ಸ್ವಯಂ ಘೋಷಿತ ದೇವಮಾನವ ಕಲ್ಕಿ ಭಗವಾನ್ ಆಶ್ರಮ, ಶಿಕ್ಷಣ ಸಂಸ್ಥೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಏಕಕಾಲದಲ್ಲಿ ಈ ದಾಳಿ ನಡೆದಿದ್ದು, ಶೋಧ ಕಾರ್ಯ ಮುಂದುವರಿದಿದೆ.
ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿರುವ ಕಲ್ಕಿ ಭಗವಾನ್ ಆಶ್ರಮವನ್ನು ಪೊಲೀಸರು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದು, ಕಲ್ಕಿ ಬೆಂಬಲಿಗರಿಂದ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದಾರೆ.
ದಾಳಿ ಸಂದರ್ಭದಲ್ಲಿ ಕಲ್ಕಿ ಭಗವಾನ್ ಹಾಗೂ ಅವರ ಪತ್ನಿ ಪದ್ಮಾವತಿ ಲಭ್ಯವಿರಲಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ನಡುವೆ ಚೆನ್ನೈನ ನುಂಗಂಬಾಕಂ ಕಚೇರಿಯಲ್ಲಿ ಕಲ್ಕಿ ಭಗವಾನ್ ಪುತ್ರ ಕೃಷ್ಣ ಹಾಗೂ ಸೊಸೆ ಪ್ರೀತಿಯನ್ನು ತೆರಿಗೆ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ.
ಚಿತ್ತೂರು ಜಿಲ್ಲೆಯ ವಿವಿಧ ಆಶ್ರಮಗಳ ಟ್ರಸ್ಟ್ನ ವ್ಯವಸ್ಥಾಪಕ ಲೋಕೇಶ್ ದಾಸಾಜಿ ಜೊತೆ ಕೆಲ ಸಿಬ್ಬಂದಿಗಳನ್ನು ರಹಸ್ಯವಾಗಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಈ ಹಿಂದೆ ಕಲ್ಕಿ ಭಗವಾನ್ ಆಶ್ರಮದಲ್ಲಿ ಹಲವು ಅವ್ಯವಹಾರ ಆರೋಪ ಕೇಳಿಬಂದಿದ್ದವು. ಭಕ್ತರಿಗೆ ಲೈಂಗಿಕ ಕಿರುಕುಳ, ಬೆದರಿಕೆ ಒಡ್ಡಿದ್ದ ಆರೋಪಗಳು ಕೇಳಿಬಂದಿತ್ತು. ಜೊತೆಗೆ ಆಶ್ರಮ ಸುತ್ತಮುತ್ತ ನೂರಾರು ಕೋಟಿ ಮೌಲ್ಯದ ಅಕ್ರಮ ಆಸ್ತಿಗಳನ್ನು, ಬೇನಾಮಿ ಹೆಸರಿನಲ್ಲಿ ಮಾಡಿಕೊಂಡಿರುವುದನ್ನು ಐಟಿ ಅಧಿಕಾರಿಗಳು ಈಗಾಗಲೇ ಗುರುತಿಸಿದ್ದಾರೆ.
ಭಾರತೀಯ ಜೀವ ವಿಮಾ ನಿಗಮದಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಜೀವನ ನಡೆಸುತ್ತಿದ್ದ ವಿಜಯ್ ಕುಮಾರ್ ನಾಯ್ಡು ಅಲಿಯಾಸ್ ಕಲ್ಕಿ ಭಗವಾನ್ ನಂತರ ಉದ್ಯೋಗ ತ್ಯಜಿಸಿ, ಬೆಂಗಳೂರಿನ ಶಿಕ್ಷಣ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಅಲ್ಲಿಂದ ಹೊರ ಬಿದ್ದು ಚಿತ್ತೂರಿನಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಿದ. ಅದು ನಷ್ಟ ಅನುಭವಿಸಿದ ಕಾರಣ ಕೆಲಕಾಲ ಕಣ್ಮರೆಯಾಗಿದ್ದ. ನಂತರ ವಿಜಯ್ ಕುಮಾರ್ ೧೯೮೯ ರಲ್ಲಿ ಚಿತ್ತೂರು ಜಿಲ್ಲೆಯಲ್ಲಿ ಕಾಣಿಸಿಕೊಂಡು ತಾವು ಭಗವಾನ್ ವಿಷ್ಣುವಿನ ೧೦ನೇ ಅವತಾರ ಎಂದು ಹೇಳಿಕೊಂಡು ಕಲ್ಕಿ ಭಗವಾನ್ ಎಂದು ಹೆಸರಾದ.
ಕಲ್ಕಿ ಭಗವಾನ್ ಸಾಮಾನ್ಯರ ಭೇಟಿಗಾಗಿ ೫೦೦೦ ರೂ. ಇನ್ನೂ ಪ್ರತ್ಯೇಕ ದರ್ಶನಕ್ಕೆ ೨೫ ಸಾವಿರ ರೂಪಾಯಿ ಪಡೆಯುತ್ತಿದ್ದ. 2008ರಲ್ಲಿ ಆಶ್ರಮದಲ್ಲಿ ಉಂಟಾದ ಕಾಲ್ತುಳಿತದಿಂದ ಐವರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದ ಘಟನೆ ನಡೆದಿತ್ತು. ೨೦೦೮ ರಲ್ಲಿ, ಚಿತ್ತೂರು ಜಿಲ್ಲೆಯ ಕಲ್ಕಿ ಮಠದಲ್ಲಿ ಸಂಭವಿಸಿದ ದುರಂತದಲ್ಲಿ ಐದು ಜನರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡರು.
ಕಲ್ಕಿ ಭಗವಾನ್ ವಿರುದ್ಧ ಹಲವು ಪೊಲೀಸ್ ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಕಲ್ಕಿ ಪುತ್ರ ಕೃಷ್ಣ ಅಕ್ರಮ ಭೂಮಿ ಕಬಳಿಸಿರುವ ಆರೋಪ ಎದುರಿಸುತ್ತಿದ್ದಾನೆ.
ದಾಳಿಗೇನು ಕಾರಣ…?
ಆಶ್ರಮಕ್ಕೆ ನೀಡಿದ ಹಣವನ್ನು ಸ್ವಯಂ ಘೋಷಿತ ದೇವಮಾನವನ ಪುತ್ರ ಕೃಷ್ಣ ಅನ್ಯ ಕಾರ್ಯಗಳಿಗೆ ಬಳಸಿದ್ದಾನೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ಅನೇಕ ಉದ್ಯಮಗಳಲ್ಲಿ ಈ ಹಣ ಹೂಡಿಕೆಯಾಗಿದ್ದು, ಲೆಕ್ಕ ಪತ್ರದಲ್ಲಿ ಗೋಲ್ ಮಾಲ್ ಮಾಡಿರುವ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ.
Discussion about this post