ಬೆಂಗಳೂರು : ದೇಶದಲ್ಲಿ ಬೀಸುತ್ತಿರುವ ಕೊರೋನಾ ಸೋಂಕಿನ ಅಲೆಗೆ ಜನ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನ ಪರಿಸ್ಥಿತಿ ಹೇಳ ತೀರದಾಗಿದೆ. ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ, ಸ್ಮಶಾನದಲ್ಲಿ ಜಾಗವಿಲ್ಲ ಅನ್ನುವಂತಾಗಿದೆ.
ಈ ನಡುವೆ ಕೊರೋನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರಕ್ಕೆ ಹೊರಡಿಸಿರುವ ಲಾಕ್ ಡೌನ್ ಆದೇಶ ಜನಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಮೊದಲ ಅಲೆಯಲ್ಲಿ ಒಂದಿಷ್ಟು ಜನ ಬೆಂಗಳೂರು ಬಿಟ್ಟು ಹಳ್ಳಿ ಸೇರಿದ್ದರು. ಸೋಂಕಿನ ಅಬ್ಬರ ಕಡಿಮೆಯಾಗುತ್ತಿದ್ದಂತೆ ಮತ್ತೆ ಬೆಂಗಳೂರು ಸೇರಿದವರ ಸಂಖ್ಯೆ ತುಂಬಾ ಕಡಿಮೆ. ಇದೀಗ ಮತ್ತೊಮ್ಮೆ ವಲಸೆ ಕಾರ್ಯ ನಡೆದಿದ್ದು, ಅದೆಷ್ಟು ಜನ ಸೋಂಕು ಹೊತ್ತು ಹಳ್ಳಿ ಪ್ರವೇಶಿಸಿದ್ದಾರೋ ಗೊತ್ತಿಲ್ಲ.
ಇನ್ನು ಲಾಕ್ ಡೌನ್ ಆದೇಶದಿಂದ ಕಿರುತೆರೆ ಲೋಕವೂ ಕಂಗಲಾಗಿದೆ. ಶೂಟಿಂಗ್ ಗೆ ನಿರ್ಬಂಧ ವಿಧಿಸಿರುವ ಕಾರಣ ಬಹುತೇಕರು ಕೆಲಸವಿಲ್ಲದೆ ಕೂರುವ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಮೊದಲ ಅಲೆಯ ಸಂದರ್ಭದ ಲಾಕ್ ಡೌನ್ ನಿಂದ ಪಾಠ ಕಲಿತಿರುವ ವಾಹಿನಿಗಳು ಧಾರವಾಹಿಯ ಎಪಿಸೋಡ್ ಗಳನ್ನು ಬ್ಯಾಂಕಿಂಗ್ ಮಾಡಿಸಿಕೊಂಡಿವೆ. ನಿತ್ಯ ಪ್ರಸಾರ ಕಾಣುವ ಧಾರವಾಹಿಗಳು ಎರಡರಿಂದ ಮೂರು ವಾರಕ್ಕೆ ಸಾಕಾಗುವಷ್ಟು ಎಪಿಸೋಡ್ ಗಳನ್ನು ಹೊಂದಿದೆ. ಒಂದು ವೇಳೆ ಲಾಕ್ ಡೌನ್ ಮೂರು ವಾರಕ್ಕಿಂತ ಹೆಚ್ಚು ಕಾಲ ಮುಂದುವರಿದರೆ ಮತ್ತೆ ಹಳೆಯ ಎಪಿಸೋಡ್ ಗಳಿಗೆ ಮೊರೆ ಹೋಗಬೇಕಾಗುತ್ತದೆ. ಕೇವಲ ಸೀರಿಯಲ್ ಮಾತ್ರವಲ್ಲದೆ ಮಜಾ ಟಾಕೀಸ್, ಕಾಮಿಡಿ ಶೋ, ಸಂಗೀತವನ್ನು ಆಧರಿಸಿದ ರಿಯಾಲಿಟಿ ಶೋಗಳು ಕೂಡಾ ತಿಂಗಳಿಗಾಗುವಷ್ಟು ಬ್ಯಾಂಕಿಂಗ್ ಮಾಡಿಕೊಂಡಿವೆ.

ಆದರೆ ಕನ್ನಡ ದೊಡ್ಡ ರಿಯಾಲಿಟಿ ಶೋ ಅನ್ನಿಸಿಕೊಂಡಿರುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಈ ಲಾಕ್ ಡೌನ್ ನೇರ ಪರಿಣಾಮ ಬೀರಲಿದೆ. ಬಿಗ್ ಬಾಸ್ ಮನೆಯನ್ನು ಬಯೋ ಬಬಲ್ ರೀತಿಯಲ್ಲಿ ನಿರ್ಮಿಸಲಾಗಿದೆ. ಈಗಾಗಲೇ ಒಳ ಪ್ರವೇಶಿಸಿರುವ ಮಂದಿ ಕ್ವಾರಂಟೈನ್ ಮುಗಿಸಿ, ಐದಾರು ಸಲ ಕೊರೋನಾ ಟೆಸ್ಟ್ ಗೆ ಒಳಗಾಗಿ ಮನೆಗೆ ಹೋಗಿದ್ದಾರೆ. ಜೊತೆಗೆ ಮನೆಯೊಳಗಡೆ ಇರುವ ಯಾರಿಗೂ ಹೊರ ಪ್ರಪಂಚದೊಂದಿಗೆ ಸಂಪರ್ಕವಿಲ್ಲದಿರುವ ಕಾರಣ ಅಲ್ಲಿಗೆ ಸೋಂಕಿನ ಭಯವಿಲ್ಲ. ಆದರೆ ಸರ್ಕಾರದ ಈಗ ಹೊರಡಿಸಿರುವ ಆದೇಶದ ನಿಯಮಗಳ ಪ್ರಕಾರ, ವೀಕೆಂಡ್ ವಿದ್ ಸುದೀಪ್ , ಸಂಡೇ ವಿದ್ ಸುದೀಪ್ ಕಾರ್ಯಕ್ರಮವನ್ನು ನಡೆಸುವಂತಿಲ್ಲ.

ಪ್ರತೀ ವಾರ ಶೂಟಿಂಗ್ ಆಗಬೇಕಾಗಿರುವ ಎಪಿಸೋಡ್ ಗಳು ಇದಾಗಿರುವುದರಿಂದ ಸರ್ಕಾರ ಆದೇಶ ಇದನ್ನು ನಿರ್ಬಂಧಿಸುತ್ತದೆ. ಹೀಗಾಗಿ ಜನತಾ ಕರ್ಫ್ಯೂ ಮುಗಿಯುವ ತನಕ ಸುದೀಪ್ ಬಿಗ್ ಬಾಸ್ ವೇದಿಕೆ ಹತ್ತೋದು ಅನುಮಾನ. ಈಗಾಗಲೇ ಅನಾರೋಗ್ಯದ ಕಾರಣದಿಂದ ಕಳೆದ ಎರಡು ವಾರಗಳಿಂದ ಬಿಗ್ ಬಾಸ್ ಕಾರ್ಯಕ್ರಮದಿಂದ ದೂರವಿರುವ ಸುದೀಪ್ ಮುಂದಿನ ಕೆಲ ವಾರಗಳ ಕಾಲವೂ ಗೈರು ಹಾಜರಾಗಲಿದ್ದಾರೆ.
Discussion about this post