ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ನೂರಾರು ಮಂದಿಯನ್ನು ಬಲಿ ಪಡೆದಿದೆ. ಮತ್ತಷ್ಟು ಮಂದಿ ಸೋಂಕು ಕಾಣಿಸಿಕೊಂಡಿದ್ದು, ಚೀನಾ ತತ್ತರಿಸಿ ಹೋಗಿದೆ.
ಈ ನಡುವೆ ಚೀನಾದ ವೈರಸ್ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸುವ ಕಾರ್ಯಕ್ಕೆ ಭಾರತ ಮುಂದಾಗಿದೆ. ಈಗಾಗಲೇ ಎರಡು ತಂಡಗಳಲ್ಲಿ ಭಾರತೀಯರನ್ನು ಕರೆ ತರಲಾಗಿದೆ. ಎರಡನೇ ತಂಡ ಭಾನುವಾರ ದೆಹಲಿಗೆ ಆಗಮಿಸಿದೆ.
ಶನಿವಾರ ಮೊದಲ ತಂಡದಲ್ಲಿ 324 ಮಂದಿಯನ್ನು ಕರೆ ತರಲಾಗಿತ್ತು. ಭಾನುವಾರ 323 ಮಂದಿಯನ್ನು ಕರೆ ತರಲಾಗಿದೆ. ಇದರಲ್ಲಿ ಏಳು ಮಂದಿ ಮಾಲ್ಡೀವ್ಸ್ ಪ್ರಜೆಗಳು ಕೂಡಾ ಸೇರಿದ್ದಾರೆ.
ಇದೀಗ ತನ್ನ ದೇಶದ ಪ್ರಜೆಗಳ ಸಹಾಯಕ್ಕೆ ಧಾವಿಸಿದ ನರೇಂದ್ರ ಮೋದಿಯವರ ಕಾರ್ಯಕ್ಕೆ ಮಾಲ್ದೀವ್ ಸರ್ಕಾರ ತಲೆ ಬಾಗಿದ್ದು, ನಿಮ್ಮ ಕಾರ್ಯಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಅಂದಿದೆ.
ಕೊರೋನಾ ವೈರಸ್ ಅಬ್ಬರದಿಂದ ನಲುಗಿದ್ದ ವುಹಾನ್ ನಲ್ಲಿ ಸಿಲುಕಿದ್ದ ಮಾಲ್ಡೀವ್ ಪ್ರಜೆಗಳನ್ನು ರಕ್ಷಿಸಿದ ಭಾರತದ ಕಾರ್ಯಕ್ಕೆ ಮಾಲ್ಡೀವ್ಸ್ ಸರ್ಕಾರ ಧನ್ಯವಾದ ಸಲ್ಲಿಸಿದೆ.
ಈಗಾಗಲೇ ದೇಶಕ್ಕೆ ಆಗಮಿಸಿರುವ ಭಾರತೀಯರನ್ನು ಹರಿಯಾಣದ ಮಾನೇಸರ್ನಲ್ಲಿ ನಿರ್ಮಿಸಲಾದ 300 ಹಾಸಿಗೆಗಳ ನಿಗಾ ಕೇಂದ್ರದಲ್ಲಿರಿಸಿದ್ದು, ಎರಡು ವಾರ ಅವರು ಅಲ್ಲಿಯೇ ಇರುತ್ತಾರೆ.
Discussion about this post