ಮಂಗಳೂರು : ರಾಜ್ಯ ರಾಜಧಾನಿಯಲ್ಲೇ ಕೊರೋನಾ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಬುದ್ದಿವಂತರ ಜಿಲ್ಲೆಯಲ್ಲಿ ಮಾತ್ರ ಲಾಕ್ ಡೌನ್ ನಡುವೆಯೇ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಿದೆ. ಹಾಗಂತ ನಿಯಂತ್ರಣಕ್ಕೆ ಬರಲು ಸಾಧ್ಯವೂ ಇಲ್ಲ. ಕರ್ನಾಟಕದಲ್ಲಿ ಧಾರ್ಮಿಕ ಕೇಂದ್ರಗಳನ್ನು ಮುಚ್ಚಿದ್ರೆ, ದಕ್ಷಿಣ ಕನ್ನಡದ ಶ್ರೀಕ್ಷೇತ್ರ ಧರ್ಮಸ್ಥಳ ಸೇರಿದಂತೆ ಕೆಲ ದೇವಸ್ಥಾನಗಳು ಭಕ್ತರಿಗೆ ಬಾಗಿಲು ತೆರೆದಿತ್ತು. ಪರ ಊರಿನ ಮಂದಿ ಸಾಲು ಗಟ್ಟಿ ಬಂದ ಮೇಲೆ ನಿಯಂತ್ರಣಕ್ಕೆ ಬರುವುದಾದರೂ ಹೇಗೆ.
ಇದೀಗ ತಡವಾಗಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ದೇವಸ್ಥಾನಗಳನ್ನು ಕಡ್ಡಾಯವಾಗಿ ಭಕ್ತರಿಗೆ ಮುಚ್ಚುವಂತೆ ಆದೇಶಿಸಿದೆ. ಇನ್ನು ಭಕ್ತರ ದರ್ಶನಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಅನುಕೂಲ ಮಾಡಿಕೊಟ್ಟಿದ್ದರೂ ಈ ಬಗ್ಗೆ ಕ್ರಮ ಕೈಗೊಳ್ಳದ ಸ್ಥಳೀಯಾಡಳಿತವನ್ನು ಜಿಲ್ಲಾಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಜೊತೆಗೆ ಲಾಕ್ ಡೌನ್ ಇದ್ದರೂ ದೇವಸ್ಥಾನಗಳಲ್ಲಿ ಭಕ್ತರಿಗೆ ಅವಕಾಶ ಕೊಟ್ಟ ಹಿನ್ನಲೆಯಲ್ಲಿ ದೇವಸ್ಥಾನಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳ ಸೇರಿದಂತೆ ಕೆಲ ದೇವಸ್ಥಾನಗಳಿಗೆ ನೋಟೀಸ್ ಜಾರಿಯಾಗಿದ್ದು, ಲಾಕ್ ಡೌನ್ ಇದ್ದರೂ ಭಕ್ತರಿಗೆ ದರ್ಶನ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಕಾರಣ ಕೇಳಿದೆ. ಜೊತೆಗೆ ತಕ್ಷಣದಿಂದ ದರ್ಶನ ವ್ಯವಸ್ಥೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದೆ.
ಇದರೊಂದಿಗೆ ಹೊರಜಿಲ್ಲೆಗಳಿಂದ ಬರೋ ವಾಹನಗಳನ್ನು ಸೀಜ್ ಮಾಡಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಧರ್ಮಸ್ಥಳ. ಸುಬ್ರಹ್ಮಣ್ಯ ರಸ್ತೆ, ಪೆರಿಯಶಾಂತಿ,ಚಾರ್ಮಾಡಿ, ಉಜಿರೆ ಭಾಗಗಳಲ್ಲಿ ಬ್ಯಾರಿಕೇಡ್ ಹಾಕಿ ತಪಾಸಣೆ ಕಠಿಣಗೊಳಿಸುವಂತೆ ದಕ್ಷಿಣ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಸೂಚಿಸಿದ್ದಾರೆ.
Discussion about this post