ಕೊರೋನಾ ಕಾರಣದಿಂದ ಇಡೀ ನಾಡು ಸಂಕಷ್ಟಕ್ಕೆ ಸಿಲುಕಿದೆ. ದುಡಿದು ತಿನ್ನುವ ಕೈಗಳು ಕಂಗಲಾಗಿವೆ. ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಲಾಕ್ ಡೌನ್ ಅನ್ನು ಘೋಷಿಸಿತು. ಆದರೆ ಕೆಲಸವಿಲ್ಲದೆ ಕೂತ ಜೀವಗಳಿಗೆ ಆಹಾರ ಕೊಡುವ ಕೆಲಸವನ್ನು ಸರ್ಕಾರ ಮಾಡಲೇ ಇಲ್ಲ. ಕೇರಳ ಸೇರಿದಂತೆ ದಕ್ಷಿಣ ಭಾರತದ ಅನೇಕ ರಾಜ್ಯಗಳು ಬಡವರ ಮನೆಗೆ ಕಿಟ್ ಕೊಡುವ ಮೂಲಕ ಮಾನವೀಯತೆ ಮೆರೆದಿದೆ. ಆದರೆ ಕರ್ನಾಟಕದಲ್ಲಿ ಹಸಿವು ನೀಗುವ ಕೆಲಸವನ್ನು ಸರ್ಕಾರ ಮಾಡೋ ಗೋಜಿಗೆ ಹೋಗಿಲ್ಲ.
ಈ ನಡುವೆ ಜನರ ಸಂಕಷ್ಟಕ್ಕೆ ಸ್ಪಂದಿಸಿರುವ ಒಂದಿಷ್ಟು ಸೆಲೆಬ್ರೆಟಿಗಳು ಸಹಾಯ ಹಸ್ತ ಚಾಚಿದ್ದಾರೆ. ಅರ್ಜುನ್ ಗೌಡ ಅನ್ನುವ ನಟ ಅಂಬ್ಯುಲೆನ್ಸ್ ಹತ್ತಿದ್ದಾರೆ. ಭುವನ್ ಮತ್ತು ಹರ್ಷಿಕಾ ಪೂಣಚ್ಚ ಆಕ್ಸಿಜನ್, ಬೆಡ್, ರೆಮಿಡಿಸಿವರ್ ಅಂತಾ ಓಡಾಡುತ್ತಿದ್ದಾರೆ.
ಇದೇ ಸಾಲಿಗೆ ಇದೀಗ ಕನ್ನಡ ಕಿರುತೆರೆಯ ಮತ್ತೊಬ್ಬ ನಟ ಸೇರ್ಪಡೆಯಾಗಿದ್ದಾರೆ ಅವರೇ ಕನ್ನಡತಿ ಧಾರಾವಾಹಿಯ ಹರ್ಷ ಖ್ಯಾತಿಯ ಕಿರಣ್ ರಾಜ್. ಗೆಳೆಯರೊಂದಿಗೆ ಸೇರಿ ಕಿರಣ್ ರಾಜ್ ಫೌಂಡೇಶನ್ ಅನ್ನುವ ಸಂಸ್ಥೆ ಕಟ್ಟಿರುವ ಇವರು ಈ ಮೂಲಕ ಕೊರೋನಾ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಊಟ ಕೊಡುವ ಕೆಲಸ ಮಾಡುತ್ತಿದ್ದಾರೆ.
ನನ್ನನ್ನು ಬೆಳೆಸಿದ ಸಮಾಜಕ್ಕೆ ಏನಾದರೂ ಕೊಡಬೇಕು ಅನ್ನು ಉದ್ದೇಶದಿಂದ ಕೆಲ ವರ್ಷಗಳ ಹಿಂದೆಯೇ ಈ ಫೌಂಡೇಶನ್ ಅನ್ನು ಸ್ಥಾಪಿಸಲಾಗಿತ್ತು. ತಮ್ಮ ದುಡಿಮೆಯ ಶೇ 40ರಷ್ಟು ಭಾಗವನ್ನು ಸಮಾಜ ಸೇವೆಗಾಗಿ ಇಡುತ್ತಲೇ ಬಂದಿದ್ದ ಕಿರಣ್ ರಾಜ್, ಇದೀಗ ಕೊರೋನಾ ಸಂಕಷ್ಟ ಸಮಯದಲ್ಲಿ ಬೆಂಗಳೂರಿನ ನಾಗರಭಾವಿ, ಉಲ್ಲಾಳ ಮೊದಲಾದ ಭಾಗಗಳಲ್ಲಿ ನಿತ್ಯ ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಇನ್ನು ಕಿರಣ್ ರಾಜ್ ಫೌಂಡೇಶನ್ ಜೊತೆ ನೀವು ಕೂಡಾ ಕೈ ಜೋಡಿಸಬಹುದಾಗಿದ್ದು, ಅಗತ್ಯ ವಿವರಗಳಿಗಾಗಿ 7411312125 ಮತ್ತು 6362045332 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
Discussion about this post