ಬೆಂಗಳೂರು : ತಜ್ಞರ ಎಚ್ಚರಿಕೆ ನಡುವೆಯೂ ರಾಜ್ಯ ಸರ್ಕಾರ ಮಾಡಿದ ನಿರ್ಲಕ್ಷ್ಯಕ್ಕೆ ಇಂದು ತಕ್ಕ ಫಲ ಸಿಕ್ಕಿದೆ. 10 ದಿನಗಳ ಒಳಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 15 ಸಾವಿರದ ಗಡಿ ದಾಟಲಿದೆ ಎಂದು ಕೊರೋನಾ ನಿಯಂತ್ರಣ ಸಲಹಾ ಸಮಿತಿಯ ಸದಸ್ಯರು ಎಚ್ಚರಿಕೆ ನೀಡಿದ್ದರು. ಆದರೆ ತಜ್ಞರು ಎಚ್ಚರಿಕೆ ಕೊಟ್ಟ ಮೂರು ದಿನಗಳ ಒಳಗೆಯೇ ಕೊರೋನಾ ಮಹಾಸ್ಫೋಟ ಸಂಭವಿಸಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ 10 ದಿನಗಳಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 50 ಸಾವಿರದ ಗಡಿ ದಾಟುವುದರಲ್ಲಿ ಸಂಶಯವಿಲ್ಲ.

ಯುಗಾದಿ ಹಬ್ಬ ಹೊಸತೊಡಕು ಮುಗಿದ ಮರು ದಿನವೇ ರಾಜ್ಯದಲ್ಲಿ ಕೊರೋನಾ ಮಹಾಸ್ಫೋಟ ಸಂಭವಿಸಿದೆ. ಗುರುವಾರ ಒಂದೇ ದಿನ 14738 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿದೆ. ಬೆಂಗಳೂರಿನಲ್ಲಿ ಇಂದು 10497 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ. ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ ಎಂದು ರಾಜಧಾನಿ ಜನ ನಿರ್ಲಕ್ಷ್ಯ ವಹಿಸಿದರೆ ಹೆಣ ಸುಡಲು ಜಾಗವಿಲ್ಲದಂತಾಗುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ.

ಇನ್ನು ಸಾವಿನ ಸಂಖ್ಯೆಯೂ ಇಂದು ಏರಿದೆ. ಬೆಂಗಳೂರಿನಲ್ಲಿ 30, ಬೀದರ್ 2, ಮೈಸೂರು 5, ಧಾರವಾಡ 3, ತುಮಕೂರು 2, ಉತ್ತರ ಕನ್ನಡ 2, ಹಾಸನ 4, ಕಲಬುರಗಿ, ರಾಮನಗರ ಕೋಲಾರ ಶಿವಮೊಗ್ಗ ಹಾಗೂ ವಿಜಯಪುರದಲ್ಲಿ ತಲಾ ಒಬ್ಬರು ಹೀಗೆ ಒಟ್ಟು 66 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಕೊರೋನಾ ಸೋಂಕು ಈ ಮಟ್ಟಿಗೆ ಅಬ್ಬರಿಸುತ್ತಿದ್ದರೂ ರಾಜ್ಯ ಸರ್ಕಾರ ಕಠಿಣ ಕ್ರಮಗಳ ಬಗ್ಗೆ ಇನ್ನೂ ಒಲವು ತೋರುತ್ತಿಲ್ಲ. ಜನರೇ ಕಾಳಜಿ ವಹಿಸಲಿ ಎಂದು ನಿರ್ಲಕ್ಷ್ಯ ತೋರುತ್ತಿದೆ. ಕಠಿಣ ಕ್ರಮಗಳನ್ನು ಕೈಗೊಳ್ಳುವ ಮುನ್ನ ಸರ್ವ ಪಕ್ಷಗಳ ಸಭೆ ನಡೆಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ,. ಸರ್ವ ಪಕ್ಷಗಳ ಸಭೆ ಪ್ರಾರಂಭವಾಗುವ ಹೊತ್ತಿಗೆ ಅರ್ಧ ಕರ್ನಾಟಕಕ್ಕೆ ಕೊರೋನಾ ಸೋಂಕಿನ ಗ್ರಹಣ ಬಡಿದರೂ ಅಚ್ಚರಿ ಇಲ್ಲ.
Discussion about this post