ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಪ್ರತಿಭಟನೆ ಸಲುವಾಗಿ ಬೀದಿಗಿಳಿಯುತ್ತಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಇದೀಗ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಲಾರಂಭಿಸಿದೆ.
ರೈತ ಮುಖಂಡರಾಗಿದ್ದವರು ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಾಗಿತ್ತು, ಅದನ್ನು ಬಿಟ್ಟು ಸಾರಿಗೆ ನೌಕರರ ಸಂಘಟನೆ ಸೇರಿಕೊಂಡಿರುವುದ್ಯಾಕೆ ಅನ್ನುವ ಪ್ರಶ್ನೆ ಎದ್ದಿದೆ, ಜೊತೆಗೆ ಕೇಂದ್ರ ಸರ್ಕಾರ ಕೃಷಿ ನೀತಿಯ ವಿರುದ್ಧ ದೆಹಲಿಯಲ್ಲಿ ದೊಡ್ಡ ಮಟ್ಟದಲ್ಲಿ ರೈತ ಹೋರಾಟ ನಡೆಸುತ್ತಿದ್ದಾರೆ. ಈ ಕಾಯ್ದೆಯ ವಿರುದ್ಧ ರಾಜ್ಯದಲ್ಲೂ ನಿರಂತರ ಹೋರಾಟ ನಡೆಯಬೇಕಾಗಿತ್ತು. ಆದರೆ ಕೋಡಿಹಳ್ಳಿ ಚಂದ್ರಶೇಖರ್ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಮರೆತು ಸಾರಿಗೆ ನೌಕರರ ಜೊತೆ ಕೂತಿರುವುದು ಸರಿಯೇ ಅನ್ನುವುದು ಬಹುತೇಕರ ಪ್ರಶ್ನೆ.
ಈ ನಡುವೆ ಮುಷ್ಕರ ನಿರತ ನೌಕರರಲ್ಲಿಯೂ ಕೋಡಿಹಳ್ಳಿ ಬಗ್ಗೆ ಅಸಮಾಧಾನ ಶುರುವಾಗಿದೆ. ಭಾನುವಾರ ನಡೆದ ಸಂಧಾನ ಸಭೆಯಲ್ಲಿ ಸರ್ಕಾರ ಬಹುತೇಕ ಬೇಡಿಕೆಗಳಿಗೆ ಸಮ್ಮತಿ ಸೂಚಿಸಿತ್ತು. ಸರ್ಕಾರದ ಭರವಸೆ ನೌಕರರಿಗೂ ಸಮಾಧಾನ ತಂದಿತ್ತು. ಆದರೆ ಕೋಡಿಹಳ್ಳಿ ಮಾತ್ರ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ತನಕ ಹೋರಾಟ ಮುಂದುವರಿಯಲಿದೆ ಅನ್ನುವ ಮೂಲಕ ನೌಕರರ ಹಾದಿ ತಪ್ಪಿಸಿದ್ದಾರೆ ಎನ್ನಲಾಗಿದೆ.
ಇನ್ನು ರೈತರ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗದ ಕೋಡಿಹಳ್ಳಿ, ಸಾರಿಗೆ ನೌಕರರ ಹೋರಾಟವನ್ನು ದಡ ಸೇರಿಸುತ್ತಾರೆಯೇ ಅನ್ನುವ ಪ್ರಶ್ನೆ ಎದ್ದಿದೆ.
Discussion about this post