲಸಂಪನ್ಮೂಲದಂತಹ ಮಹತ್ವದ ಖಾತೆಯನ್ನೂ ಕೊಡಲಾಗಿತ್ತು. ಆದರೆ ಮಂಚದಾಟ ಪ್ರಕರಣ ಸಿಲುಕಿದ ಜಾರಕಿಹೊಳಿ ಸಚಿವ ಸ್ಥಾನವನ್ನು ಕಳೆದುಕೊಳ್ಳಬೇಕಾಯ್ತು.
ಇದೀಗ ರಾಸಲೀಲೆ ಪ್ರಕರಣ ಶೀಘ್ರದಲ್ಲಿ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ನಿರೀಕ್ಷೆಯಂತೆ ಇಷ್ಟು ಹೊತ್ತಿಗೆ ಎಸ್.ಐ.ಟಿ ತನಿಖೆ ಮುಗಿಯಬೇಕಾಗಿತ್ತು. ಆದರೆ ಮುಂದಿನ ಚುನಾವಣೆ ತನಕವೂ ಪ್ರಕರಣ ಜೀವಂತವಿರುವಂತಿದೆ. ಈ ನಡುವೆ ಮಿತ್ರ ಮಂಡಳಿಯಿಂದಲೂ ಜಾರಕಿಹೊಳಿಗೆ ಗೇಟ್ ಪಾಸ್ ನೀಡಲಾಗಿದೆ.
ಹೀಗಾಗಿ ಹೇಗಾದರೂ ಸರಿ ಮತ್ತೆ ಸಚಿವರಾಗಲೇಬೇಕು ಎಂದು ಪಟ್ಟು ಹಿಡಿದಿರುವ ಜಾರಕಿಹೊಳಿ ಮುಂಬೈ ಪ್ರವಾಸವನ್ನೂ ಕೈಗೊಂಡಿದ್ದಾರೆ. ಆದರೆ ಅದು ಫಲ ನೀಡಿಲ್ಲ.
ಹೀಗಾಗಿ ಇದೀಗ ರಮೇಶ್ ಜಾರಕಿಹೊಳಿ ಹೊಸ ವರಸೆ ಆರಂಭಿಸಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ರಮೇಶ್ ಜಾರಕಿಹೊಳಿ ರಾಜೀನಾಮೆ ಬಳಿಕ ಜಲಸಂಪನ್ಮೂಲ ಇಲಾಖೆಯಲ್ಲಿ ಅಂತಹ ಕೆಲಸ ನಡೆದಿರಲಿಲ್ಲ. ಹಳೆಯ ಯೋಜನೆಗಳೇ ಮುಂದಕ್ಕೆ ಸಾಗಿತ್ತು. ಹೀಗಾಗಿ ಶೀಘ್ರದಲ್ಲೇ ಮಂತ್ರಿ ಮಂಡಲಕ್ಕೆ ಮರಳುವ ಲೆಕ್ಕಾಚಾರದಲ್ಲಿದ್ದರು ಜಾರಕಿಹೊಳಿ. ಆದರೆ ಈಗ ಜಲಸಂಪನ್ಮೂಲ ಇಲಾಖೆಯ ಹಲವು ಯೋಜನೆಗಳಿಗೆ ವೇಗ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಜಾರಕಿಹೊಳಿ ನಿದ್ದೆಗೆಡಿಸಿದೆ. ಹಲವು ಟೆಂಡರ್ ಪ್ರಕ್ರಿಯೆಯೂ ಚಾಲನೆ ಸಿಕ್ಕಿರುವುದರಿಂದ ಭವಿಷ್ಯದ ಆತಂಕ ಎದುರಾಗಿದೆ.
ಹೀಗಾಗಿ ವಿಚಲಿತರರಾಗಿರುವ ಜಾರಕಿಹೊಳಿ ಸಂಪುಟಕ್ಕೆ ವಾಪಸ್ ಬಂದು ಜಲಸಂಪನ್ಮೂಲ ಖಾತೆಯನ್ನೇ ನಿರ್ವಹಿಸುವುದು ಅವರ ಯೋಚನೆ. ಆದರೆ ಅದು ಈಡೇರುತ್ತಿಲ್ಲ ಹೀಗಾಗಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ.
Discussion about this post