ಬಯಲಲ್ಲಿ ಶೌಚ ಮಾಡಿದರು ಅನ್ನುವ ಕಾರಣಕ್ಕೆ ಇಬ್ಬರು ದಲಿತ ಮಕ್ಕಳನ್ನು ಗ್ರಾಮದ ಮಂದಿಯೇ ಹೊಡೆದು ಸಾಯಿಸಿದ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಸಿರ್ಸೋದ್ ಗ್ರಾಮದಲ್ಲಿ ನಡೆದಿದೆ.
ಬುಧವಾರ ಗ್ರಾಮದ ದಲಿತ ಕುಟುಂಬದಿಂದ ಬಂದಿರುವ 10ರ ಹರೆಯ ಬಾಲಕ ಮತ್ತು 12 ರ ಹರೆಯದ ಬಾಲಕಿ ಬಹಿರ್ದೆಸೆಗಾಗಿ ಹೋಗಿದ್ದರು.
ಈ ಸಂದರ್ಭದಲ್ಲಿ ಗ್ರಾಮದ ಹಕೀಮ್ ಯಾದವ್ ಮತ್ತು ರಾಮೇಶ್ವರ್ ಯಾದವ್ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ.
ಪಂಚಾಯತ್ ಭವನದ ಬಳಿ ಇರುವ ಬಯಲಿನಲ್ಲಿ ಮಕ್ಕಳು ಶೌಚ ಮಾಡುತ್ತಿದ್ದರು. ಆಗ ಅಲ್ಲಿಗೆ ಬಂದ ಹಕೀಂ ಯಾದವ್ ಮತ್ತು ರಾಮೇಶ್ವರ್ ಯಾದವ್ ಮಕ್ಕಳನ್ನು ಬೆದರಿಸಿದ್ದಾರೆ. ಬಳಿಕ ಲಾಠಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಘಟನೆ ಬಳಿಕ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಿದರೂ ಆಸ್ಪತ್ರೆಗೆ ತಲುಪುವ ಹೊತ್ತಿಗೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಮೊದಲಿಗೆ ಮಕ್ಕಳ ಫೋಟೋಗಳನ್ನು ಮೊಬೈಲ್ ಕ್ಲಿಕಿಸಿಕೊಂಡ ಪಾಪಿಗಳು ನಂತರ ಹಲ್ಲೆ ನಡೆಸಿದ್ದಾರೆ.
ಇದೀಗ ಆರೋಪಿಗಳನ್ನು ಬಂಧಿಸಿರುವ ಸಿರ್ಸೋಡ್ ಪೊಲೀಸರು SC / ST ದೌರ್ಜನ್ಯ ಕಾಯ್ದೆ ಹಾಗೂ ಸೆಕ್ಷನ್ 302ರಡಿಯಲ್ಲಿ ಆರೋಪಿಗಳ ವಿರುದ್ಧ FIR ದಾಖಲಿಸಿದ್ದಾರೆ.
ಈ ನಡುವೆ ವಿಚಾರಣೆ ವೇಳೆ ಆರೋಪಿಯೊಬ್ಬ, ದುಷ್ಟ ಶಕ್ತಿಗಳನ್ನು ನಾಶ ಮಾಡುವಂತೆ ದೇವರು ನನಗೆ ಆದೇಶ ನೀಡಿದ್ದಾನೆ. ಹೀಗಾಗಿ ಮಕ್ಕಳನ್ನು ಹತ್ಯೆ ಮಾಡಿರುವುದಾಗಿ ಹೇಳಿದ್ದಾನೆ.
ಹೀಗಾಗಿ ಮೂಢನಂಬಿಕೆ ಅಥವಾ ಅಸ್ಪೃಶ್ಯತೆಯೇ ಕಾರಣವೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Discussion about this post