ಚಂದನವನದ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಇಂದು ಜಾಮೀನು ನಿರೀಕ್ಷೆಯಲ್ಲಿದ್ದರು. ಆದರೆ ಹೈಕೋರ್ಟ್ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.
ಅನಾರೋಗ್ಯದ ನೆಪವೊಡ್ಡಿ ಜಾಮೀನು ಸಲುವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಸಂಜನಾ, ಅಸ್ತಮಾ ಇದೆ, ಹಿಂದೊಂದು ಸರ್ಜರಿಯಾಗಿತ್ತು, ಮತ್ತೆ ಮತ್ತೊಂದು ಸರ್ಜರಿಗೆ ಒಳಗಾಗಬೇಕಾಗಿದೆ ಹೀಗಾಗಿ ಜಾಮೀನು ಕೊಡಿ ಎಂದು ಮನವಿ ಮಾಡಿದ್ದರು.
ಈ ವೇಳೆ ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಿ, ಜೊತೆಗೆ ಸಂಜನಾ ಆರೋಗ್ಯ ಪರಿಸ್ಥಿತಿ ಕುರಿತಂತೆ ಡಿಸೆಂಬರ್ 10ರ ಒಳಗೆ ವರದಿ ಕೊಡುವಂತೆ ಆದೇಶಿಸಿತ್ತು. ಅಲ್ಲದೆ ಆ ವರದಿ ಬಂದ ನಂತರ ಜಾಮೀನಿನ ಬಗ್ಗೆ ನಿರ್ಧರಿಸೋಣ ಎಂದು ನ್ಯಾಯಾಲಯ ಹೇಳಿತ್ತು.
ಇಂದು ವಾಣಿ ವಿಲಾಸ್ ವೈದ್ಯರ ವರದಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಅದರಲ್ಲಿ ಜೈಲು ಆಸ್ಪತ್ರೆಯಲ್ಲೇ ಮೆಡಿಕೇಷನ್ ಮುಂದುವರಿಸಬಹುದು ಹಾಗೂ ಸರ್ಜರಿ ತುರ್ತಾಗಿ ಬೇಕಾಗಿಲ್ಲ ಎಂದು ಹೇಳಲಾಗಿದೆ,
ಇದೇ ವೇಳೆ ಎಸ್ಪಿಪಿ ವೀರಣ್ಣ ತಿಗಡಿ ನಾಳೆ ವಿಚಾರಣೆ ನಿಗದಿಪಡಿಸಲು ಮನವಿ ಮಾಡಿದರು. ಅವರ ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ವಿಚಾರಣೆ ನಾಳೆಗೆ ಮುಂದೂಡಿದರು. ನಾಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಲಿದ್ದಾರೆ.
Discussion about this post