ಬೆಂಗಳೂರು : ಜೂನ್ 14ರವರೆಗೆ ಕರ್ನಾಟಕದಲ್ಲಿ ಲಾಕ್ ಡೌನ್ ಜಾರಿಗೆ ತರಲಾಗಿದೆ. ಲಾಕ್ ಡೌನ್ ಕಾರಣದಿಂದ ಜನ ಆಕ್ರೋಶಕೊಳ್ಳುವುದು ಬೇಡ ಅನ್ನುವ ಕಾರಣಕ್ಕೆ ಸಿಎಂ ಯಡಿಯೂರಪ್ಪ ಎರಡನೇ ಹಂತದ ಪ್ಯಾಕೇಜ್ ಕೂಡಾ ಘೋಷಣೆ ಮಾಡಿದ್ದಾರೆ.
ಈ ನಡುವೆ ಜೂನ್ 14 ಕ್ಕೂ ಮುಂಚೆಯೇ ಕರ್ನಾಟಕವನ್ನು ಅನ್ ಲಾಕ್ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ದೆಹಲಿಯಲ್ಲಿ ಅನ್ ಲಾಕ್ ಪ್ರಕ್ರಿಯೆ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಕರ್ನಾಟಕವೂ ಅನ್ ಲಾಕ್ ನತ್ತ ಮುಖ ಮಾಡಿದೆ.
ಬೆಂಗಳೂರಿನಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಅನ್ ಲಾಕ್ ಮಾಡಿದರೆ ಹೇಗೆ ಅನ್ನುವ ಚಿಂತನೆಗಳು ನಡೆದಿದೆ. ಆದರೆ ಸೋಂಕು ಕಡಿಮೆಯಾದರೂ ಸಾವಿನ ಸಂಖ್ಯೆ ಕಡಿಮೆಯಾಗಿಲ್ಲ ಅನ್ನುವ ಭಯವೂ ರಾಜ್ಯ ಸರ್ಕಾರಕ್ಕಿದೆ.
ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾದರೂ, ರಾಜ್ಯದ ಇತರ ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗಿಲ್ಲ. ಹೀಗಾಗಿ ಏಕ ಕಾಲದಲ್ಲಿ ಅನ್ ಲಾಕ್ ಪ್ರಕ್ರಿಯೆ ಪ್ರಾರಂಭಿಸಲು ಸಾಧ್ಯವಿಲ್ಲ. ಬದಲಾಗಿ ಜಿಲ್ಲಾವಾರು ಅನ್ ಲಾಕ್ ಮಾಡುವ ಬಗ್ಗೆಯೂ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಗಳು ನಡೆದಿದೆ.
ಹಾಗೇ ನೋಡಿದರೆ ಇದು ಅನ್ ಲಾಕ್ ಬಗ್ಗೆ ಚಿಂತನೆ ಮಾಡುವ ಸಮಯ ಖಂಡಿತಾ ಅಲ್ಲ. ಒಂದು ವೇಳೆ ಬೆಂಗಳೂರನ್ನು ಅನ್ ಲಾಕ್ ಮಾಡಿದರೆ, ಈಗಾಗಲೇ ತಮ್ಮೂರು ಸೇರಿರುವ ಮಂದಿ ಕೆಲಸದ ಸಲುವಾಗಿ ಬೆಂಗಳೂರಿಗೆ ಬರಬೇಕಾಗುತ್ತದೆ. ಒಂದು ವೇಳೆ ಹಳ್ಳಿಗಳಿಂದ ಜನ ಮತ್ತೆ ರಾಜಧಾನಿಗೆ ಬಂದರೆ ಸಮಸ್ಯೆಯಾಗಬಹುದು.
Discussion about this post