ಮಂಗಳೂರು : ಅದೇನಾಗಿದೆಯೋ ಗೊತ್ತಿಲ್ಲ. ಕಳೆದ ಕೆಲವು ದಿನಗಳಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಇಲಾಖೆಯ ಎಡವಟ್ಟುಗಳೇ ಸುದ್ದಿಯಾಗುತ್ತಿದೆ.
ಅದರಲ್ಲೂ ಖಾಕಿಗಳ ಬಗ್ಗೆ ಅದರಲ್ಲೂ ಟ್ರಾಫಿಕ್ ಪೊಲೀಸರ ಬಗ್ಗೆ ಜನ ವ್ಯಕ್ತಪಡಿಸುತ್ತಿರುವ ಆಕ್ರೋಶ ನೋಡಿದರೆ ದಂಗೆಯೇಳುತ್ತಾರೋ ಅನ್ನುವ ಭಯ ಕಾಡುತ್ತಿದೆ.
ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಕರ್ನಾಟಕ ಪೊಲೀಸ್ ಪಡೆಯ ಮುಖ್ಯಸ್ಥರು ತಕ್ಷಣ ಟ್ರಾಫಿಕ್ ಪೊಲೀಸ್ ವಿಭಾಗಕ್ಕೆ ಬಿಸಿ ಮುಟ್ಟಿಸದೇ ಹೋದರೆ ಮುಂದೆ ದೊಡ್ಡದೊಂದು ಸಮಸ್ಯೆಯಾಗುವ ಎಲ್ಲಾ ಸಾಧ್ಯತೆಗಳಿದೆ.
ಮೊದಲಿಗೆ ಟ್ರಾಫಿಕ್ ಪೊಲೀಸರು ಕದ್ದು ಮುಚ್ಚಿ ವಾಹನ ಸವಾರರನ್ನು ಹಿಡಿಯುವ ಕೆಲಸವನ್ನು ಬಿಡಬೇಕು. ಜೊತೆಗೆ ನಡುರಸ್ತೆಗೆ ಬಂದು ವಾಹನ ಅಡ್ಡ ಹಾಕುವುದಕ್ಕೂ ಕಡಿವಾಣ ಬೀಳಬೇಕು. ಅದರಲ್ಲೂ ಮುಖ್ಯವಾಗಿ ಲಂಚ ಪಡೆಯುವುದು ಪೊಲೀಸರು ಮೊದಲು ಬಿಡಬೇಕು.
ಈಗೆಲ್ಲಾ ಪೊಲೀಸರು ಅಂದ್ರೆ ಅಭಯ ಕೊಡುವವರಲ್ಲ, ಭಯ ಹುಟ್ಟಿಸುವವರು ಅನ್ನುವಂತಾಗಿದೆ.
ಈ ನಡುವೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮಾಡಿದ ತಪ್ಪೊಂದನ್ನು ಒಪ್ಪಿಕೊಂಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಸೂಲಿ ಮಾಡಿದ ದಂಡವನ್ನು ಹಿಂತಿರುಗಿಸಿ ದೊಡ್ಡತನ ಮೆರೆದಿದ್ದಾರೆ.
ಆ ಐಪಿಎಸ್ ಅಧಿಕಾರಿಗಿದ್ದ ಮನಸ್ಥಿತಿ ಕೆಳಹಂತದ ಅಧಿಕಾರಿಗಳಿಗೂ ಇದ್ರೆ ಖಾಕಿ ವ್ಯವಸ್ಥೆ ಜನಸ್ನೇಹಿಯಾಗಿರುತ್ತದೆ.
ಇದೇ ತಿಂಗಳ 23 ರಂದು ರಾಮಲ್ ಕಟ್ಟೆಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು, ಪಾಣಿಮಂಗಳೂರು ಮೂಲದ ಅನಿಲ್ ಕೋಲ್ಪೆ ಚಲಾಯಿಸುತ್ತಿದ್ದ ಓಮ್ನಿ ವಾಹನವನ್ನು ಅಡ್ಡ ಹಾಕಿದ್ದಾರೆ.
ದಾಖಲೆಗಳೆಲ್ಲವನ್ನೂ ಪರಿಶೀಲಿಸಿದಾಗ ಎಲ್ಲವೂ ಸರಿ ಇತ್ತು. ಕೊನೆಗೆ ಪೊಲೀಸರು ದಂಡ ಹಾಕಿದ್ದು ಅನಿಲ್ ಕೋಲ್ಪೆಯವರು ಸಮವಸ್ತ್ರ ಧರಿಸಿಲ್ಲ ಅನ್ನುವ ಕಾರಣಕ್ಕಾಗಿ.ಚಾಲಕ ಯೂನಿಫಾರ್ಮ್ ಹಾಕಿಲ್ಲ ಎಂದು 500 ರೂಪಾಯಿ ಚೀಟಿ ಹಿರಿದಿದ್ದಾರೆ.
ಪಾಪ ಅನಿಲ್ ಕೋಲ್ಪೆಯವರು 500 ರೂಪಾಯಿ ದಂಡ ಕಟ್ಟಿದ್ದಾರೆ. ಮನೆಗೆ ಬಂದಾಗ ವಿಷಯ ಅನಿಲ್ ಅವರ ಮಗನಿಗೆ ಗೊತ್ತಾಗಿದೆ. ನಿಯಮಗಳ ಪ್ರಕಾರ ವೈಟ್ ಬೋರ್ಡ್ ವಾಹನ ಚಾಲಕರು, ಮಾಲೀಕರು ಯೂನಿಫಾರ್ಮ್ ಧರಿಸುವ ಅಗತ್ಯವಿಲ್ಲ. ಅಂತಹ ಕಾನೂನೇ ಇಲ್ಲ. ಅದೇನಿದ್ರೂ ಹಳದಿ ಬೋರ್ಡ್ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ.

ತಕ್ಷಣ ಪೊಲೀಸರ ಕಡೆಯಿಂದ ಆಗಿರುವ ಯಡವಟ್ಟನ್ನು ಅನಿಲ್ ಅವರ ಪುತ್ರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿಎಂ ಲಕ್ಷ್ಮಿ ಪ್ರಸಾದ್ ಗಮನಕ್ಕೆ ತಂದಿದ್ದಾರೆ.
ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ವರಿಷ್ಠಾಧಿಕಾರಿಗಳು ಸಮಸ್ಯೆ ಸರಿಪಡಿಸುವುದಾಗಿ ಹೇಳಿದ್ದಾರೆ. ಇದೀಗ ಕಾರು ಚಾಲಕನಿಗೆ ದಂಡ ವಿಧಿಸಿದ್ದ ಅಧಿಕಾರಿಗಳು ಹಣವನ್ನು ಹಿಂತಿರುಗಿಸಿದ್ದಾರೆ.
Discussion about this post