ಶಿರಸಿ : ಈಗಾಗಲೇ ಗ್ಯಾಸ್ ಪೆಟ್ರೋಲ್ ಅಡುಗೆ ಎಣ್ಣೆ ಹೀಗೆ ಅಗತ್ಯ ವಸ್ತುಗಳ ದರ ಗಗನಮುಖಿಯಾಗಿದೆ. ಬರೋ ಸಂಬಳಕ್ಕಿಂತ ತಿಂಗಳ ಖರ್ಚು ಅಧಿಕವಾಗುತ್ತಿದೆ. ಹೋಗ್ಲಿ ಸಂಕಷ್ಟ ಪರಿಹರಿಸು ಎಂದು ದೇವರಿಗೆ ಹರಕೆ ಹೊತ್ತುಕೊಳ್ಳೋಣ ಅಂದ್ರೆ ಅದು ಕೂಡಾ ದುಬಾರಿಯಾಗಿದೆ. 10 ರೂಪಾಯಿ ಇದ್ದ ರುದ್ರಾಭಿಷೇಕಕ್ಕೆ ಇದೀಗ 100 ರೂಪಾಯಿಯಾಗಿದೆ. ಹೀಗೆ ದರ ಏರಿಸಿದ್ರೆ ಕೈ ಮುಗಿಯುವ ಹರಕೆ ಹೊತ್ತುಕೊಳ್ಳಬೇಕಷ್ಟೆ.
ಅಂದ ಹಾಗೇ ವಿಪರೀತ ಪೂಜಾ ದರಗಳು ಏರಿಕೆಯಾಗಿರುವುದು ನಾಡಿನ ಶಕ್ತಿಪೀಠದಲ್ಲಿ ಒಂದೆನಿಸಿ ಲಕ್ಷಾಂತರ ಭಕ್ತರನ್ನು ಸೆಳೆಯುವ ಶಿರಸಿ ಮಾರಿಕಾಂಬಾ ದೇವಾಲಯದಲ್ಲಿ. ಏಕಾಏಕಿ ಪೂಜಾ ಸೇವೆಗಳ ದರವನ್ನು 100 ಪಟ್ಟು ಹೆಚ್ಚಿಸಲಾಗಿದ್ದು , ಹೊಸ ಕರಡು ದರ ಪಟ್ಟಿ ಕಂಡ ಭಕ್ತರು ಗಾಬರಿಯಾಗಿದ್ದಾರೆ.

ಹೊಸ ದರ ಪಟ್ಟಿ ಪ್ರಕಾರ, ರುದ್ರಾಭಿಷೇಕ ಸೇವೆಗೆ ₹10ರ ಬದಲು ₹100, ಮೃತ್ಯುಂಜಯ ಶಾಂತಿಗೆ ₹1001 ಬದಲು ₹3500, ಸತ್ಯನಾರಾಯಣ ಕಥೆಗೆ ₹325ರ ಬದಲು ₹1500ಕ್ಕೆ, ನಿರಂತರ ಪಲ್ಲಕ್ಕಿ ಸೇವೆ ದರ ₹6,001 ರಿಂದ ₹25,000ಕ್ಕೆ ಏರಿಕೆ ಮಾಡಲಾಗಿದೆ. ಇನ್ನು ಈ ಹಿಂದೆ ಮಹಾಪೂಜೆಗೆ 75 ರೂಪಾಯಿ ಇತ್ತು ಈಗ 300ಕ್ಕೆ ಏರಿಸಲಾಗಿದೆ. ವಸ್ತ್ರಾಲಂಕಾರ ಪೂಜೆ ಬೆಲೆ 300 ರೂಪಾಯಿಯಿಂದ 1001 ರೂಪಾಯಿ, ಪಲ್ಲವ ಪಾರಾಯಣ ಸೇವಾ ಶುಲ್ಕ 250 ರೂಪಾಯಿಂದ 750 ರೂಪಾಯಿ, ಅನ್ನ ಸಂತರ್ಪಣೆ ದರ 2001 ರಿಂದ 5001 ರೂಪಾಯಿ, ಪಲ್ಲಕ್ಕಿ ಸೇವೆ 650 ರೂಪಾಯಿಂದ 5 ಸಾವಿರ ರೂಪಾಯಿಗೆ ಜಿಗಿದಿದೆ. ಕಾರ್ತೀಕ ದೀಪೋತ್ಸವದ ಒಂದು ದಿನದ ಸೇವೆ ಮೊತ್ತವನ್ನು ₹650 ರಿಂದ ₹5,000, ಶಾಶ್ವತ ಸೇವೆಗೆ ₹6001ರ ಬದಲು ₹10,001, ನಿರಂತರ ಸೇವೆ ಪಾರಾಯಣ ₹2001ರ ಬದಲಾಗಿ ₹5,000, ಶಾಶ್ವತ ಸೇವೆಗೆ ₹6001ರ ಬದಲು 10,000ಕ್ಕೆ ದರ ನಿಗದಿ ಮಾಡಲಾಗಿದೆ.

ಇನ್ನು ದರ ಏರಿಕೆಯನ್ನು ಸಮರ್ಥಿಸಿಕೊಂಡಿರುವ ದೇವಸ್ಥಾನ ಆಡಳಿತ ಮಂಡಳಿ ಈಗಿನ ಕಾಲಮಾನಕ್ಕೆ ಅನುಗುಣವಾಗಿ ಸೇವಾದರ ಪರಿಷ್ಕರಿಸಿದ್ದೇವೆ. ಭಕ್ತರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದ್ದು, ಅವರ ಅಭಿಪ್ರಾಯ ಪಡೆದು ಅಂತಿಮ ನಿರ್ಣಯವಾಗುತ್ತದೆ. ನಿಯಮಾವಳಿ ಪ್ರಕಾರವೇ ಎಲ್ಲ ಕ್ರಮ ಅನುಸರಿಸಿದ್ದೇವೆ. ಭಕ್ತರು ತಮ್ಮ ಆಕ್ಷೇಪಣೆಯನ್ನು ದೇವಸ್ಥಾನದ ಕಚೇರಿಗೆ ನೇರವಾಗಿ ಸಲ್ಲಿಸಬಹುದು ಅಂದಿದೆ.
Discussion about this post